ಕರ್ನಾಟಕ

karnataka

ಕಡತದಿಂದ ಭಾಷಣ ಕಡಿತ: ಲೋಕಸಭಾ ಸ್ಪೀಕರ್​ಗೆ ರಾಹುಲ್ ​ಗಾಂಧಿ ಪತ್ರ - Rahul Writes To Lok Sabha Speaker

By ETV Bharat Karnataka Team

Published : Jul 2, 2024, 5:30 PM IST

ಕಲಾಪಗಳ ದಾಖಲೆಯಿಂದ ಭಾಷಣಗಳ ಕೆಲವು ಭಾಗಗಳನ್ನು ತೆಗೆದಿರುವ ಬಗ್ಗೆ ಆಫಾತ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಅವರು, ತೆಗೆದ ಭಾಗಗಳನ್ನು ಮರುಸ್ಥಾಪಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ರಾಹುಲ್ ​ಗಾಂಧಿ
ರಾಹುಲ್ ​ಗಾಂಧಿ (ಸದನದಲ್ಲಿ ರಾಹುಲ್​ ಗಾಂಧಿ ಭಾಷಣ.(ETV Bharat))

ನವದೆಹಲಿ:ಲೋಕಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಸೋಮವಾರ ಹಲವು ವಿಚಾರಗಳ ಬಗ್ಗೆ ಭಾಷಣ ಮಾಡಿದ್ದರು. ಈ ದೀರ್ಘಾವಧಿಯ ಭಾಷಣದಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು. ಅವರ ಭಾಷಣದಲ್ಲಿನ ಹೇಳಿಕೆಗೆ ಆಡಳಿತ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಭಾಷಣದ ಕೆಲವು ಭಾಗಗಳನ್ನು ಕಲಾಪದ ದಾಖಲೆಯಿಂದ ತೆಗೆದುಹಾಕಲಾಗಿತ್ತು.

ಈ ಸಂಬಂಧ ವಿರೋಧ ಪಕ್ಷದ ನಾಯಕ ರಾಹುಲ್​ ಗಾಂಧಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಕಲಾಪಗಳ ದಾಖಲೆಯಿಂದ ತಮ್ಮ ಭಾಷಣಗಳ ಕೆಲವು ಭಾಗಗಳನ್ನು ತೆಗೆದಿರುವ ಬಗ್ಗೆ ಆಘಾತ ವ್ಯಕ್ತಪಡಿಸಿ, ತೆಗೆದ ಭಾಗಗಳನ್ನು ಮರು ಸೇರ್ಪಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ, ಸೋಮವಾರ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ನನ್ನ ಭಾಷಣದಿಂದ ಕೆಲವು ಆಯ್ದ ಭಾಗಗಳನ್ನು ತೆಗೆದುಹಾಕಿರುವ ಹಿನ್ನೆಲೆಯಲ್ಲಿ ಈ ಪತ್ರವನ್ನು ಬರೆಯುತ್ತಿದ್ದೇನೆ. ಸದನದ ಕಾರ್ಯಕಲಾಪಗಳಿಂದ ಕೆಲವು ಟೀಕೆಗಳನ್ನು ತೆಗೆದುಹಾಕಲು ಸಭಾಧ್ಯಕ್ಷರಿಗೆ ಅಧಿಕಾರ ಇದೆ. ಆದರೆ, ಆ ಅಧಿಕಾರಕ್ಕೆ ನಿರ್ದಿಷ್ಟ ಪದಗಳಿಗೆ ಮಾತ್ರ ಹಾಗೆ ಮಾಡಬಹುದು ಎಂಬ ಷರತ್ತಿದೆ. ಲೋಕಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ 380ನೇ ನಿಯಮದಲ್ಲಿ ಅಧಿಕಾರಗಳ ಸ್ವರೂಪವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಆದಾಗ್ಯೂ, ನನ್ನ ಭಾಷಣದ ಗಣನೀಯ ಭಾಗವನ್ನು ಕಲಾಪದ ಕಡತದಿಂದ ತೆಗೆದುಹಾಕಿದ ಕ್ರಮ ನೋಡಿ ನನಗೆ ಆಘಾತವಾಗಿದೆ. ಜುಲೈ 2 ರಂದು ಲೋಕಸಭೆಯ ತಿದ್ದುಪಡಿಯಾಗದ ಚರ್ಚೆಗಳ ಸಂಬಂಧಿತ ಭಾಗಗಳನ್ನು ಸಹ ಲಗತ್ತಿಸಿದೆ. ತೆಗೆದುಹಾಕಲಾದ ಭಾಗಗಳು ನಿಯಮ 380ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲು ನಾನು ನಿರ್ಬಂಧಿಸಲ್ಪಟ್ಟಿದ್ದೇನೆ. ನಾನು ಸದನದಲ್ಲಿ ತಿಳಿಸಲು ಪ್ರಯತ್ನಿಸಿದ್ದು ವಾಸ್ತವ, ವಾಸ್ತವಿಕ ಸ್ಥಿತಿ ಎಂದಿದ್ದಾರೆ.

