ಕರ್ನಾಟಕ

karnataka

ಕಡಲಿಗಿಳಿಯುವ ಕೆಚ್ಚೆದೆಯ ಯುವತಿ; ಮೀನು ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಸಾಧಿಸಿದ ಛಲಗಾತಿ - From Fisher Girl To Entrepreneur

By ETV Bharat Karnataka Team

Published : Jul 25, 2024, 10:54 PM IST

Updated : Jul 26, 2024, 5:30 PM IST

"ನೆರೆಹೊರೆಯವರೆಲ್ಲ ಮಗಳನ್ನು ಸಮುದ್ರಕ್ಕೆ ಕರೆದುಕೊಂಡು ಹೋಗುವುದಕ್ಕೆ ವಿರುದ್ಧವಾಗಿ ಮಾತನಾಡಿದರು. ಮಗಳ ಯಶಸ್ಸು ಹಾಗೂ ಖುಷಿಯ ಮಧ್ಯದಲ್ಲಿ ಆ ಮಾತುಗಳು ಸಣ್ಣದಾಗಿ ಕಂಡವು" ಎನ್ನುವುದು ಸುಭಿಕ್ಷಾ ಅವರ ತಂದೆಯ ಹೆಮ್ಮೆಯ ಮಾತುಗಳು.

FROM FISHER GIRL TO ENTREPRENEUR
ಸುಭಿಕ್ಷಾ ಯಶೋಗಾಥೆ (ETV Bharat)

ತೂತುಕುಡಿ(ತಮಿಳುನಾಡು):"ಹುಟ್ಟಿದ ಮೇಲೆ ಏನಾದರೂ ಸಾಧಿಸಿಯೇ ಸಾಯಬೇಕು. ಹೆಣ್ಣಾಗಿ ಹುಟ್ಟಿ, ದೊಡ್ಡವಳಾಗುತ್ತಿದ್ದಂತೆ ಮದುವೆ, ಎರಡು ವರ್ಷಕ್ಕೆ ಕಂಕುಳಲ್ಲೊಂದು ಮಗು ಎತ್ತುಕೊಳ್ಳೋದೇ ಸಾಧನೆ ಅಲ್ಲ" ಎನ್ನುವ ಛಲಗಾತಿ ಈ ಯುವತಿ.

ತೂತುಕುಡಿ ಜಿಲ್ಲೆಯಲ್ಲಿ ಪೆರಿಯಾದಲ್​ ಎಂಬ ಮೀನುಗಾರರ ಗ್ರಾಮವಿದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು, ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿವೆ. ಸಾಮಾನ್ಯವಾಗಿ ಗಂಡಸರು ದೋಣಿ ಹಿಡಿದು ಸಮುದ್ರಕ್ಕಿಳಿದರೆ, ಮಹಿಳೆಯರು ಮೀನು ಮಾರುವ ಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತಾರೆ. ಆದರೆ, ಈ ಎಲ್ಲಾ ಅಡೆತಡೆಗಳನ್ನು ಮೀರಿ, ದೋಣಿಯಲ್ಲಿ ಸಮುದ್ದಕ್ಕಿಳಿದು ಮೀನುಗಳಿಗೆ ಬಲೆ ಬೀಸಿದ ಧೀರೆಯ ಹೆಸರು ಸುಭಿಕ್ಷಾ. ಮಹಿಳೆಯರು ಕೂಡ, ಕುಟುಂಬ, ಲಿಂಗ, ಕಟ್ಟುಪಾಡುಗಳು ಎನ್ನುವಂತಹ ಅಡೆತಡೆಗಳನ್ನು ಮೀರಿ ಸಾಧನೆ ಮಾಡಬೇಕು ಎನ್ನುವುದು ಇವರ ಆಸೆ.

