ಬೆಂಗಳೂರು: ಕ್ರೀಡೆಯಲ್ಲಿ ಮತ್ತಷ್ಟು ಉನ್ನತ ಹಂತಕ್ಕೇರಲು ಭಾರತದ ಮುಂದಿರುವ ಪ್ರಮುಖ ಸವಾಲುಗಳು ಹಾಗೂ ಆ ನಿಟ್ಟಿನಲ್ಲಿ ಸಾಧಿಸಬೇಕಿರುವ ಘಟ್ಟಗಳ ಕುರಿತ ನೀಲನಕ್ಷೆಯನ್ನೊಳಗೊಂಡ 'ಸ್ಪೋರ್ಟ್ಸ್ ಫಾರ್ವರ್ಡ್ ನೇಷನ್' ಎಂಬ ಶೀರ್ಷಿಕೆಯ ವರದಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸ್ಪೋರ್ಟ್ಸ್ ಆ್ಯಂಡ್ ಸೊಸೈಟಿ ಆಕ್ಸಿಲರೇಟರ್ ಬಿಡುಗಡೆಗೊಳಿಸಿವೆ.
ಕ್ರೀಡಾ ವಲಯದ ಬೆಳವಣಿಗೆಗೆ ವಾಣಿಜ್ಯ, ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಸಾಮಾಜಿಕ ಪ್ರಭಾವ ಕ್ಷೇತ್ರಗಳನ್ನು ನಾಲ್ಕು ಪ್ರಮುಖ ಸ್ತಂಭಗಳೆಂದು ಈ ವರದಿ ಗುರುತಿಸಿದೆ. ಮತ್ತು ಆಯಾ ಕ್ಷೇತ್ರಗಳ ಪ್ರಮುಖರ ಅಭಿಪ್ರಾಯಗಳ ಆಧಾರದ ಮೇಲೆ ಸಮಗ್ರವಾಗಿ ಸ್ಪೋರ್ಟ್ಸ್ ಫಾರ್ವರ್ಡ್ ನೇಷನ್ ವರದಿಯನ್ನು ಸಿದ್ಧಪಡಿಸಲಾಗಿದೆ. ಕ್ರೀಡಾ ವಲಯದಲ್ಲಿ ಭಾರತದ ಸಾಧನೆಗಳ ಕುರಿತಂತೆ ಅದರಲ್ಲಿ ವಿವರಿಸಲಾಗಿದೆ. ಅಲ್ಲದೆ, ಕ್ರೀಡೆ ಮತ್ತು ದೈಹಿಕ ಚಟುವಟಿಕೆಯು ಉತ್ತಮವಾಗಿ ಸಂಯೋಜಿಸಲ್ಪಟ್ಟಿದ್ದು, ಆ ಮೂಲಕ ಕ್ರೀಡೆಯಲ್ಲಿ ತಳಮಟ್ಟದಿಂದ ಶ್ರೇಷ್ಠ ಮಟ್ಟದವರೆಗೆ ಪ್ರವೇಶಿಸಬಹುದಾಗಿದೆ ಎಂಬುದರ ಕುರಿತು ಉಲ್ಲೇಖಿಸಲಾಗಿದೆ.
ಆಂದೋಲನದ ಭಾಗವಾಗಲು ಬಹಳ ಸಂತಸವಾಗುತ್ತಿದೆ: ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ, ''ದೇಶಿ ಕ್ರಿಕೆಟ್, ಐಪಿಎಲ್ ಮತ್ತು ಈಗ ಮಹಿಳಾ ಐಪಿಎಲ್ (WPL) ಕ್ರಿಕೆಟ್ ಟೂರ್ನಿಗಳು ಒಂದು ಸದೃಢ ವ್ಯವಸ್ಥೆಯಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು ಎಂಬುದಕ್ಕೆ ಉತ್ತಮ ಉದಾಹರಣೆಗಳಾಗಿವೆ. ದೇಶಿ ಆಟಗಾರ್ತಿಯರು ಈಗ ಸ್ವತಂತ್ರ ಪ್ರದರ್ಶನ ನೀಡುತ್ತಿದ್ದಾರೆ. ಡಬ್ಲ್ಯೂಪಿಎಲ್ನಂತಹ ಪಂದ್ಯಾವಳಿಗಳಿಂದ ಸೂಕ್ತ ಮಾನ್ಯತೆ ಪಡೆಯುತ್ತಿದ್ದಾರೆ. ಕ್ರೀಡಾ ಕ್ಷೇತ್ರದ ಇಂತಹ ಪ್ರತಿಭೆಗಳನ್ನು ಮುಂದಿನ ದಿನಗಳಲ್ಲಿಯೂ ನೋಡುವುದು ಸ್ಪೂರ್ತಿದಾಯಕವಾಗಿರುತ್ತದೆ. ಭಾರತದಾದ್ಯಂತ ಕ್ರೀಡೆಗಳನ್ನು ಆದ್ಯತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಆರ್ಸಿಬಿ ಜೊತೆಗಿನ ಈ ಆಂದೋಲನದ ಭಾಗವಾಗಲು ನನಗೆ ಬಹಳ ಸಂತಸವಾಗುತ್ತಿದೆ'' ಎಂದು ತಿಳಿಸಿದರು.
