ಕರ್ನಾಟಕ

karnataka

By ETV Bharat Karnataka Team

Published : May 9, 2024, 12:44 PM IST

ETV Bharat / bharat

ತಾಮ್ರ ಯುಗದಿಂದ ಹಿಡಿದು ಮಹಾಭಾರತ ಕಾಲದ ಕುರುಹುಗಳು ಪತ್ತೆ; ಗಮನ ಸೆಳೆದ ಮೂಳೆಯಿಂದ ತಯಾರಿಸಿದ ಸೂಜಿ! - Remains of Mahabharata

ರಾಜಸ್ಥಾನದ ಭರತಪುರದಲ್ಲಿ ಭಾರತೀಯ ಪುರಾತತ್ವ ಇಲಾಖೆ ಉತ್ಖನನ ಕಾರ್ಯ ನಡೆಸುತ್ತಿದೆ. ಈ ಸಂದರ್ಭದಲ್ಲಿ ತಾಮ್ರ ಯುಗದಿಂದ ಹಿಡಿದು ಆರ್ಯ, ಕುಶಾನ, ಮೌರ್ಯ, ಮಹಾಭಾರತ ಕಾಲದ ಕುರುಹುಗಳು ಸಿಕ್ಕಿವೆ.

Remains of copper Era and Mahabharata period found in Rajasthan
ರಾಜಸ್ಥಾನದಲ್ಲಿ ತಾಮ್ರ ಯುಗ, ಮಹಾಭಾರತ ಕಾಲದ ಕುರುಹು ಪತ್ತೆ (ETV Bharat)

ಭರತಪುರ(ರಾಜಸ್ಥಾನ):ಮರುಭೂಮಿ ರಾಜ್ಯ ರಾಜಸ್ಥಾನದ ಭರತಪುರದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಉತ್ಖನನದ ವೇಳೆ ತಾಮ್ರ ಯುಗ, ಆರ್ಯ, ಕುಶಾನ, ಮೌರ್ಯ ಹಾಗೂ ಮಹಾಭಾರತ ಕಾಲದ ಕುರುಹುಗಳು ದೊರೆತಿವೆ. ಇಲ್ಲಿನ ಹಲವು ಪ್ರದೇಶಗಳನ್ನು ಶ್ರೀಕೃಷ್ಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ.

ಭರತ್‌ಪುರ ಶ್ರೀಮಂತ ಇತಿಹಾಸ ಹಾಗೂ ಅನೇಕ ನಾಗರಿಕತೆಗಳೊಂದಿಗೆ ಸಂಬಂಧ ಹೊಂದಿದೆ. ಇದೀಗ ಪುರಾತತ್ವ ಇಲಾಖೆಯ ಉತ್ಖನನದ ಸಮಯದಲ್ಲಿ ವಿವಿಧ ಪ್ರದೇಶಗಳಲ್ಲಿ ಅನೇಕ ವರ್ಷಗಳ ಹಿಂದಿನ ಅವಶೇಷಗಳು, ಕುರುಹುಗಳು ಕಂಡುಬಂದಿವೆ. ರಾಜ್ಯದ ದೀಗ್ ಜಿಲ್ಲೆಯ ಬಹ್ಜ್ ಗ್ರಾಮದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಿಬ್ಬಂದಿ ಉತ್ಖನನ ಕಾರ್ಯ ನಡೆಸುತ್ತಿದ್ದಾರೆ.

ಇದುವರೆಗಿನ ಉತ್ಖನನಗಳಲ್ಲಿ ಕುಶಾನರ ಕಾಲ, ಶುಂಗರ ಕಾಲ, ಮೌರ್ಯರ ಕಾಲ, ಮಹಾಜನಪದ ಕಾಲ ಮತ್ತು ಮಹಾಭಾರತ ಕಾಲದ ಅವಶೇಷಗಳು ಹಾಗೂ ನಿಕ್ಷೇಪಗಳು ದೊರೆತಿವೆ. ಇದಲ್ಲದೆ ಮೂಳೆಗಳಿಂದ ತಯಾರಿಸಿದ ಸೂಜಿಯಾಕಾರದ ಉಪಕರಣಗಳು ಸಹ ಕಂಡುಬಂದಿವೆ. ಇಂತಹ ಕುರುಹುಗಳು ಇದುವರೆಗೂ ಭಾರತದ ಬೇರೆಲ್ಲೂ ಕಂಡುಬಂದಿಲ್ಲ ಎಂಬುದು ಅಚ್ಚರಿ.