ಸುಭಿಕ್ಷಾ ಯಶೋಗಾಥೆ (ETV Bharat)

ಓದಿದ್ದು ಇಂಗ್ಲೀಷ್​ ಸಾಹಿತ್ಯದಲ್ಲಿ ಬಿಎ, ಆದರೆ ಇಳಿದಿದ್ದು ಮಾತ್ರ ಸಮುದ್ರಕ್ಕೆ. ತನ್ನದೇ ಮನೆಯವರು, ನೆರೆಹೊರೆಯವರು, ಮಹಿಳೆಯರು, ಸಮಾಜ ಹೀಗೆ ಎಲ್ಲರ ಗೇಲಿ ಮಾತುಗಳನ್ನು ದಾಟಿ ಸುಭಿಕ್ಷಾ ಇಂದು ತಮಿಳುನಾಡಿನಲ್ಲೇ ಮೊದಲ ಮಹಿಳಾ ಸಮುದ್ರ ವ್ಲಾಗರ್ (ಸೀ ವ್ಲಾಗರ್)​​ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಸುಭಿಕ್ಷಾ ಈಗ ಉದ್ಯಮಿಯೂ ಹೌದು. ಸುಭಿಕ್ಷಾ ಮಾಡುವ ಮೀನಿನ ಉಪ್ಪಿನಾಯಿ ಈಗ ತಮಿಳುನಾಡು ಮಾತ್ರವಲ್ಲದೆ, ರಾಜ್ಯಗಳನ್ನು ದಾಟಿ ದೆಹಲಿವರೆಗೂ ಪ್ರಸಿದ್ಧಿ ಪಡೆದಿದೆ.

ನಕ್ಕವರು, ಹಾಸ್ಯ ಮಾಡಿದವರ ಮುಂದೆ ತಲೆ ಎತ್ತಿ ನಿಂತ ಸುಭಿಕ್ಷಾ:ಇವರ ಸಾಧನೆಯ ಬಗ್ಗೆ ಅವರದ್ದೇ ಮಾತುಗಳಲ್ಲಿ ಕೇಳುವುದಾದರೆ, "ಕಾಲೇಜು ಮುಗಿಸಿ, ಏನಾದರೂ ಮಾಡಬೇಕು ಎಂದು ಯೋಚಿಸಿದಾಗ, ಸೀ ವ್ಲಾಗಿಂಗ್​ ಮಾಡುವ ಎನಿಸಿತು. ತಮಿಳುನಾಡಿನಲ್ಲಿಯೇ ಮೊದಲ ಮಹಿಳಾ ಸೀ ವ್ಲಾಗರ್​ ನಾನು ಎನ್ನುವ ಹೆಮ್ಮೆ ನನಗಿದೆ. ಆದರೆ ಅದರ ಹಿಂದೆ ಸಾಕಷ್ಟು ನೋವುಗಳಿವೆ. ಆರಂಭದಲ್ಲಿ ಅಪ್ಪನ ಜೊತೆ ಸಮುದ್ರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದಾಗ, ಬೈದ್ರು, ನಕ್ಕರು, ಹಾಸ್ಯ ಮಾಡಿದ್ರು. ಆದರೆ ಅದೆಲ್ಲಕ್ಕೆ ನಾನು ತಲೆಕೆಡಿಸಿಕೊಳ್ಳಲೇ ಇಲ್ಲ. ನಾನು ಬರ್ತೇನೆ ಎನ್ನುವಾಗ ಸಮಾಧಾನ ಮಾಡಿ ಬಿಡುತ್ತಿದ್ದರು. ನಾನು ಅಷ್ಟು ಬೇಗ ಬೆಳಗ್ಗೆ ಎದ್ದೇಳಲ್ಲ ಎಂದು ಹಾಗೆ ಹೇಳುತ್ತಿದ್ದರು. ಆದರೆ, ಅವರು ಎದ್ದೇಳುವಾಗ ನಾನು ಕೂಡ ಎದ್ದೇಳ್ತಿದ್ದೆ. ಆದರೆ ಅವರು ನನ್ನನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹೀಗೆ, ವಾರ, ತಿಂಗಳ ಕಾಲ ಅವರು ಎದ್ದೇಳುವಾಗ, ನಾನೂ ಎದ್ದು ಕೂತು, ಬರುವುದಾಗಿ ಹೇಳುತ್ತಿದ್ದೆ. ತುಂಬಾ ಹಠ ಮಾಡಿದಾಗ, ಬೇರೆ ದಾರಿಯಿಲ್ಲದೇ ಒಂದು ದಿನ ಕರೆದುಕೊಂಡು ಹೋಗಲು ನಿರ್ಧರಿಸಿದರು. ಒಂದೇ ದಿನಕ್ಕೆ ವಾಂತಿ ಮಾಡುತ್ತೇನೆ, ಸುಸ್ತಾಗುತ್ತೇನೆ ಅಂದುಕೊಂಡ್ರು. ಆದರೆ ಅವರ ಯೋಚನೆಯನ್ನೇ ನಾನು ಸುಳ್ಳು ಮಾಡಿದ್ದೆ. ನಂತರದ ದಿನಗಳಲ್ಲಿ ಪ್ರತಿದಿನ ಕರೆದುಕೊಂಡು ಹೋಗಲು ಪ್ರಾರಂಭಿಸಿದರು. 1 ವರ್ಷದಿಂದ ಕಡಲಿಗೆ ಹೋಗುತ್ತಿದ್ದೇನೆ. ಹೋಗಿ ವಿಡಿಯೋ ಮಾಡಲು ಪ್ರಾರಂಭಿಸಿದೆ. ಹೀಗೆ ನನ್ನ ಸಮುದ್ರದಲ್ಲಿ ಸಾಧನೆಯ ಈಜಾಟ ಪ್ರಾರಂಭವಾಯಿತು." ಎಂದು ವಿಶ್ವಾಸದ ಮಾತುಗಳನ್ನಾಡುತ್ತಾರೆ ಸುಭಿಕ್ಷಾ.

