ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / bharat

ಅ.2ರಂದು ಮದ್ಯ ನಿಷೇಧ ರ್‍ಯಾಲಿ: ತಮಿಳುನಾಡಿನಲ್ಲಿ ರಾಜಕೀಯ ಮುನ್ನೆಲೆಗೆ ಬಂದ ಲಿಕ್ಕರ್ ಬ್ಯಾನ್ ವಿಚಾರ - Liquor Ban Rally

ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ವಿಸಿಕೆ ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ಕಲ್ಲಕುರಿಚಿಯಲ್ಲಿ ನಿರ್ಣಾಯಕ ಮದ್ಯ ನಿಷೇಧ ರ್‍ಯಾಲಿ ನಡೆಸಲು ನಿರ್ಧರಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಚೆನ್ನೈ: ತಮಿಳುನಾಡಿನ ದಲಿತ ರಾಜಕೀಯ ಪಕ್ಷವಾದ ವಿದುತಲೈ ಚಿರುಥೈಗಲ್ ಕಚ್ಚಿ (ವಿಸಿಕೆ) ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ಕಲ್ಲಕುರಿಚಿಯಲ್ಲಿ ನಿರ್ಣಾಯಕ ಮದ್ಯ ನಿಷೇಧ ರ್‍ಯಾಲಿ ನಡೆಸಲು ನಿರ್ಧರಿಸಿದೆ. ವಿಸಿಕೆ ಪಕ್ಷವು ದಲಿತ ಸಮುದಾಯದ ಅಪಾರ ಬೆಂಬಲ ಹೊಂದಿರುವುದು ಗಮನಾರ್ಹ.

ವಿಸಿಕೆ ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿದೆ. ಮದ್ಯ ನಿಷೇಧ ವಿಚಾರವನ್ನು ರಾಜ್ಯದ ರಾಜಕೀಯದಲ್ಲಿ ಮುನ್ನೆಲೆಗೆ ತರಲು ಮತ್ತು 2026 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅದನ್ನು ಪ್ರಮುಖ ವಿಷಯವನ್ನಾಗಿ ಮಾಡುವ ಗುರಿಯನ್ನು ಪಕ್ಷ ಹೊಂದಿದೆ ಎಂದು ಸ್ಥಾಪಕ ನಾಯಕ ಮತ್ತು ಸಂಸದ ಥೋಲ್ ತಿರುಮಾವಲವನ್ ಹೇಳಿದ್ದಾರೆ.

"ಮದ್ಯ ಮತ್ತು ಮಾದಕ ವಸ್ತುಗಳ ಪಿಡುಗಿನ ವಿಚಾರವನ್ನು ತಮಿಳುನಾಡಿನ ಸಾಮಾಜಿಕ ಮತ್ತು ರಾಜಕೀಯ ಚರ್ಚೆಯ ಕೇಂದ್ರವನ್ನಾಗಿಸಲು ನಾವು ನಿರ್ದಿಷ್ಟವಾಗಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ" ಎಂದು ಥೋಲ್ ತಿರುಮಾವಲವನ್ ಐಎಎನ್ಎಸ್​ಗೆ ತಿಳಿಸಿದರು.

ರಾಜ್ಯದಲ್ಲಿ ಮದ್ಯ ಸೇವನೆ ತೀರಾ ಹೆಚ್ಚಾಗುತ್ತಿದ್ದು, ಕುಟುಂಬಗಳು ಮತ್ತು ಮಹಿಳೆಯರು ಇದರಿಂದ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು. ಕಲ್ಲಕುರಿಚಿ ಜಿಲ್ಲೆಯ ಉಲುಂದೂರ್ ಪೆಟ್ಟೈನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ 1 ಲಕ್ಷ ಮಹಿಳೆಯರನ್ನು ಕರೆತರಲು ವಿಸಿಕೆ ಯೋಜಿಸುತ್ತಿದೆ.

ಈ ಕುರಿತು ಐಎಎನ್ಎಸ್ ಜೊತೆ ಮಾತನಾಡಿದ ಕಲ್ಲಕುರಿಚಿ ಜಿಲ್ಲೆಯ ವಿಸಿಕೆಯ ಮಧ್ಯಮ ಹಂತದ ಕಾರ್ಯಕರ್ತ ಉಲ್ಲಾಸ್ ಕುಮಾರ್ ಪಿ.ಕೆ, "ಪಕ್ಷವು ಮದ್ಯದ ವಿರುದ್ಧ ನಿಲ್ಲುವಂತೆ ಸರ್ಕಾರಕ್ಕೆ ಮಾತ್ರವಲ್ಲದೆ ಜನರಿಗೂ ಮನವಿ ಮಾಡಲು ಬಯಸುತ್ತದೆ. ರಾಜ್ಯ ಸರ್ಕಾರವು ಮದ್ಯ ನಿಷೇಧವನ್ನು ಮಾತ್ರ ಜಾರಿಗೆ ತರಬಹುದು. ಆದರೆ ಜನತೆ ತಾವು ಬಯಸಿದರೆ ಮಾತ್ರ ಅದನ್ನು ಜೀವನದಿಂದ ದೂರವಿಡಬಹುದು." ಎಂದು ಹೇಳಿದರು.

ರ್‍ಯಾಲಿಯ ನಂತರವೂ ಹಳ್ಳಿಗಳಲ್ಲಿ ಮದ್ಯ ಮತ್ತು ಮಾದಕವಸ್ತುಗಳ ವಿರುದ್ಧ ಪಕ್ಷವು ಪ್ರಚಾರವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.

ವಿಸಿಕೆ ಪಕ್ಷದ ಮದ್ಯ ನಿಷೇಧ ನಿಲುವಿನ ಬಗ್ಗೆ ಮಾತನಾಡಿದ ಚೆನ್ನೈ ಮೂಲದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಪಾಲಿಸಿ ಅಂಡ್ ಡೆವಲಪ್ ಮೆಂಟ್ ಸ್ಟಡೀಸ್​ನ ನಿರ್ದೇಶಕ ಸಿ. ರಾಜೀವ್, "ವಿಸಿಕೆ ಪಕ್ಷವು ಚಾಣಾಕ್ಷ ರಾಜಕೀಯ ಆಟವಾಡುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ಯಾವುದೇ ರಾಜಕೀಯ ಪಕ್ಷವು ಸಮಾಜದಲ್ಲಿ ಮದ್ಯ ಮತ್ತು ಇತರ ಮಾದಕವಸ್ತುಗಳ ಪಿಡುಗಿನ ಬಗ್ಗೆ ಕಣ್ಣು ಮುಚ್ಚಿ ಕೂರಲು ಸಾಧ್ಯವಿಲ್ಲ ಎಂಬುದನ್ನು ಈ ರ್‍ಯಾಲಿ ಖಚಿತಪಡಿಸಲಿದೆ" ಎಂದು ಹೇಳಿದರು.

ಇದನ್ನೂ ಓದಿ : ಮರಾಠಾ ಮೀಸಲಾತಿ: ಅ.12ರಂದು ದಸರಾ ರ್‍ಯಾಲಿಯಲ್ಲಿ ಬಲಪ್ರದರ್ಶನಕ್ಕೆ ಜಾರಂಗೆ ಪಾಟೀಲ್ ಕರೆ - Maratha Quota

ABOUT THE AUTHOR

...view details