ಕರ್ನಾಟಕ

karnataka

ETV Bharat / bharat

ಎನ್‌ಡಿಎ ಸೇರಿದ ಆರ್​ಎಲ್​ಡಿ ಮುಖ್ಯಸ್ಥ ಜಯಂತ್ ಚೌಧರಿ - RLD

ರಾಷ್ಟ್ರೀಯ ಲೋಕದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಂತ್ ಚೌಧರಿ ಅವರು ಶನಿವಾರ ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ಸೇರಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಚೌಧರಿ ಈ ಕುರಿತು ಮಾತುಕತೆ ನಡೆಸಿದರು.

Etv Bharat
Etv Bharat

By ETV Bharat Karnataka Team

Published : Mar 3, 2024, 9:16 AM IST

ನವದೆಹಲಿ: ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ'ಗೆ ಮತ್ತೊಂದು ಹೊಡೆತ ಬಿದ್ದಿದೆ. ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ) ಮುಖ್ಯಸ್ಥ ಜಯಂತ್ ಚೌಧರಿ ಅವರು ಶನಿವಾರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್​ಡಿಎ) ಸೇರ್ಪಡೆಗೊಂಡಿದ್ದಾರೆ. ಜಯಂತ್ ಚೌಧರಿ ಅವರೊಂದಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಸಭೆ ನಡೆಸಿದರು. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಇದೇ ವೇಳೆ ಚೌಧರಿ ವಿಶ್ವಾಸ ವ್ಯಕ್ತಪಡಿಸಿದರು.

''ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬಡವರ ಅಭಿವೃದ್ಧಿ ಮತ್ತು ಕಲ್ಯಾಣಕ್ಕೆ ಸಾಕ್ಷಿಯಾಗುತ್ತಿದೆ. ಅಮಿತ್​ ಶಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಎನ್​ಡಿಎ ಸೇರಲು ನಿರ್ಧರಿಸಿದೆ. ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ಮತ್ತು ಈ ಬಾರಿ 400 ಸೀಟುಗಳನ್ನು ದಾಟುವ ಗುರಿ ಈಡೇರಿಸಲು ಎನ್‌ಡಿಎ ಸಿದ್ಧವಾಗಿದೆ" ಎಂದು ಸಾಮಾಜಿಕ ಜಾಲತಾಣ 'ಎಕ್ಸ್' ಪೋಸ್ಟ್‌ನಲ್ಲಿ ಚೌಧರಿ ಬರೆದುಕೊಂಡಿದ್ದಾರೆ.

ಚೌಧರಿಯನ್ನು ಎನ್‌ಡಿಎಗೆ ಸ್ವಾಗತಿಸಿದ ನಡ್ಡಾ:ಚೌಧರಿ ಅವರನ್ನು ಎನ್‌ಡಿಎಗೆ ಸ್ವಾಗತಿಸಿರುವುದಾಗಿ ಜೆ.ಪಿ.ನಡ್ಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಗೌರವಾನ್ವಿತ ಗೃಹ ಸಚಿವ ಅಮಿತ್‌ಶಾಜಿ ಸಮ್ಮುಖದಲ್ಲಿ, ಆರ್​ಎಲ್​ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಅವರೊಂದಿಗೆ ಸಭೆ ನಡೆಯಿತು. ಎನ್​ಡಿಎ ಕುಟುಂಬಕ್ಕೆ ಸೇರುವ ಅವರ ನಿರ್ಧಾರವನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ'' ಎಂದು ತಿಳಿಸಿದ್ದಾರೆ.

''ನನ್ನ ಪಕ್ಷದ ಎಲ್ಲಾ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ನಂತರ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಇದರ ಹಿಂದೆ ಯಾವುದೇ ದೊಡ್ಡ ಯೋಜನೆ ಇಲ್ಲ. ನಾವು ಇದನ್ನು ಬಹಳ ಹಿಂದೆಯೇ ನಿರ್ಧರಿಸಿದ್ದೆವು. ದೇಶಕ್ಕೆ ಮತ್ತು ನಮ್ಮ ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಲು ನಾವು ಬಯಸುತ್ತೇವೆ'' ಎಂದು ಚೌಧರಿ ಹೇಳಿದ್ದಾರೆ.

"ನಮ್ಮ ಅಜ್ಜ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಘೋಷಣೆ ಮಾಡಲಾಗಿದೆ. ಚೌಧರಿ ಕುಟುಂಬ ಮತ್ತು ಅವರ ಪಕ್ಷಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಈ ಗೌರವ ಲಭಿಸಿದೆ. ನಾವು ತುಂಬಾ ಸಂತಸಗೊಂಡಿದ್ದೇವೆ. ಇದು ನಮ್ಮ ದೇಶದ ಎಲ್ಲಾ ರೈತರು, ಯುವಕರು, ಬಡವರಿಗೆ ಸಂದಿರುವ ಗೌರವ" ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಮೈತ್ರಿ ಪಾಲುದಾರರಿಗೆ ಒಟ್ಟು 6 ಸ್ಥಾನಗಳನ್ನು ನೀಡಲು ನಿರ್ಧರಿಸಿದೆ. ಮಿತ್ರಪಕ್ಷಗಳ ಪೈಕಿ ಅಪ್ನಾ ದಳ (ಸೋನೆಲಾಲ್ ಪಟೇಲ್), ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ, ನಿಶಾದ್ ಪಕ್ಷ ಮತ್ತು ರಾಷ್ಟ್ರೀಯ ಲೋಕದಳಗಳಿವೆ. ಬಿಜೆಪಿಯು ರಾಷ್ಟ್ರೀಯ ಲೋಕದಳಕ್ಕೆ ಎರಡು ಲೋಕಸಭಾ ಸ್ಥಾನಗಳನ್ನು ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಸಭೆಯಲ್ಲಿ ಆರ್​ಎಲ್​ಡಿ ಪಕ್ಷದ ಅಧ್ಯಕ್ಷ ಜಯಂತ್ ಚೌಧರಿ ಭಾಗಿ

''ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಎನ್‌ಡಿಎ ಮೈತ್ರಿಕೂಟದೊಂದಿಗಿದೆ. ದೇಶದಲ್ಲಿ ಮತ್ತೊಮ್ಮೆ ಮೋದಿ ಸರಕಾರ ರಚನೆಯಾಗಲಿದೆ. ರೈತರು, ಯುವಕರು ಮತ್ತು ನಿರುದ್ಯೋಗಿಗಳ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು ಸರ್ಕಾರದೊಂದಿಗೆ ಒಟ್ಟಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾರೆ'' ಎಂದು ರಾಷ್ಟ್ರೀಯ ಲೋಕದಳದ ರಾಷ್ಟ್ರೀಯ ಕಾರ್ಯದರ್ಶಿ ಅನುಪಮ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಮುಂದೆ ನಾನು ಎಲ್ಲಿಯೂ ಹೋಗಲ್ಲ.. ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಪ್ರಧಾನಿ ಮೋದಿಗೆ ನಿತೀಶ್ ಭರವಸೆ

ABOUT THE AUTHOR

...view details