ಕರ್ನಾಟಕ

karnataka

ETV Bharat / bharat

ಚುನಾವಣೆಯಲ್ಲಿ ಬಹುಮತ ಬರದಿದ್ದರೆ ಬಿಜೆಪಿ ಜೊತೆ ಮೈತ್ರಿ ಇಲ್ಲ: ಫಾರೂಖ್​ ಅಬ್ದುಲ್ಲಾ - JK polls

ಜಮ್ಮು- ಕಾಶ್ಮೀರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ ಸರ್ಕಾರ ರಚನೆಗಾಗಿ ಬಿಜೆಪಿ ಜೊತೆ ನ್ಯಾಷನಲ್​​ ಕಾನ್ಫ್​​ರೆನ್ಸ್​​ ಮೈತ್ರಿ ಮಾತುಕತೆ ನಡೆಸಿದೆ ಎಂಬ ಗುಮಾನಿಗೆ ಪಕ್ಷ ಸ್ಪಷ್ಟನೆ ನೀಡಿದೆ.

By PTI

Published : 4 hours ago

ಫಾರೂಖ್​ ಅಬ್ದುಲ್ಲಾ
ಫಾರೂಖ್​ ಅಬ್ದುಲ್ಲಾ (ETV Bharat)

ಶ್ರೀನಗರ (ಜಮ್ಮು - ಕಾಶ್ಮೀರ):ದಶಕದ ಬಳಿಕ ಜಮ್ಮು- ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆದಿದ್ದು, ಅಕ್ಟೋಬರ್​​ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪಕ್ಷ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಗರಿಗೆದರಿದೆ. ನ್ಯಾಷನಲ್​ ಕಾನ್ಫ್​​ರೆನ್ಸ್​ (ಎನ್​ಸಿ) ಮತ್ತು ಕಾಂಗ್ರೆಸ್​ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿವೆ. ಪಿಡಿಪಿ, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದವು.

ಈ ಮಧ್ಯೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಸಿಗದೇ ಇದ್ದಲ್ಲಿ ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಲಿವೆ ಎಂಬ ಚರ್ಚೆಯೂ ಶುರುವಾಗಿದೆ. ನ್ಯಾಷನಲ್​​ ಕಾನ್ಫ್​​ರೆನ್ಸ್​ ಮುಖ್ಯಸ್ಥ ಫಾರೂಖ್​ ಅಬ್ದುಲ್ಲಾ ಅವರು ಈ ಬಗ್ಗೆ ಮಾತನಾಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗಾಗಿ ತಮ್ಮ ಪಕ್ಷವು ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಶನಿವಾರ ಘೋಷಿಸಿದ್ದಾರೆ.

ನಮ್ಮ ಪಕ್ಷ ಬಿಜೆಪಿಯ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಪಡೆದಿರುವ ಮತಗಳು ಬಿಜೆಪಿ ವಿರುದ್ಧವಾಗಿವೆ. ಇಲ್ಲಿನ ಮುಸ್ಲಿಮರಿಗೆ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದರು. ಅಂಗಡಿಗಳು, ಮನೆಗಳು, ಮಸೀದಿಗಳು ಮತ್ತು ಶಾಲೆಗಳನ್ನು ಬುಲ್ಡೋಜರ್‌ನಿಂದ ಬಿಜೆಪಿ ಒಡೆದು ಹಾಕಿದೆ. ಅಂತಹ ಪಕ್ಷದ ಜೊತೆಗೆ ನಾವು ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಸತ್ ಚುನಾವಣೆಯಲ್ಲಿ ಒಬ್ಬ ಮುಸ್ಲಿಂ ನಾಯಕನಿಗೆ ಸ್ಪರ್ಧೆಗೆ ಅವಕಾಶ ನೀಡಿಲ್ಲ. ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ಮುಸ್ಲಿಂ ಮಂತ್ರಿಯೂ ಇಲ್ಲ. ಚುನಾವಣೆಯಲ್ಲಿ ಜನರು ಬಿಜೆಪಿಗೆ ಮತ ಹಾಕಿರುವುದಿಲ್ಲ. ಬಿಜೆಪಿ ಸರ್ಕಾರ ರಚನೆ ಮಾಡುವ ಆಸೆ ಹೊಂದಿದ್ದರೆ ಅದು ಹಗಲುಕನಸು ಎಂದು ಹೇಳಿದ್ದಾರೆ.