ಜನರ ಸಾಮೂಹಿಕ ಧ್ವನಿಯನ್ನು ಪ್ರತಿನಿಧಿಸುವ ಸದನದ ಪ್ರತಿಯೊಬ್ಬ ಸದಸ್ಯನು ಭಾರತದ ಸಂವಿಧಾನದ 105 (1)ನೇ ವಿಧಿಯಲ್ಲಿ ಪ್ರತಿಪಾದಿಸಿರುವಂತೆ ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಪ್ರತಿಯೊಬ್ಬ ಸದಸ್ಯರ ಹಕ್ಕು. ಆ ಹಕ್ಕನ್ನು ನಾನು ನಿನ್ನೆ ಚಲಾಯಿಸುತ್ತಿದ್ದೆ. ನನ್ನ ಹೇಳಿಕೆಗಳನ್ನು ಕಡತದಿಂದ ತೆಗೆದು ಹಾಕಿರುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿವೆ ಎಂದು ಅವರು ಪತ್ರದಲ್ಲಿ ಕಿಡಿಕಾರಿದ್ದಾರೆ.

ಅನುರಾಗ್ ಠಾಕೂರ್ ಅವರ ಭಾಷಣದ ಬಗ್ಗೆ ಸ್ಪೀಕರ್ ಗಮನ ಸೆಳೆದ ಅವರು, ಅನುರಾಗ್ ಠಾಕೂರ್ ಅವರ ಭಾಷಣವು ಆರೋಪಗಳಿಂದ ತುಂಬಿತ್ತು, ಆದರೆ, ಅವರ ಭಾಷಣದಿಂದ ಕೇವಲ ಒಂದು ಪದವನ್ನು ಮಾತ್ರ ತೆಗೆದುಹಾಕಲಾಗಿದೆ ಎಂದಿರುವ ಅವರು, ಕೆಳಮನೆಯ ಕಾರ್ಯಕಲಾಪಗಳಲ್ಲಿರುವಂತೆ ಚರ್ಚೆಯನ್ನು ಪುನಃಸ್ಥಾಪಿಸುವ ತಮ್ಮ ಮನವಿಯನ್ನು ಪರಿಗಣಿಸುವಂತೆ ಅವರು ಸ್ಪೀಕರ್ ಓಂ ಬಿರ್ಲಾ ಅವರನ್ನು ಪತ್ರ ಮೂಲಕ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಕಳೆದ 10 ವರ್ಷಗಳಲ್ಲಿ ದೇಶ 'ಸಬ್​ ಕಾ ಸಾಥ್, ಸಬ್​ ಕಾ ವಿಕಾಸ' ಕಂಡಿದೆ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ - Modi speech in Lok Sabha

ABOUT THE AUTHOR

...view details