ಕರ್ನಾಟಕ

karnataka

ಎರಡು ತಿಂಗಳಲ್ಲಿ ಇಬ್ಬರು ಪುತ್ರರನ್ನು ದೇಶಕ್ಕೆ ಅರ್ಪಿಸಿದ ಕುಟುಂಬ! - Uttarakhand Family Mourns Soldiers

By ETV Bharat Karnataka Team

Published : Jul 10, 2024, 12:35 PM IST

ಉತ್ತರಾಖಂಡ್​ನ ತೆಹ್ರಿ ಜಿಲ್ಲೆಯ ಒಂದೇ ಕುಟುಂಬದ ಇಬ್ಬರು ಸಹೋದರರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಕಳೆದ ಏಪ್ರಿಲ್ 30ರಂದು ಲೇಹ್​ನಲ್ಲಿ ಕರ್ತವ್ಯದಲ್ಲಿದ್ದಾಗ ಮೇಜರ್ ಪ್ರಣಯ್ ನೇಗಿ ಮೃತಪಟ್ಟಿದ್ದರು. ಇದೀಗ ಇವರ ಸಹೋದರ ಆದರ್ಶ್ ನೇಗಿ ಕಥುವಾದ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ಹುತಾತ್ಮ ಆದರ್ಶ್ ನೇಗಿ, ಪ್ರಣಯ್ ನೇಗಿ
ಹುತಾತ್ಮ ಆದರ್ಶ್ ನೇಗಿ, ಪ್ರಣಯ್ ನೇಗಿ (ETV Bharat)

ತೆಹ್ರಿ(ಉತ್ತರಾಖಂಡ್‌):ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಸೋಮವಾರ ಭಾರತೀಯ ಸೇನಾ ಬೆಂಗಾವಲು ಪಡೆಯ ಮೇಲೆ ನಡೆದ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ. ಈ ಎಲ್ಲ ಸೈನಿಕರು ಉತ್ತರಾಖಂಡ ರಾಜ್ಯದವರು. ಇದರಲ್ಲಿ ಒಂದೇ ಕುಟುಂಬದ ಇಬ್ಬರು ಸಹೋದರರು ಎರಡು ತಿಂಗಳಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂಬುದು ಗಮನಾರ್ಹ.

ತೆಹ್ರಿ ಜಿಲ್ಲೆಯ ರೈಫಲ್‌ಮ್ಯಾನ್ ಆದರ್ಶ್ ನೇಗಿ, ನಾಯಕ್ ವಿನೋದ್ ಸಿಂಗ್ ಮತ್ತು ಪೌರಿ ಜಿಲ್ಲೆಯ ಹವಾಲ್ದಾರ್ ಕಮಲ್ ಸಿಂಗ್, ಅನುಜ್ ನೇಗಿ ಹಾಗು ರುದ್ರಪ್ರಯಾಗ ಜಿಲ್ಲೆಯ ನೈಬ್ ಸುಬೇದಾರ್ ಆನಂದ್ ಸಿಂಗ್ ಮಣಿದ ಯೋಧರು. ದೇವಪ್ರಯಾಗದ ನಿವಾಸಿ, 26 ವರ್ಷದ ಆದರ್ಶ್ ನೇಗಿ ಅವರ ಚಿಕ್ಕಪ್ಪನ ಮಗ ಕೂಡ ಎರಡು ತಿಂಗಳ ಹಿಂದಷ್ಟೇ ಹುತಾತ್ಮರಾಗಿದ್ದರು. ಈ ಮೂಲಕ ಇಬ್ಬರು ಪುತ್ರರನ್ನು ಈ ಕುಟುಂಬ ದೇಶಕ್ಕಾಗಿ ಕಳೆದುಕೊಂಡಿದೆ.

