ಧಾರವಾಡ: ಫೆ.22ರಿಂದ 25ರವರೆಗೆ 4 ದಿನಗಳ ಕಾಲ ನಿರ್ದಿಂಗತ ನಾಟಕೋತ್ಸವವನ್ನು ಕೆಸಿಡಿಯ ಸೃಜನಾ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಧಾರವಾಡದ ರಂಗಾಯಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ನಿರ್ದಿಂಗತದ ನಾಟಕೋತ್ಸವ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ರಂಗಭೂಮಿ ಒಂದು ಕಾಲದಲ್ಲಿ ವಿಜೃಂಭಿಸುತ್ತಿತ್ತು. ಇತ್ತೀಚೆಗೆ ರಂಗಭೂಮಿ, ಸಿನಿಮಾ ಬೆಂಗಳೂರು ಕೇಂದ್ರೀಕೃತವಾಗಿದೆ. ರಂಗಭೂಮಿ ಬಹಳ ಜೀವಂತವಾಗಿರೋದು. ಹೊಸ ಚೈತನ್ಯ ಕಟ್ಟುವ ಕೆಲಸ ಆಗಬೇಕು. ಅದಕ್ಕಾಗಿ ನಿರ್ದಿಂಗತ ಈ ಕೆಲಸ ಮಾಡುತ್ತಿದೆ. ಒಂದು ಉತ್ಸವದ ವಾತಾವರಣ ಸೃಷ್ಟಿಯಾಗಬೇಕು. ಧಾರವಾಡದಲ್ಲಿ ಸ್ಥಳೀಯ ರಂಗಭೂಮಿಗೆ ಒತ್ತು ಕೊಡುತ್ತೇವೆ ಎಂದರು.
ಉತ್ತರ ಕರ್ನಾಟಕದ 80 ಪ್ರತಿನಿಧಿಗಳು ಭಾಗಿಯಾಗುತ್ತಾರೆ. ಸೃಜನಾದಲ್ಲಿ ಇದೊಂದು ರಂಗಭೂಮಿ ಹಬ್ಬ ಆಗಲಿದೆ. ಅನೇಕ ಸಾಹಿತಿಗಳೂ ಸಹ ಬರುತ್ತಾರೆ. ನಾಟಕದ ಜೊತೆಗೆ ಗೋಷ್ಠಿ, ಚರ್ಚೆಗಳೂ ಇರುತ್ತವೆ. ಈ ಭಾಗದ ಕಲಾವಿದರೇ ಇರುತ್ತಾರೆ. ನಮ್ಮ ಕಥೆ, ನಮ್ಮ ಹಾಡುಗಳನ್ನು ನಾವು ಸಂಭ್ರಮಿಸಬೇಕು. ಉತ್ತರ ಕರ್ನಾಟಕದ ಪ್ರತಿಭೆಗಳು ಸಂಭ್ರಮಿಸಬೇಕು. ಅದಕ್ಕಾಗಿ ಈ ಉತ್ಸವ ಆಯೋಜಿಸಿದ್ದೇವೆ ಎಂದು ತಿಳಿಸಿದರು.
ನಮ್ಮ ರಂಗ ಚಟುವಟಿಕೆಗೆ ಸರ್ಕಾರದ ಸಹಾಯ ಬೇಡ. ನಿರ್ದಿಂಗತಕ್ಕೆ ಸರ್ಕಾರಿ ಅನುದಾನ ಬೇಕಿಲ್ಲ. ಯಾವುದೇ ಸರ್ಕಾರ ಬಂದರೂ ಅವರ ಆಲೋಚನೆಗಳನ್ನು ಹೇಳುತ್ತಾರೆ. ಹೀಗಾಗಿ ನಾವು ಸ್ವಯಂ ಆಗಿ ಮಾಡಿಕೊಳ್ಳುತ್ತೇವೆ. ರಂಗಭೂಮಿಯವರು ಬಹಳ ಶ್ರೀಮಂತರು. ಆ ಶ್ರೀಮಂತಿಕೆಯನ್ನು ಹಣದಿಂದ ಅಳೆಯಬೇಕಿಲ್ಲ ಎಂದರು.
ರಂಗಾಯಣಗಳಿಗೆ ಅನುದಾನ ನೀಡದ ವಿಚಾರಕ್ಕೆ ಮಾತನಾಡಿದ ಅವರು, ಸರ್ಕಾರಗಳೆದುರು ಎಷ್ಟು ಅಂತಾ ಕೈ ಚಾಚಿ ನಿಲ್ಲಬೇಕು?. ರಂಗ ಉತ್ಸವಗಳನ್ನು ನೋಡಿ ಅವರಿಗೆ ಬುದ್ಧಿ ಬರಬೇಕು. ಪ್ರಗತಿಶೀಲರು, ನಾಟಕಕಾರರು, ಬರಹಗಾರರು ಒಂದಾಗಬೇಕು. ಒಂದಾಗಿ ಅನುದಾನ ಕೇಳುವಂತಾಗಬೇಕು. ಒಂದು ಸಲ ಸೇರಲು ಶುರು ಮಾಡಬೇಕು. ಆಗ ಸರ್ಕಾರಕ್ಕೂ ಗೊತ್ತಾಗುತ್ತದೆ ಎಂದು ಉತ್ತರಿಸಿದರು.
ಕುಂಭಮೇಳದ ಎಡಿಟೆಡ್ ಫೋಟೋ ಹರಿಬಿಟ್ಟ ವಿಚಾರಕ್ಕೆ ಮಾತನಾಡಿ, ನಾನು ನಿರ್ದಿಂಗತ ನಾಟಕದ ಬಗ್ಗೆ ಮಾತನಾಡುವೆ ಅಷ್ಟೇ. ಸುಳ್ಳು ಸುದ್ದಿಗಳನ್ನು ನಾವೇ ಹಬ್ಬಿಸಬಾರದು. ಫೋಟೋ ಮಾಡಿದ್ದು ಅಕ್ಷಮ್ಯ ಅಪರಾಧ. ಅದರ ಬಗ್ಗೆ FIR ಆಗಿದೆ, ಉತ್ತರ ಕೊಡಬೇಕಾಗುತ್ತದೆ. ಕಳ್ಳರು-ಸುಳ್ಳರ ಬಗ್ಗೆ ಯಾಕೆ ಮಾತು? ಎಂದು ಹೇಳಿದರು.
ಇದನ್ನೂ ಓದಿ: ಎಲ್ಲ ಸರ್ಕಾರಗಳು ರೈತ ವಿರೋಧಿ, ಜನ ವಿರೋಧಿಯಾಗಿವೆ: ನಟ ಪ್ರಕಾಶ್ ರಾಜ್ - PRAKASH RAJ