ಕರ್ನಾಟಕ

karnataka

By ETV Bharat Karnataka Team

Published : 8 hours ago

ETV Bharat / bharat

'ಗೋದ್ರಾ ರೈಲು ದಹನ ಕೇಸ್​ ಮತ್ತೆ ಮುಂದೂಡಲ್ಲ': 2025 ರ ಜನವರಿ 15ಕ್ಕೆ ದಿನ ನಿಗದಿ ಮಾಡಿದ ಸುಪ್ರೀಂಕೋರ್ಟ್​ - godhra train burning case

22 ವರ್ಷಗಳ ಹಿಂದೆ ಗುಜರಾತ್​​ನ ಗೋದ್ರಾದಲ್ಲಿ ಸಬರಮತಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ವಿಚಾರಣೆ ಮುಗಿಸಲು ಸುಪ್ರೀಂಕೋರ್ಟ್​ ಮುಂದಿನ ವರ್ಷ ದಿನಾಂಕ ನಿಗದಿ ಮಾಡಿದೆ.

ಗೋದ್ರಾ ರೈಲು ದಹನ ಕೇಸ್
ಗೋದ್ರಾ ರೈಲು ದಹನ ಕೇಸ್ (ETV Bharat)

ನವದೆಹಲಿ:2002ರ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಮತ್ತು ಇತರ ಹಲವು ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳನ್ನು 2025 ರ ಜನವರಿ 15 ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ದಿನಾಂಕ ನಿಗದಿ ಮಾಡಿದೆ. ಜೊತೆಗೆ ಇದು ಕೊನೆಯ ವಿಚಾರಣೆ, ಮುಂದೆ ಯಾವುದೇ ರೀತಿಯ ಮುಂದೂಡಿಕೆಗಳು ಇರುವುದಿಲ್ಲ ಎಂದಿದೆ.

ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ನೇತೃತ್ವದ ಪೀಠವು, ಮುಂದಿನ ವಿಚಾರಣೆಯ ದಿನದಂದು ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ವಿಷಯದಲ್ಲಿ ಯಾವುದೇ ಮುಂದೂಡಿಕೆ ನೀಡುವುದಿಲ್ಲ ಎಂದು ವಕೀಲರಿಗೆ ಸೂಚಿಸಿತು.

11 ಅಪರಾಧಿಗಳ ಮರಣದಂಡನೆಗೆ ಸಂಬಂಧಿಸಿದ ವಿಷಯದಲ್ಲಿ ಮತ್ತೊಂದು ಪೀಠದ ಮುಂದೆ ವಾದಿಸಬೇಕಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಗುಜರಾತ್ ಸರ್ಕಾರದ ವಕೀಲರು ಪೀಠವನ್ನು ಕೋರಿದರು. ಈ ವೇಳೆ ಕೋರ್ಟ್​, ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರಿದ್ದ ಪೀಠದ ಮುಂದೆ ಅಪರಾಧಿಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಇದೆ. ಅದರ ವಿಚಾರಣೆಯ ಬಳಿಕ, ಪ್ರಾಸಿಕ್ಯೂಷನ್ ವಾದವನ್ನು ಆಲಿಸಲಾಗುವುದು. ನಂತರ ಎರಡನ್ನೂ ಸೇರಿಸಿ ಪ್ರಕರಣ ಮುಗಿಸಲಾಗುವುದು ಎಂದು ಹೇಳಿತು.

ಪ್ರಕರಣದ ವಿಚಾರಣೆ ಕನಿಷ್ಠ ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಮುಂದಿನ ವಿಚಾರಣೆಯ ಬಳಿಕ ಯಾವುದೇ ಮುಂದೂಡಿಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿ, ಗುಜರಾತ್ ಸರ್ಕಾರದ ವಕೀಲರ ಮನವಿಯನ್ನು ಪರಿಗಣಿಸಿ, ಜನವರಿ 15, 2025 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.

ರಾಜ್ಯ ಸರ್ಕಾರದ ಆಕ್ಷೇಪವೇನು?:2002 ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದೆ. ನಂತರ, ಹೈಕೋರ್ಟ್​ನಲ್ಲಿ 31 ಅಪರಾಧಿಗಳನ್ನು ಗುರುತಿಸಲಾಗಿದೆ. ಬಳಿಕ ಇದರಲ್ಲಿ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿದೆ. ಇದರ ವಿರುದ್ಧ ಗುಜರಾತ್​ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇದರ ಜೊತೆಗೆ ಅನೇಕ ಅಪರಾಧಿಗಳು ತಮಗೆ ನೀಡಲಾದ ಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

2002 ರ ಫೆಬ್ರವರಿ 27 ರಂದು, ಗುಜರಾತ್‌ನ ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ನ ಎಸ್​​-6 ಬೋಗಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಇದರಿಂದ ಒಳಗಿದ್ದ 59 ಪ್ರಯಾಣಿಕರು ಸಾವನ್ನಪ್ಪಿದರು. ಇದು ರಾಜ್ಯದಲ್ಲಿ ಭೀಕರ ಗಲಭೆಗೆ ಕಾರಣವಾಗಿತ್ತು.

ಇದನ್ನೂ ಓದಿ:Godhra case: ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಮೂವರು ಅಪರಾಧಿಗಳಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್​

ABOUT THE AUTHOR

...view details