ಬಿಜೆಪಿ ಜೊತೆ ಎನ್​​ಸಿ ಚರ್ಚೆ ಗುಮಾನಿ:ಕೇಂದ್ರಾಡಳಿತ ಪ್ರದೇಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದೇ ಹೋದಲ್ಲಿ ಬಿಜೆಪಿ ಜೊತೆ ಸೇರಲು ನ್ಯಾಷನಲ್​​ ಕಾನ್ಫ್​​ರೆನ್ಸ್​​ ಮಾತುಕತೆ ನಡೆಸಿದೆ ಎಂಬ ಗುಮಾನಿ ಹರಿದಾಡುತ್ತಿದೆ. ಇದಕ್ಕೆ ಪಕ್ಷದ ಮುಖ್ಯಸ್ಥರೇ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರ ರಚನೆಗಾಗಿ ಇಂಡಿಯಾ ಕೂಟದಲ್ಲಿನ ಪಕ್ಷಗಳ ಜೊತೆಗೆ ಸಂಪರ್ಕದಲ್ಲಿದ್ದೇವೆ. ಬಿಜೆಪಿ ಜೊತೆಗೆ ಸರ್ಕಾರ ರಚನೆ ಮಾಡುವ ಪ್ರಮೇಯವೇ ಇಲ್ಲ ಎಂದು ಹೇಳಿದೆ.

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪಕ್ಷಗಳು ಈಗ ಯಾವ ಸ್ಥಿತಿಯಲ್ಲಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಾಲಕ್ರಮೇಣ ಕೇಸರಿ ಪಡೆ ಸಣ್ಣ ಪಕ್ಷಗಳನ್ನು ನಾಶ ಮಾಡುತ್ತದೆ. ಎಕ್ಸಿಟ್​​ಪೋಲ್​​ಗಳ ಬಗ್ಗೆಯೂ ತಮಗೆ ನಂಬಿಕೆ ಇಲ್ಲ. ಇವಿಎಂಗಳಲ್ಲಿ ಮತ ಭವಿಷ್ಯವಿದೆ. ಅಕ್ಟೋಬರ್​​ 8 ರಂದು ನಿಖರ ಫಲಿತಾಂಶ ಬರಲಿದೆ ಎಂದರು.

ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಎನ್‌ಸಿ ಮುಖ್ಯಸ್ಥರು, ಫಲಿತಾಂಶ ಪ್ರಕಟವಾದ ನಂತರ ಈ ಬಗ್ಗೆ ನಿರ್ಧರಿಸಲಾಗುವುದು. ಮೊದಲು ಫಲಿತಾಂಶ ಬರಲಿ. ಬಳಿಕ ಕುಳಿತು ಮೈತ್ರಿ ಪಕ್ಷಗಳು ಈ ಬಗ್ಗೆ ಚರ್ಚೆ ನಡೆಸಲಿವೆ ಎಂದು ಹೇಳಿದರು.

ಇದನ್ನೂ ಓದಿ:ಪಿಎಂ ಇಂಟರ್ನ್‌ಶಿಪ್ ಯೋಜನೆಗೆ ಚಾಲನೆ: ವಿಜಯದಶಮಿಯಿಂದ ಅರ್ಜಿ ಸಲ್ಲಿಸಬಹುದು, ಯಾರಿಗೆಲ್ಲ ಪ್ರಯೋಜನ? - Prime Minister Internship Scheme

ABOUT THE AUTHOR

...view details