ಕರ್ನಾಟಕ

karnataka

ದೇಶದ ಎಲ್ಲ ರೈಲು ಮಾರ್ಗಗಳಲ್ಲಿ 'ಕವಚ' ಸುರಕ್ಷತಾ ವ್ಯವಸ್ಥೆ ಅಳವಡಿಕೆ: ಅಶ್ವಿನಿ ವೈಷ್ಣವ್ - Kavach System

By ETV Bharat Karnataka Team

Published : Aug 1, 2024, 9:28 PM IST

Updated : Aug 1, 2024, 9:59 PM IST

ರೈಲುಗಳ ಅಪಘಾತ ತಪ್ಪಿಸಲು ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ದೇಶದ ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಅಶ್ವಿನಿ ವೈಷ್ಣವ್
ರೈಲುಗಳ ಅಪಘಾತ ತಪ್ಪಿಸಲು 'ಕವಚ' ಸುರಕ್ಷತಾ ವ್ಯವಸ್ಥೆ (ETV Bharat)

ನವದೆಹಲಿ:ದೇಶದಲ್ಲಿ ರೈಲು ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಿದೆ. ರೈಲು ಅಪಘಾತಗಳನ್ನು ತಪ್ಪಿಸಲು ಜಾರಿಗೆ ತಂದಿರುವ 'ಕವಚ' ಸುರಕ್ಷತಾ ವ್ಯವಸ್ಥೆಯನ್ನು ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲು ನಿರ್ಧರಿಸಿದೆ.

ಲೋಕಸಭೆಯಲ್ಲಿ ಗುರುವಾರ ರೈಲ್ವೆ ಇಲಾಖೆಗೆ 7.89 ಲಕ್ಷ ಕೋಟಿ ರೂ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಿದ ಬಳಿಕ ಮಾತನಾಡಿದ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್​, "ರೈಲುಗಳ ಅಪಘಾತ ತಪ್ಪಿಸಲು ಅಭಿವೃದ್ಧಿಪಡಿಸಿರುವ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ದೇಶದ ಎಲ್ಲ ರೈಲು ಮಾರ್ಗಗಳಲ್ಲಿ ಅಳವಡಿಸಲಾಗುವುದು. ರೈಲ್ವೆಯ ಪ್ರತಿ ಹಳಿಗಳಲ್ಲಿ ಈ ಸುರಕ್ಷತಾ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನ ನಡೆಸಿದ್ದೇವೆ" ಎಂದು ಅವರು ಹೇಳಿದರು.

ಕಾಂಗ್ರೆಸ್​ ಸರ್ಕಾರದ ವೈಫಲ್ಯ:"ಹಿಂದಿನ ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ಪ್ರಯಾಣಿಕರ ಸುರಕ್ಷತೆಗಾಗಿ ಏನನ್ನೂ ಮಾಡಿಲ್ಲ. 58 ವರ್ಷಗಳ ಆಡಳಿತದಲ್ಲಿ 2014ರವರೆಗೆ ಒಂದು ಕಿಲೋ ಮೀಟರ್‌ಗೂ ಸ್ವಯಂಚಾಲಿತ ರೈಲು ಸುರಕ್ಷತಾ ವ್ಯವಸ್ಥೆಯಾದ ಕವಚವನ್ನು ಅಳವಡಿಸಿರಲಿಲ್ಲ. ಬರೀ ಪ್ರಯೋಗಗಳನ್ನು ಮಾತ್ರ ನಡೆಸಲಾಗಿತ್ತು. ಆದರೆ ಅದನ್ನು ಅನುಷ್ಠಾನಗೊಳಿಸಿರಲಿಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.

"ಯುಪಿಎ ಮತ್ತು ಎನ್​ಡಿಎ ಸರ್ಕಾರದ ಕಾರ್ಯಶೈಲಿ ವಿಭಿನ್ನವಾಗಿದೆ. ಈ ಹಿಂದೆ, ರೈಲ್ವೆ ಇಲಾಖೆಯಲ್ಲಿ ಕೇಂದ್ರೀಕೃತ ವಿಧಾನ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೆ ತಂದೆವು. ಹಲವು ಕಡೆ ಕವಚ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ಜಾರಿಗೆ ತರಲಾಗುವುದು" ಎಂದು ಭರವಸೆ ನೀಡಿದರು.

ಪ್ರಯಾಣಿಕರನ್ನು ಭಯಪಡಿಸುತ್ತಿರುವ ಕಾಂಗ್ರೆಸ್​:"ಪ್ರತಿಪಕ್ಷ ಕಾಂಗ್ರೆಸ್ ಮತ್ತು ಅದರ ಸಾಮಾಜಿಕ ಮಾಧ್ಯಮ ನೆಟ್​​ವರ್ಕ್​ ಪ್ರತಿದಿನ ರೈಲ್ವೆ ಸಂಚಾರವನ್ನು ಬಳಸುತ್ತಿರುವ 2 ಕೋಟಿಗೂ ಹೆಚ್ಚು ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಪ್ರತಿಯೊಂದು ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸುತ್ತಿದೆ. ಯುಪಿಎ ಆಡಳಿತದಲ್ಲಿ ರೈಲಿನ ರನ್ನಿಂಗ್ ರೂಮ್‌ಗಳಲ್ಲಿ ಹವಾನಿಯಂತ್ರಿತ ಕ್ಯಾಬಿನ್‌ಗಳನ್ನು ನೀಡಿರಲಿಲ್ಲ. ಅದನ್ನು ಸೃಷ್ಟಿಸಿದ್ದು ಮೋದಿ ಸರ್ಕಾರ" ಎಂದು ಹೇಳಿದರು.

"ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾನವರಹಿತ ರೈಲ್ವೆ ಲೆವಲ್​​ ಕ್ರಾಸಿಂಗ್​ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ರೈಲ್ವೆ ನಿಲ್ದಾಣಗಳ ನಡುವೆ ಎಲೆಕ್ಟ್ರಾನಿಕ್​ ಇಂಟರ್​ ಲಿಂಕಿಂಗ್​ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ರೈಲುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ" ಎಂದು ಮಾಹಿತಿ ನೀಡಿದರು.

ದೇಶದ ಪ್ರತಿ ರೈಲು ಹಳಿಗಳಲ್ಲಿ ಕವಚ ವ್ಯವಸ್ಥೆಯನ್ನು ಅಳವಡಿಸಲಾಗುವುದು ಎಂದು ತಿಳಿಸಿರುವ ರೈಲ್ವೆ ಸಚಿವರು, ಅದರ ಕಾಲಮಿತಿಯ ಬಗ್ಗೆ ಮಾಹಿತಿ ನೀಡಿಲ್ಲ.

ಇದನ್ನೂ ಓದಿ:ವಂದೇ ಭಾರತ್ ಮೊದಲ ಸ್ಲೀಪರ್ ರೈಲು ಮಾರ್ಗ ಫೈನಲ್: ಈ ನಗರದಿಂದ ಮುಂಬೈಗೆ ಓಡಲು ತಯಾರಿ - VANDE BHARAT SLEEPER ROUTE FINAL

Last Updated : Aug 1, 2024, 9:59 PM IST

ABOUT THE AUTHOR

...view details