ಯಾವ ಪ್ರದೇಶದಲ್ಲಿ, ಯಾವ ಕುರುಹುಗಳು ಪತ್ತೆ?: ನೌನಾ ಗ್ರಾಮದಲ್ಲಿ ತಾಮ್ರ ಯುಗ ಮತ್ತು ಆರ್ಯರ ಕಾಲದ ಕುರುಹುಗಳು ದೊರೆತಿವೆ. ಭರತ್‌ಪುರ ಕೇಂದ್ರ ಸ್ಥಾನದಿಂದ 6 ಕಿ.ಮೀ ದೂರದಲ್ಲಿ ಈ ನೌನಾ ಗ್ರಾಮವಿದೆ. ಇಲ್ಲಿ ಅನೇಕ ನಾಗರಿಕತೆಗಳ ಅವಶೇಷಗಳು ಕಂಡುಬಂದಿವೆ. 1963ರಲ್ಲೇ ನೌನಾ ಗ್ರಾಮದಲ್ಲಿ ಪುರಾತತ್ವ ಇಲಾಖೆಯು ಉತ್ಖನನ ಕಾರ್ಯ ನಡೆಸಿತ್ತು. ಆ ಸಮಯದಲ್ಲಿ ಮೌರ್ಯ, ಸುಂಗ ಮತ್ತು ಕುಶಾನ ಕಾಲದ ಶಿಲ್ಪಗಳು ಇಲ್ಲಿ ಕಂಡುಬಂದಿವೆ. ಕ್ರಿ.ಪೂ. 12ನೇ ಶತಮಾನದಲ್ಲಿ ಭಾರತದಲ್ಲಿ ಕಬ್ಬಿಣವನ್ನು ಬಳಸಲಾಗುತ್ತಿತ್ತು ಎಂಬುದು ಇಲ್ಲಿನ ಉತ್ಖನನಗಳಿಂದ ತಿಳಿದುಬಂದಿದೆ. ತಾಮ್ರ ಯುಗ, ಆರ್ಯ ಮತ್ತು ಮಹಾಭಾರತ ಕಾಲದ ನಾಗರೀಕತೆಯ ಅವಶೇಷಗಳೂ ಇಲ್ಲಿ ದೊರೆತಿವೆ ಎಂದು ಇತಿಹಾಸಕಾರ ರಾಮವೀರ್ ಸಿಂಗ್ ವರ್ಮಾ ಹೇಳಿದ್ದಾರೆ.

