ಕರ್ನಾಟಕ

karnataka

ETV Bharat / bharat

ಮದುವೆ ಮಂಟಪಕ್ಕೆ ಬಂದ ಚಿರತೆ: ಕಾರಿನಲ್ಲೇ ಗಂಟೆಗಟ್ಟಲೆ ಕಾದ ವಧು-ವರ! - LEOPARD ENTERED IN MARRIAGE

ಉತ್ತರ ಪ್ರದೇಶದ ಲಖನೌದಲ್ಲಿ ನಡೆಯುತ್ತಿದ್ದ ಮದುವೆಗೆ ಅಪರೂಪದ ಅತಿಥಿಯಾಗಿ ಚಿರತೆ ಬಂದು ತೀವ್ರ ಗದ್ದಲ ಎಬ್ಬಿಸಿದ ಘಟನೆ ನಡೆದಿದೆ.

ಮದುವೆ ಮಂಟಪಕ್ಕೆ ನುಗ್ಗಿದ ಚಿರತೆ
ಮದುವೆ ಮಂಟಪಕ್ಕೆ ನುಗ್ಗಿದ ಚಿರತೆ (ETV Bharat)

By ETV Bharat Karnataka Team

Published : Feb 13, 2025, 10:55 PM IST

Updated : Feb 13, 2025, 11:06 PM IST

ಲಕ್ನೋ(ಉತ್ತರ ಪ್ರದೇಶ):ಇಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ಅಚ್ಚರಿಯ ಅತಿಥಿಯೊಬ್ಬರು ಆಗಮಿಸಿ, ಭಾರೀ ಗದ್ದಲ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಬುಧವಾರ ರಾತ್ರಿ ನಡೆದಿದೆ.

ವಧು-ವರರ ಮೆರವಣಿಗೆ ಬಳಿಕ ಮದುವೆ ಮಂಟಪದಲ್ಲಿ ಭೋಜನ ಸವಿಯುತ್ತಿದ್ದ ವೇಳೆ ಚಿರತೆಯೊಂದು ಮದುವೆ ಮಂಟಪದೊಳಕ್ಕೆ ನುಗ್ಗಿದೆ. ಇದನ್ನು ಕಂಡ ವಿವಾಹಕ್ಕೆ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಈ ವೇಳೆ ಕ್ಯಾಮರಾಮೆನ್​ಗಳು ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾರೆ.

ಕಲ್ಯಾಣ ಮಂಟಪದಲ್ಲಿ ಚಿರತೆ ನುಗ್ಗಿದ ಸಂಗತಿ ತಿಳಿದ ವಧು- ವರರು ಕಾರಿನಲ್ಲಿ ಅಡಗಿ ಕುಳಿತಿದ್ದಾರೆ. ಎಷ್ಟೇ ಪ್ರಯತ್ನಪಟ್ಟರೂ, ಚಿರತೆ ಮದುವೆ ಹಾಲ್​ನಿಂದ ಹೊರಹೋಗಿಲ್ಲ. ಇದರಿಂದ ಹೆದರಿದ ಆಹ್ವಾನಿತರು ಕೂಡ ಕಾರು, ವಾಹನಗಳಲ್ಲಿ ಆಶ್ರಯ ಪಡೆದಿದ್ದರು.

ಮದುವೆ ಮಂಟಪಕ್ಕೆ ಬಂದ ಅಪರೂಪದ ಅತಿಥಿ (ETV Bharat)

ಮಧ್ಯರಾತ್ರಿವರೆಗೂ ಕಾರ್ಯಾಚರಣೆ:ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಮತ್ತು ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿರತೆಯು ಮೊದಲ ಮಹಡಿ ಹತ್ತಿ ಅಲ್ಲಿಯೇ ಕತ್ತಲೆಯಲ್ಲಿ ಅಡಗಿಕೊಂಡಿತ್ತು. ಅರಣ್ಯ ಇಲಾಖೆ ತಂಡ ರಕ್ಷಣಾ ಕಾರ್ಯಾಚರಣೆ ಆರಂಭಿಸಿದಾಗ, ಚಿರತೆಯು ರಕ್ಷಕರೊಬ್ಬರ ಮೇಲೆ ದಾಳಿ ಮಾಡಿತು. ಇದರಿಂದ ಅವರ ಕೈಗೆ ಗಾಯವಾಗಿ ರಕ್ತ ಚಿಮ್ಮಿತು.

ಚಿರತೆಯನ್ನು ಕಲ್ಯಾಣ ಮಂಟಪದಿಂದ ಓಡಿಸಲು ಅರಣ್ಯ ಇಲಾಖೆ ತಂಡವು ಗುಂಡು ಹಾರಿಸಿತು. ಆದರೂ, ಅದು ಕತ್ತಲಲ್ಲಿ ಅಡಗಿ ಕುಳಿತೇ ಇತ್ತು. ಸತತ 4 ಗಂಟೆಗಳ ಕಾರ್ಯಾಚರಣೆ ಬಳಿಕ ಕೊನೆಗೂ ಅರಿವಳಿಕೆ ಚುಚ್ಚು ಮದ್ದು ನೀಡಿ ಹಿಡಿಯಲಾಗಿದೆ.

ರಕ್ಷಣಾ ಕಾರ್ಯಾಚರಣೆ ಮುಗಿಯುವವರೆಗೂ ವಧು-ವರರು ಕಾರಿನಲ್ಲೇ ಗಂಟೆಗಟ್ಟಲೇ ಕಾದು ಕುಳಿತುಕೊಂಡಿದ್ದಾರೆ. ಚಿರತೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಮರಳಿ ಅರಣ್ಯಕ್ಕೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಖಿಲೇಶ್​​ ಯಾದವ್​ ಟೀಕೆ:ಮದುವೆ ಮಂಟಪಕ್ಕೆ ಚಿರತೆ ಆಗಮಿಸಿದ್ದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಅವರು ಉತ್ತರಪ್ರದೇಶ ಸರ್ಕಾರವೇ ಕಾರಣ ಎಂದು ದೂರಿದ್ದಾರೆ. ಅರಣ್ಯವನ್ನು ಒತ್ತುವರಿ ಮಾಡಿಕೊಂಡ ಕಾರಣ, ಕಾಡು ಪ್ರಾಣಿಗಳು ಆಹಾರ ಅರಸಿ ನಗರಗಳಿಗೆ ನುಗ್ಗುತ್ತಿವೆ. ರಾಜ್ಯ ರಾಜಧಾನಿಯೊಳಗೇ ಕಾಡು ಮೃಗಗಳು ದಾಳಿ ಇಟ್ಟಿರುವುದು ಜನರಿಗೆ ಸವಾಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಮೈಸೂರು : ಬೇರ್ಪಟ್ಟ 3 ಚಿರತೆ ಮರಿಗಳನ್ನು ಮರಳಿ ತಾಯಿಯ ಮಡಿಲು ಸೇರಿಸಿದ ಅರಣ್ಯ ಇಲಾಖೆ

Last Updated : Feb 13, 2025, 11:06 PM IST

ABOUT THE AUTHOR

...view details