ಸುಭಿಕ್ಷಾ ಯಶೋಗಾಥೆ (ETV Bharat)

ತಮಿಳುನಾಡಿಗೆ ಹೆಸರು ಗೊತ್ತಾಗುವಂಥಾ ಸಾಧನೆ ಮಾಡಿದ ಧೀರೆ:"ಹೀಗಿದ್ದರೂ, ನನ್ನ ಕುಟುಂಬದವರು, ನೆರೆಹೊರೆಯವರು, ತುಂಬಾ ಜನರು ನನ್ನ ವಿರುದ್ಧವಾಗಿಯೇ ಇದ್ದರು. ಹೆಣ್ಣಲ್ವ ನೀನು, ಯಾಕೆ ಹೀಗೆಲ್ಲಾ ಹೋಗ್ತೀದೀಯಾ? ಮದುವೆ ಮಾಡಿಕೊಳ್ಳುವುದಲ್ಲವಾ? ಅಂತೆಲ್ಲಾ ಕೇಳ್ತಿದ್ರು. ಆದರೆ ನಾನು ಅದ್ಯಾವುದನ್ನೂ ತಲೆಗೆ ಹಚ್ಚಿಕೊಂಡಿಲ್ಲ. ಆದರೆ ನನಗೆ ಸುಮ್ಮನೆ ಹುಟ್ಟುತ್ತೇವೆ, ಮದುವೆ ಆಗುತ್ತೇವೆ, ಮಕ್ಕಳನ್ನು ಹೆರುತ್ತೇವೆ ಅಂತಿರಬಾರದು. ಹುಟ್ಟಿದ್ದೇವಾ, ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು. ನನ್ನ ಹೆಸರು ಈ ಊರು, ತಮಿಳುನಾಡಿಗೆ ತಿಳಿಯುವಂತಾಗಲು ಏನಾದರೂ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ಅದಕ್ಕಾಗಿ ಏನು ಮಾಡಬೇಕು ಅದನ್ನು ನಿರಂತರವಾಗಿ ಮಾಡುತ್ತಿದ್ದೇನೆ."

ಸುಭಿಕ್ಷಾ ಯಶೋಗಾಥೆ (ETV Bharat)

