ಕರ್ನಾಟಕ

karnataka

ETV Bharat / bharat

ಕೆಫೆ ಬಾಂಬ್ ಹೇಳಿಕೆ ವಿಚಾರ: ಪ್ರಕರಣ ರದ್ದು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಶೋಭಾ ಕರಂದ್ಲಾಜೆ - Shobha Karandlanje Filed a petition

ತಮಿಳುನಾಡಿನವರಿಂದಲೇ ಕೆಫೆಯ ಮೇಲೆ ಬಾಂಬ್ ಹೇಳಿಕೆ ವಿರುದ್ದ ದಾಖಲಾಗಿದ್ದ ಕೇಸ್​ ರದ್ದು ಕೋರಿ ಶೋಭಾ ಕರಂದ್ಲಾಜೆ ಮದ್ರಾಸ್​ ಹೈಕೋರ್ಟ್​ನ ಮಧುರೈ ಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ.

By ETV Bharat Karnataka Team

Published : Jul 3, 2024, 9:05 PM IST

Shobha Karandlanje
ಶೋಭಾ ಕರಂದ್ಲಾಜೆ (ETV Bharat)

ಮಧುರೈ (ತಮಿಳುನಾಡು):ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಶೋಭಾ ಕರಂದ್ಲಾಂಜೆ ನೀಡಿದ್ದ ಹೇಳಿಕೆ ಕುರಿತಂತೆ ಮಧುರೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆ ಶೋಭಾ ಕರಂದ್ಲಾಜೆ ಅವರಿಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಂಜೆ ಸ್ಪರ್ಧಿಸಿದ್ದರು. ಆ ವೇಳೆ ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ಘಟನೆಯನ್ನು ಉಲ್ಲೇಖಿಸಿ, 'ತಮಿಳುನಾಡಿನಲ್ಲಿ ತರಬೇತಿ ಪಡೆಯುತ್ತಿರುವವರು ಇಲ್ಲಿ ಬಾಂಬ್‌ ಹಾಕುತ್ತಿದ್ದಾರೆ' ಎಂದಿದ್ದರು.

ಕೇಂದ್ರ ಸಚಿವರ ಇಂತಹ ವಿವಾದಾತ್ಮಕ ಭಾಷಣ ತಮಿಳರಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದಾದ ನಂತರ ಶೋಭಾ ಕರಂದ್ಲಾಂಜೆ ಅವರು ತಮ್ಮ ಭಾಷಣಕ್ಕೆ ವಿಷಾದ ವ್ಯಕ್ತಪಡಿಸಿ ಟ್ವಿಟ್ಟರ್​ನಲ್ಲಿ ಕ್ಷಮೆ ಕೂಡಾ ಕೋರಿದ್ದರು. ಇದೇ ವೇಳೆ, ಮಧುರೈನ ಕಡಚನೇಂದಲ್‌ನ ತ್ಯಾಗರಾಜನ್ ಅವರು ಮಧುರೈ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲಿಸಿದ್ದು, ಅವರು ತಮಿಳು ಮತ್ತು ಕನ್ನಡಿಗರ ನಡುವೆ ಸಂಘರ್ಷ ಸೃಷ್ಟಿಸಲು ಹೀಗೆ ಮಾತನಾಡಿದ್ದಾರೆ ಎಂದು ಆರೋಪಿಸಿ ಶೋಭಾ ಕರಂದ್ಲಾಂಜೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.

ಈ ದೂರಿನ ಆಧಾರದ ಮೇಲೆ ಸೈಬರ್ ಕ್ರೈಂ ಪೊಲೀಸರು ಶೋಭಾ ಕರಂದ್ಲಾಂಜೆ ವಿರುದ್ಧ 153, 153 (ಎ), 505 (1) (ಬಿ) ಮತ್ತು 505 (2) ಎಂಬ ನಾಲ್ಕು ಕಲಂಗಳ ಅಡಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆ ಶೋಭಾ ಕರಂದ್ಲಾಂಜೆ ಅವರು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಘಟನೆಯಲ್ಲಿ ತಮಿಳರ ಬಗ್ಗೆ ಮಾತನಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ಈ ಸಂಭಾಷಣೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಬೆಂಗಳೂರು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ. ಆ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಇದೇ ಭಾಷಣಕ್ಕೆ ನನ್ನ ವಿರುದ್ಧ ಮಧುರೈನಲ್ಲಿ ಪ್ರಕರಣ ದಾಖಲಾಗಿದೆ. ರಾಜಕೀಯ ಉದ್ದೇಶದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಬಂಧಿತ ವ್ಯಕ್ತಿ ಚೆನ್ನೈನಲ್ಲಿ ನೆಲೆಸಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಚೆನ್ನೈನಲ್ಲಿ ಶೋಧ ನಡೆಸಿದೆ.

ನಾನು ತಮಿಳರ ಮಾನಹಾನಿ ಮಾಡುತ್ತಿಲ್ಲ. ಆದ್ದರಿಂದ ಮಧುರೈ ಸೈಬರ್ ಕ್ರೈಂ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಅಲ್ಲಿಯವರೆಗೆ ಪ್ರಕರಣದ ತನಿಖೆಗೆ ನಿಷೇಧ ಹೇರಿ ಆದೇಶ ನೀಡಬೇಕು’’ ಎಂದು ಕೋರಿದ್ದಾರೆ. ಈ ಅರ್ಜಿ ಸದ್ಯದಲ್ಲೇ ಹೈಕೋರ್ಟ್​​​ನಲ್ಲಿ ವಿಚಾರಣೆಗೆ ಬರಲಿದೆ.

ಇದನ್ನೂ ಓದಿ :ಶೋಭಾ ಕರಂದ್ಲಾಜೆ ವಿರುದ್ಧ ಬೆಂಗಳೂರಲ್ಲೂ ಎಫ್ಐಆರ್ - FIR AGAINST SHOBHA KARANDLAJE

ABOUT THE AUTHOR

...view details