ಆದರ್ಶ್ ನೇಗಿ (ETV Bharat)

ಆದರ್ಶ್ ನೇಗಿ ಸಹೋದರ ಪ್ರಣಯ್ ನೇಗಿ (33) ಭಾರತೀಯ ಸೇನೆಯಲ್ಲಿ ಮೇಜರ್​ ಆಗಿದ್ದರು. ಲೇಹ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಇದೇ ಏಪ್ರಿಲ್ 30ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸಾವಿನ ಆಘಾತದಿಂದ ನೇಗಿ ಕುಟುಂಬ ಹೊರಬರುವ ಮುನ್ನವೇ ಮತ್ತೊಬ್ಬ ಮಗನ ಸಾವಿನ ಸುದ್ದಿ ಬರಸಿಡಿಲಂತೆ ಅಪ್ಪಳಿಸಿದೆ. ಸೋಮವಾರ ಉಗ್ರರ ದಾಳಿಯಲ್ಲಿ ಆದರ್ಶ್ ನೇಗಿ ಪ್ರಾಣ ಅರ್ಪಿಸಿದ ವಿಷಯ ತಿಳಿಯುತ್ತಿದ್ದಂತೆ ಇಡೀ ಕುಟುಂಬಕ್ಕೆ ದುಃಖದಲ್ಲಿ ಮುಳುಗಿದೆ. ಅಲ್ಲದೇ, ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಮೇಜರ್ ಪ್ರಣಯ್ ನೇಗಿ (ETV Bharat)

26ರ ಹರೆಯದ ಹುತಾತ್ಮ ಯೋಧ ಆದರ್ಶ್ ನೇಗಿ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. 2018ರಲ್ಲಿ ಗರ್ವಾಲ್ ರೈಫಲ್ಸ್‌ಗೆ ಸೇರಿದ್ದರು. 6 ವರ್ಷಗಳಿಂದ ದೇಶದ ಭದ್ರತೆಗಾಗಿ ಸೇವೆ ಸಲ್ಲಿಸುತ್ತಿದ್ದರು. ತಂದೆ ದಲ್ಬೀರ್ ಸಿಂಗ್ ನೇಗಿ, ತಾಯಿ, ಓರ್ವ ಸಹೋದರ ಮತ್ತು ಹಿರಿಯ ಸಹೋದರಿಯನ್ನು ಅಗಲಿದ್ದಾರೆ. ಸಹೋದರ ಪ್ರಸ್ತುತ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಕನಿಗೆ ಮದುವೆಯಾಗಿದೆ. ತಂದೆ ರೈತರಾಗಿದ್ದು, ಇದೇ ವರ್ಷ ಆದರ್ಶ್ ಗ್ರಾಮಕ್ಕೆ ಬಂದು ಹೋಗಿದ್ದರು.

ಹುತಾತ್ಮರಿಗೆ ಸಿಎಂ ಶ್ರದ್ಧಾಂಜಲಿ:ಮಂಗಳವಾರ ಹುತಾತ್ಮ ಐವರು ಯೋಧರ ಪಾರ್ಥೀವ ಶರೀರಗಳನ್ನು ಉತ್ತರಾಖಂಡ್​ಗೆ ರವಾನಿಸಲಾಯಿತು. ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶ್ರದ್ಧಾಂಜಲಿ ಸಲ್ಲಿಸಿದರು. ''ದೇಶ ರಕ್ಷಣೆಯಲ್ಲಿ ತಮ್ಮ ಪ್ರಾಣತ್ಯಾಗ ಮಾಡಿದ ನಮ್ಮ ಹುತಾತ್ಮರು ಎಲ್ಲ ದೇಶವಾಸಿಗಳ ನೆನಪಿನಲ್ಲಿ ಸದಾ ಅಮರಾಗಿರುತ್ತಾರೆ. ನಿಮ್ಮ ಬಗ್ಗೆ ಸೇನಾಭೂಮಿ ಉತ್ತರಾಖಂಡ ಮತ್ತು ರಾಜ್ಯದ ಎಲ್ಲ ಜನತೆ ಹೆಮ್ಮೆಪಡುತ್ತದೆ'' ಎಂದು ಸಿಎಂ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ:ಜಮ್ಮುವಿನ ಕಥುವಾದಲ್ಲಿ ಭೀಕರ ಉಗ್ರ ದಾಳಿ: ಐವರು ಯೋಧರು ಹುತಾತ್ಮ, ಹಲವರಿಗೆ ಗಾಯ

ABOUT THE AUTHOR

...view details