ವ್ಲಾಗಿಂಗ್​ ಜತೆ ಮೀನಿನ ಉಪ್ಪಿನಕಾಯಿ ಉದ್ಯಮ ಆರಂಭಿಸಿ ಜಗದ್ವಿಖ್ಯಾತಿ:"ವ್ಲಾಗಿಂಗ್​ ಆಯ್ತು, ಇನ್ನೇನು ಮಾಡಬೇಕು ಎಂದು ಯೋಚಿಸಿದಾಗ, ಮೀನಿನ ಉಪ್ಪಿನಕಾಯಿ (Fish Pickle) ಮಾಡುವ ಸಣ್ಣ ಉದ್ಯಮವನ್ನು ಪ್ರಾರಂಭಿಸಿದೆ. ಸೀಗಡಿ, ಏಡಿ, ಬೋಂಡಾಸ್​, ಅಂಜಲ್​ ಹೀಗೆ ಸುಮಾರು 7ಕ್ಕೂ ಹೆಚ್ಚು ಬಗೆಯ ಮೀನುಗಳ, ವಿಶೇಷವಾಗಿ ಒಣಮೀನಿನ ಉಪ್ಪಿನಾಯಿಯನ್ನು ತಯಾರಿಸುತ್ತೇನೆ. ಪ್ರಾರಂಭದಲ್ಲಿ ಉಪ್ಪಿನಕಾಯಿಯ ರೆಸಿಪಿ, ಆ ಒರಿಜಿನಲ್​ ರುಚಿ ಸಿಗಲು ತುಂಬಾ ಕಷ್ಟ ಪಡಬೇಕಾಯಿತು. ಆ ಸಮಯದಲ್ಲಿ ಸಾಕಷ್ಟು ಹಣ ನಷ್ಟ ಆಯ್ತು. ನಂತರ ರುಚಿ ಸಿಕ್ಕಿತು, ಈಗ ತಮಿಳುನಾಡಿನ ಅಂಗಡಿಗಳಿಗೆ ಮಾತ್ರವಲ್ಲ ಬೆಂಗಳೂರು, ದೆಹಲಿಯಂತಹ ದೂರದ ರಾಜ್ಯಗಳಿಗೆ ಜೊತೆಗೆ ವಿದೇಶಕ್ಕೂ ನಮ್ಮ ಮೀನಿನ ಉಪ್ಪಿನಕಾಯಿ ಹೋಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಸುಭಿಕ್ಷಾ ಯಶೋಗಾಥೆ (ETV Bharat)

"ದೇಹದೊಳಗೆ, ಮನಸ್ಸೊಳಗೆ, ಮನೆಯೊಳಗೆ, ಕಡಲೊಳಗೂ ಅನೇಕ ಸಮಸ್ಯೆಗಳು ಬಂತು. ಆದರೂ ಅವುಗಳೆಲ್ಲವನ್ನೂ ದಾಟಿ, 'ನಿನ್ನಿಂದು ಇದು ಸಾಧ್ಯ ಸುಭಿಕ್ಷಾ' ಎಂದು ನನ್ನನ್ನು ನಾನೇ ಪ್ರೇರೇಪಿಸುತ್ತಾ ಬಂದೆ. ಆ ಪ್ರೇರಣೆಯೇ ನನ್ನನ್ನು ಉತ್ತಮವಾಗಿ ಕೊಂಡೊಯ್ಯುತ್ತಿದೆ. ಯಾವಾಗಲೂ ಇಂತಹ ಮನಸ್ಥೈರ್ಯ ಎಲ್ಲಾ ಹೆಣ್ಣುಮಕ್ಕಳಿಗೂ ಬರಬೇಕು ಎನ್ನುವುದು ನನ್ನ ಆಸೆ. ಆದರೆ, ನಮ್ಮ ಗ್ರಾಮದಲ್ಲೇ ಹೆಣ್ಣು ಮಕ್ಕಳು ಹುಟ್ಟುತ್ತಾರೆ, ಕಾಲೇಜುವರೆಗೆ ಓದುತ್ತಾರೆ. ಒಂದು ಹುಡುಗನನ್ನು ನೋಡಿ ಮದುವೆ ಮಾಡುತ್ತಾರೆ. ಮಕ್ಕಳನ್ನು ಹೆರುತ್ತಾರೆ. ಇದರಲ್ಲೇನಿದೆ ವಿಶೇಷ. ಹೆಣ್ಣಾಗಿ ನಿಮಗೆ ಇಷ್ಟವಾದದ್ದನ್ನು ಮಾಡಬೇಕು. ಜೀವನದಲ್ಲಿ ನೀವಂದುಕೊಂಡದ್ದನ್ನು ಸಾಧನೆ ಮಾಡಬೇಕು. ಅದಕ್ಕಾಗಿ ಎಲ್ಲರ ಹಾಗೇ ನಾನಿರದೇ, ನನ್ನ ಥರ ಇರಲು ಎಲ್ಲರೂ ಆಸೆ ಪಡುವಂತೆ ಬೆಳೆಯಲು ಬಯಸಿದ್ದೇನೆ. ಆ ದಾರಿಯಲ್ಲೇ ಇದ್ದೇನೆ. ನನ್ನನ್ನು ನೋಡಿ ಅನೇಕ ಹೆಣ್ಣು ಮಕ್ಕಳು ಮುಂದೆ ಬರುತ್ತಾರೆ ಎನ್ನುವ ನಂಬಿಕೆ ನನಗಿದೆ." ಎನ್ನುವ ವಿಶ್ವಾಸ ಸುಭಿಕ್ಷಾ ಅವರದು.