"ಹೆಚ್ಚಿನ ಹುಡುಗಿಯರು ಕ್ರೀಡೆಯಲ್ಲಿ ಪಾಲ್ಗೊಂಡು ಯಶಸ್ಸು ಕಾಣುವುದನ್ನು ನಾನು ನೋಡಲು ಬಯಸುತ್ತೇನೆ. ನಾವು ನಮ್ಮ ಯಶಸ್ಸನ್ನು ಹಂಚಿಕೊಳ್ಳುವ ಮೂಲಕ ಕ್ರೀಡೆಗಳಲ್ಲಿ ಸಕಾರಾತ್ಮಕ ಬದಲಾವಣೆಗೆ ತರಲು ಸಾಧ್ಯವಾದರೆ, ಅದು ಪ್ರಮುಖ ಸಂಗತಿ" ಎಂದು ಸ್ಮೃತಿ ಮಂಧಾನ ಹೇಳಿದರು.
ಭಾರತ ಚಾಂಪಿಯನ್ ರಾಷ್ಟ್ರವಾಗಬೇಕಿದೆ: ಆರ್ಸಿಬಿ ಚೀಫ್ ಆಪರೇಟಿಂಗ್ ಆಫಿಸರ್ ರಾಜೇಶ್ ಮೆನನ್ ಮಾತನಾಡಿ, ''ಭಾರತೀಯ ಕ್ರೀಡೆಗಳ ಬೆಳವಣಿಗೆಯ ಕಥೆಯಲ್ಲಿ ಕೇಂದ್ರ ಭಾಗವಾಗುವುದೇ ನಮ್ಮ ಆರ್ಸಿಬಿಯ ಸ್ಪಷ್ಟ ಉದ್ದೇಶ. ಗಡಿಯಾರದಂತೆ ಚಲಿಸುವ ವ್ಯವಸ್ಥೆಯನ್ನು ಹೊಂದಿರುವ ಸ್ಪೋರ್ಟ್ಸ್ ಫಾರ್ವರ್ಡ್ ನೇಷನ್ ವರದಿಯು ನಾವೆಲ್ಲರೂ ಆಶಿಸುವ ಕನಸಾಗಿದ್ದು, ಭಾರತವು ಆ ಹಾದಿಯಲ್ಲಿದೆ. ಕ್ರೀಡೆಯಲ್ಲಿ ಚಾಂಪಿಯನ್ ರಾಷ್ಟ್ರವಾಗಲು, ನಮ್ಮ ಕ್ರೀಡಾಪಟುಗಳಿಗೆ ಸೂಕ್ತ ವಾತಾವರಣವನ್ನು ನಾವು ಒದಗಿಸಬೇಕಿದೆ. 'ಸ್ಪೋರ್ಟ್ಸ್ ಫಾರ್ವರ್ಡ್ ನೇಷನ್' ವರದಿಗೆ ಕಾರಣವಾದ ಮೇಡ್ ಆಫ್ ಬೋಲ್ಡ್ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮ ಮತ್ತು ಆರ್ಸಿಬಿ ಇನ್ನೋವೇಶನ್ ಲ್ಯಾಬ್, ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆಯಂತಹ ವೇದಿಕೆಗಳು ಕ್ರೀಡಾ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನಮ್ಮ ಬದ್ಧತೆಗೆ ಉದಾಹರಣೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾವು ಭಾವಿಸುತ್ತೇವೆ" ಎಂದು ತಿಳಿಸಿದರು.
2023ರ ನವೆಂಬರ್ನಲ್ಲಿ ನಡೆದ ಆರ್ಸಿಬಿ ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆಯಲ್ಲಿ ಚರ್ಚಿತ ವಿಷಯಗಳ ಆಧಾರದ ಮೇಲೆ 'ಸ್ಪೋರ್ಟ್ಸ್ ಫಾರ್ವರ್ಡ್ ನೇಷನ್' ವರದಿಯನ್ನು ಸಿದ್ಧಪಡಿಸಲಾಗಿದೆ. ಇಂಡಿಯನ್ ಸ್ಪೋರ್ಟ್ಸ್ ಶೃಂಗಸಭೆಯು ಕ್ರೀಡೆ ಬಗ್ಗೆ ಸಮಗ್ರ ದೃಷ್ಟಿಕೋನದಿಂದ ಚರ್ಚಿಸಲು ಭಾರತದ ಮೊದಲ ಅಂತರಾಷ್ಟ್ರೀಯ ವೇದಿಕೆಯಾಗಿತ್ತು. ಭಾರತದ ಜಿ20 ಶೆರ್ಪಾ ಶ್ರೀ ಅಮಿತಾಭ್ ಕಾಂತ್, ಒಲಿಂಪಿಯನ್ಗಳಾದ ಅಭಿನವ್ ಬಿಂದ್ರಾ ಮತ್ತು ನೀರಜ್ ಚೋಪ್ರಾ, ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಂ, ಭಾರತದ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಹಾಗೂ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ರಂತಹ ಪ್ರಮುಖರಿಂದ ಈ ವರದಿಗೆ ಅಭಿಪ್ರಾಯಗಳನ್ನು ಪಡೆಯಲಾಗಿದೆ.
ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಏಕದಿನ ಸರಣಿ: 15 ತಿಂಗಳ ಬಳಿಕ ತಂಡ ಸೇರಿದ ಸ್ಪೋಟಕ ಬ್ಯಾಟರ್!