ಕರ್ನಾಟಕ

karnataka

By PTI

Published : Jan 29, 2024, 3:54 PM IST

ETV Bharat / bharat

ಆರೆಸ್ಸೆಸ್, ಬಿಜೆಪಿ ಸಿದ್ಧಾಂತಗಳಿಂದ ದೇಶದಲ್ಲಿ ದ್ವೇಷ ಮತ್ತು ಹಿಂಸೆ: ರಾಹುಲ್ ಗಾಂಧಿ ಆರೋಪ

ಕಾಂಗ್ರೆಸ್​ನ ಭಾರತ್ ಜೋಡೊ ನ್ಯಾಯ್ ಯಾತ್ರೆ ಬಿಹಾರ ಪ್ರವೇಶಿಸಿದೆ.

RSS  BJP ideology lead to hatred and violence in country: Rahul Gandhi
RSS BJP ideology lead to hatred and violence in country: Rahul Gandhi

ಕಿಶನ್ ಗಂಜ್ (ಬಿಹಾರ): ಆರ್​ಎಸ್​ಎಸ್​ ಮತ್ತು ಬಿಜೆಪಿಯ ಸಿದ್ಧಾಂತಗಳು ದೇಶದಲ್ಲಿ ಹಿಂಸೆ ಮತ್ತು ದ್ವೇಷ ಹರಡುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯ ಭಾಗವಾಗಿ ಇಲ್ಲಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಆಡಳಿತದಲ್ಲಿ ವಿವಿಧ ಧರ್ಮ ಮತ್ತು ಜಾತಿಗಳಿಗೆ ಸೇರಿದ ಜನ ಹೊಡೆದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

"ಆರ್​ಎಸ್​ಎಸ್​ ಮತ್ತು ಬಿಜೆಪಿಯ ಸಿದ್ಧಾಂತಗಳು ದೇಶದಲ್ಲಿ ಹಿಂಸಾಚಾರ ಮತ್ತು ದ್ವೇಷವನ್ನು ಹರಡುತ್ತಿವೆ. ನಾವು 'ನಫ್ರತ್ ಕಾ ಬಜಾರ್' ನಲ್ಲಿ 'ಮೊಹಬ್ಬತ್ ಕಿ ದುಕಾನ್' ತೆರೆಯಲು ಬಯಸುತ್ತೇವೆ" (ದ್ವೇಷದ ಸಂತೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಯಸುತ್ತೇವೆ) ಎಂದು ರಾಹುಲ್ ನುಡಿದರು. ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್​ನ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಇಂದು ಬೆಳಗ್ಗೆ ಕಿಶನ್​ಗಂಜ್ ಮೂಲಕ ಬಿಹಾರ ಪ್ರವೇಶಿಸಿತು.

ಬಿಹಾರದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮಗಳ ವಿವರ: ರಾಹುಲ್ ಗಾಂಧಿ ಮಂಗಳವಾರ ಕಿಶನ್​ಗಂಜ್​ನಲ್ಲಿ ಸಾರ್ವಜನಿಕ ಸಭೆ ಮತ್ತು ಪಕ್ಕದ ಜಿಲ್ಲೆ ಪೂರ್ಣಿಯಾದಲ್ಲಿ ದೊಡ್ಡ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಬುಧವಾರ ಕಟಿಹಾರ್​ನಲ್ಲಿ ಮತ್ತೊಂದು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಗುರುವಾರ ಅರಾರಿಯಾ ಜಿಲ್ಲೆಯ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಲಿದ್ದು, ಕೆಲ ದಿನಗಳ ನಂತರ ಜಾರ್ಖಂಡ್ ಮೂಲಕ ಮತ್ತೆ ಬಿಹಾರಕ್ಕೆ ಮರಳಲಿದ್ದಾರೆ.

ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದ ನಂತರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಎರಡು ದಿನಗಳ ಕಾಲ (ಜನವರಿ 25 ಮತ್ತು 26) ಸ್ಥಗಿತಗೊಳಿಸಲಾಗಿತ್ತು. ಭಾನುವಾರ, ಪಶ್ಚಿಮ ಬಂಗಾಳದ ಜಲ್​ಪೈಗುರಿ ಜಿಲ್ಲೆಯಿಂದ ಕಾಂಗ್ರೆಸ್ ಯಾತ್ರೆ ಪುನರಾರಂಭಗೊಂಡಿತು. ಯಾತ್ರೆಯು ಜನವರಿ 31 ರಂದು ಮಾಲ್ಡಾ ಮೂಲಕ ಪಶ್ಚಿಮ ಬಂಗಾಳವನ್ನು ಮರು ಪ್ರವೇಶಿಸಲಿದ್ದು, ಫೆಬ್ರವರಿ 1 ರಂದು ರಾಜ್ಯದಿಂದ ಹೊರಹೋಗುವ ಮೊದಲು ಕಾಂಗ್ರೆಸ್ ಭದ್ರಕೋಟೆಯಾದ ಮುರ್ಷಿದಾಬಾದ್ ಮೂಲಕ ಹಾದುಹೋಗಲಿದೆ.

ಜಲ್​ಪೈಗುರಿಯಲ್ಲಿ ರಾಹುಲ್ ಗಾಂಧಿ ಚಿತ್ರದ ಕೆಲ ಬ್ಯಾನರ್​ಗಳನ್ನು ಹರಿದು ಹಾಕಲಾಗಿದೆ ಎಂದು ಪಕ್ಷವು ಈ ಹಿಂದೆ ಆರೋಪಿಸಿತ್ತು. ಜನವರಿ 14 ರಂದು ಮಣಿಪುರದ ತೌಬಾಲ್ನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಾರಂಭವಾಗಿದೆ. ಇದು 67 ದಿನಗಳಲ್ಲಿ 6,700 ಕಿಲೋಮೀಟರ್ ದೂರ ಕ್ರಮಿಸಲಿದ್ದು, 110 ಜಿಲ್ಲೆಗಳ ಮೂಲಕ ಯಾತ್ರೆ ಹಾದು ಹೋಗಲಿದೆ. ಈ ಮೊದಲು ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾತ್ರಯಾತ್ರೆ ಮಾಡಿದ್ದರು.

ಇದನ್ನೂ ಓದಿ : ಹನುಮ ಧ್ವಜ ತೆರವು ವಿವಾದ: ಕೆರಗೋಡು ಗ್ರಾಮದಿಂದ ಬಿಜೆಪಿ ಬೃಹತ್​ ಪಾದಯಾತ್ರೆ

ABOUT THE AUTHOR

...view details