ಸುಭಿಕ್ಷಾ ಯಶೋಗಾಥೆ (ETV Bharat)

ಮೊದ ಮೊದಲು ಬೇಡೆ ಎಂದೆ ಹಠ ಮಾಡಿದಾಗ ಕರೆದುಕೊಂಡು ಹೋದೆ:ಸುಭಿಕ್ಷಾ ಅವರ ತಂದೆ ಕುಮಾರ್​, "ಮಗಳು ಸಮುದ್ರಕ್ಕೆ ಬರುತ್ತೇನೆ ಎಂದು ಆಸೆ ಪಟ್ಟಾಗ, ನಿರಾಕರಿಸಿದ್ದೆ. ಆದರೆ ಅವಳು ಬರುತ್ತೇನೆ ಎಂದು ಹಠ ಹಿಡಿದಾಗ, ನನ್ನ ಜೊತೆ ಕರೆದುಕೊಂಡು ಹೋದೆ. ಮೊದಲ ದಿನವೇ ಹುಡುಗಿ, ವಾಂತಿ ಮಾಡಿ ಭಯಪಡುತ್ತಾಳೆ ಎಂದುಕೊಂಡೆ. ಆದರೆ ಮಗಳು ಛಲಗಾತಿ. ನೆರೆಹೊರೆಯವರೆಲ್ಲ ಮಗಳನ್ನು ಸಮುದ್ರಕ್ಕೆ ಕರೆದುಕೊಂಡು ಹೋಗುವುದಕ್ಕೆ ವಿರುದ್ಧವಾಗಿ ಮಾತನಾಡಿದರು. ಮಗಳ ಯಶಸ್ಸು ಹಾಗೂ ಖುಷಿಯ ಮಧ್ಯದಲ್ಲಿ ಆ ಮಾತುಗಳು ಸಣ್ಣದಾಗಿ ಕಂಡವು. ನಾವು ಸುಮಾರು 10 ಮೈಲುಗಳಷ್ಟು ದೂರಕ್ಕೆ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತೇವೆ. ಅಲ್ಲಿಯವರೆಗೂ ಬರುತ್ತಾಳೆ" ಎಂದು ಮಗಳ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಸುಭಿಕ್ಷಾ ಅವರು ತಮ್ಮ ಕಡಲೊಳಗಿನ ಹಾಗೂ ಸಾಧನೆಯ ಪಯಣವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವರ ಇನ್​ಸ್ಟಾಗ್ರಾಂ ಪೇಜ್​ಗೆ 2 ಲಕ್ಷ ಫಾಲೋವರ್ಸ್​ ಇದ್ದಾರೆ ಎನ್ನುವುದು ಗಮನಾರ್ಹ.

ಇದನ್ನೂ ಓದಿ:ಬಡತನದಲ್ಲಿ ಅರಳಿದ ಯುವ ಪ್ರತಿಭೆ: ಪ್ರತಿಷ್ಠಿತ ಕಂಪನಿಯಲ್ಲಿ ₹ 52 ಲಕ್ಷ ಪ್ಯಾಕೇಜ್‌, ರೈತನ ಮಗಳ ಯಶೋಗಾಥೆ - Young Woman Got Rs 52 Lakhs Package

Last Updated : Jul 26, 2024, 5:30 PM IST

ABOUT THE AUTHOR

...view details