ಮಲಾಹ್ ಗ್ರಾಮದ ವಿಶೇಷತೆ: ಭರತ್‌ಪುರ ನಗರದಿಂದ ಕೇವಲ ಮೂರು ಕಿ.ಮೀ ದೂರದಲ್ಲಿರುವ ಮಲಾಹ್ ಗ್ರಾಮ ಸಹ ಅನೇಕ ನಾಗರಿಕತೆಗಳೊಂದಿಗೆ ಸಂಬಂಧ ಹೊಂದಿದೆ. ಈ ಗ್ರಾಮವು ಗುಪ್ತರ ಕಾಲದಲ್ಲಿ ಮತ್ತು ಮಧ್ಯಪ್ರಾಚ್ಯದಲ್ಲಿ ಹಿಂದೂ ಧರ್ಮದ ಪ್ರಮುಖ ಕೇಂದ್ರವಾಗಿತ್ತು ಎಂದು ಇತಿಹಾಸ ಪ್ರಾಧ್ಯಾಪಕ ಡಾ.ಸತೀಶ್ ತ್ರಿಗುಣಾಯತ್ ತಿಳಿಸಿದ್ದಾರೆ. ಇಲ್ಲಿ ಪುರಾತತ್ವ ಇಲಾಖೆಯ ಉತ್ಖನನದ ಸಮಯದಲ್ಲಿ 8ನೇ ಶತಮಾನ ಮತ್ತು 10ನೇ ಶತಮಾನದ ಪ್ರಾಚೀನ ಪ್ರತಿಮೆಗಳು ಸಿಕ್ಕಿವೆ. ಇದರ ಪಕ್ಕದಲ್ಲಿ ತಾಮ್ರದಿಂದ ಮಾಡಿದ ಅವಶೇಷಗಳೂ ಪತ್ತೆಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಹ್ಜ್ ಗ್ರಾಮದಲ್ಲಿ 5 ನಾಗರೀಕತೆಗಳ ಕುರುಹು: ಇದೇ ಪ್ರದೇಶದ ದೀಗ್ ಜಿಲ್ಲೆಯ ಬಹ್ಜ್ ಗ್ರಾಮದಲ್ಲಿ ಐದು ನಾಗರಿಕತೆಗಳ ಕುರುಹುಗಳು ಪತ್ತೆಯಾಗಿವೆ. ಇತ್ತೀಚೆಗೆ ಪುರಾತತ್ವ ಇಲಾಖೆಯಿಂದ ಉತ್ಖನನ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ, ಕುಶಾನರ ಕಾಲ, ಶುಂಗರ ಕಾಲ, ಮೌರ್ಯರ ಕಾಲ, ಮಹಾಜನಪದ ಕಾಲ, ಮಹಾಭಾರತ ಕಾಲದ ಅವಶೇಷಗಳು ಮತ್ತು ನಿಕ್ಷೇಪಗಳು ಕಂಡುಬಂದಿವೆ. ಅಲ್ಲದೇ, ಇಲ್ಲಿಯೇ ಮೂಳೆಗಳಿಂದ ತಯಾರಿಸಿದ ಸೂಜಿ ಆಕಾರದ ಉಪಕರಣಗಳು ದೊರೆತಿವೆ. ಇನ್ನೂ ಕೂಡ ಉತ್ಖನನದ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಪ್ರಾಚೀನ ನಾಗರಿಕತೆಗಳು ಮತ್ತು ಅವಧಿಗಳ ಅವಶೇಷಗಳು ಕಂಡುಬರುವ ನಿರೀಕ್ಷೆ ಇದೆ.

ಭವಿಷ್ಯದ ಉತ್ಖನನ ಪ್ರದೇಶಗಳು: ದೀಗ್ ಜಿಲ್ಲೆಯ ಕಮಾನ್ ಮತ್ತು ಭಾರತಪುರದ ಅಘಾಪುರ ಪ್ರದೇಶದಲ್ಲೂ ಅನೇಕ ಪ್ರಾಚೀನ ಪ್ರತಿಮೆಗಳು ಮತ್ತು ಅವಶೇಷಗಳು ಸಹ ಪತ್ತೆಯಾಗಿವೆ. ಅಘಾಪುರ ಗ್ರಾಮದ ಗುಡ್ಡವೊಂದು ಇಂದಿಗೂ ಪುರಾತತ್ವ ಇಲಾಖೆಯ ರಕ್ಷಣೆಯಲ್ಲಿದೆ. ಭವಿಷ್ಯದಲ್ಲಿ ಇಲ್ಲಿ ಉತ್ಖನನ ಮಾಡಿದರೆ ಹಲವು ಪುರಾತನ ಅವಶೇಷಗಳು ಸಿಗುವ ಸಾಧ್ಯತೆ ಇದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.

ಇದನ್ನೂ ಓದಿ:ಮೈಸೂರು: ವರುಣಾ ಸಮೀಪ 11ನೇ ಶತಮಾನದ ಜೈನ ಮೂರ್ತಿಗಳು ಪತ್ತೆ

ABOUT THE AUTHOR

...view details