ಕರ್ನಾಟಕ

karnataka

'ಸುಳ್ಳು ದಾಖಲೆ, ರಸ್ತೆ ನಿಯಮ ಉಲ್ಲಂಘನೆ, ಅಕ್ರಮ ಮನೆ ನಿರ್ಮಾಣ': ಸಂಕಷ್ಟದಲ್ಲಿ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ - IAS Pooja Khedkar

By ETV Bharat Karnataka Team

Published : Jul 14, 2024, 8:16 PM IST

ಪ್ರೊಭೇಷನರಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ಮೇಲೆ ಹಲವು ಆರೋಪಗಳು ಹೊರಬರುತ್ತಿವೆ. ರಸ್ತೆ ನಿಯಮ ಉಲ್ಲಂಘನೆ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ.

ಟ್ರೇನಿ ಐಎಎಸ್​ ಅಧಿಕಾರಿ ಪೂಜಾ
ಟ್ರೇನಿ ಐಎಎಸ್​ ಅಧಿಕಾರಿ ಪೂಜಾ (ETV Bharat)

ಮುಂಬೈ (ಮಹಾರಾಷ್ಟ್ರ):ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿರುವ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ ದಿನಕ್ಕೊಂದು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೆಂಪು ದೀಪ ಬಳಸಿದ್ದ ವೈಯಕ್ತಿಕ ಕಾರನ್ನು ಪುಣೆ ಪೊಲೀಸರು ಜಪ್ತಿ ಮಾಡಿದ್ದಾರೆ. ಮತ್ತೊಂದೆಡೆ, ಪುಣೆ ಮುನ್ಸಿಪಲ್ ಕಾರ್ಪೊರೇಷನ್, ಪೂಜಾ ಅವರ ತಾಯಿ ಮನೋರಮಾ ಅವರಿಗೆ ಸೇರಿದ ಮನೆ ಅಕ್ರಮವಾಗಿ ನಿರ್ಮಾಣವಾಗಿದೆ ಎಂದು ನೋಟಿಸ್ ನೀಡಿದೆ.

ವಿವಾದಿತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ನಡೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇದರ ಜೊತೆಗೆ, ಐಎಎಸ್​​ ಅಧಿಕಾರಿಯಾಗಿ ನೇಮಕವಾದ ವೇಳೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಸ್ತೆ ನಿಯಮ ಉಲ್ಲಂಘಿಸಿದ ಆರೋಪ:ಪೂಜಾ ಖೇಡ್ಕರ್ ಅವರ ಕಾರಿನ ನಂಬರ್​ ಪ್ಲೇಟ್​ ಮೇಲೆ 'ಗವರ್ನಮೆಂಟ್ ಆಫ್ ಮಹಾರಾಷ್ಟ್ರ' ಎಂದು ಬರೆದಿದ್ದಲ್ಲದೆ, ಕೆಂಪು ದೀಪವನ್ನೂ ಅಳವಡಿಸಲಾಗಿತ್ತು. ಹಲವು ಬಾರಿ ರಸ್ತೆ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಕಾರಿನ ಮಾಲೀಕರಿಗೆ 21 ದಂಡದ ಚಲನ್​​ಗಳನ್ನು ಕಳುಹಿಸಲಾಗಿದೆ. ಅತಿಯಾದ ವೇಗದ ಚಾಲನೆ, ಸಿಗ್ನಲ್ ಉಲ್ಲಂಘನೆ ಸೇರಿ 21 ಆರೋಪಗಳ ಬಾಕಿ ದಂಡ ಪಾವತಿಸಬೇಕಿದೆ. ಹೀಗಾಗಿ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೂಜಾ ತಾಯಿಗೆ ನೋಟಿಸ್​:ಅಧಿಕಾರಿ ಪೂಜಾ ಅವರ ತಾಯಿ ಮನೋಹರ್​ ಖೇಡ್ಕರ್​ ಅವರು ಈ ಹಿಂದೆ ಬಹಿರಂಗವಾಗಿ ಪಿಸ್ತೂಲ್​ ತೋರಿಸಿ ರೈತರನ್ನು ಹೆದರಿಸಿದ ಘಟನೆಗೆ ಸಂಬಂಧಿಸಿದಂತೆ, ಪಿಸ್ತೂಲ್​ಗೆ ನೀಡಿದ ಪರವಾನಗಿಯನ್ನು ಏಕೆ ರದ್ದು ಮಾಡಬಾರದು ಎಂದು ಪ್ರಶ್ನಿಸಿ ಈ ಕುರಿತ ನೋಟಿಸ್​ ಅನ್ನು ಅವರ ಮನೆಗೆ ಪೊಲೀಸರು ಅಂಟಿಸಿದ್ದಾರೆ.

ಜೊತೆಗೆ, ಪುಣೆ ಮುನ್ಸಿಪಲ್ ಕಾರ್ಪೋರೇಷನ್ ಅಧಿಕಾರಿಗಳು ನಗರದಲ್ಲಿರುವ ಅವರ ಬಂಗಲೆಯು ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿ ನೋಟಿಸ್ ನೀಡಿದೆ. ಅಧಿಕಾರಿಗಳು ನೋಟಿಸ್​ ಅನ್ನು ನೀಡಲು ಬಂದಾಗ, ಸ್ಪಂದಿಸದ ಕಾರಣ, ಬಂಗಲೆಯ ಮುಖ್ಯ ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಬಂಗಲೆಯ ಹೊರಭಾಗದಲ್ಲಿ ನಿರ್ಮಿಸಿರುವ ಕಟ್ಟಡಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದ್ದು, ಮುಂದಿನ ಏಳು ದಿನಗಳೊಳಗೆ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿ ಎಂದು ನೋಟಿಸ್‌ನಲ್ಲಿ ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.

ರೈತರಿಗೆ ಗನ್​ ತೋರಿಸಿದ ಕೇಸ್​:ಪೂಜಾ ಅವರ ತಾಯಿ ಮನೋರಮಾ ಅವರು ಕೈಯಲ್ಲಿ ಪಿಸ್ತೂಲ್ ಹಿಡಿದು ರೈತನಿಗೆ ಬೆದರಿಕೆ ಹಾಕಿರುವ ವಿಡಿಯೋ ಹರಿದಾಡುತ್ತಿದೆ. ಜೂನ್ 5, 2023 ರಂದು ಜಮೀನು ಒತ್ತುವರಿ ಮಾಡಲಾಗಿದೆ ಎಂದು ರೈತರು ಪೂಜಾ ಅವರ ಕುಟುಂಬದ ವಿರುದ್ಧ ಪ್ರತಿಭಟಿಸುತ್ತಿದ್ದಾಗ ಮನೋರಮಾ ಅವರು, ರೈತರಿಗೆ ಗನ್​ ತೋರಿಸಿ ಬೆದರಿಸಿದ್ದಾರೆ. ಈ ಸಂಬಂಧ ಅವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಳು ದಾಖಲೆ ನೀಡಿದ್ದರೇ ಪೂಜಾ:ಇನ್ನೂ, ಐಎಎಸ್​ ಅಧಿಕಾರಿಯಾಗಿ ಪೂಜಾ ಆಯ್ಕೆಯಾದ ಬಳಿಕ ತಮಗೆ ದೃಷ್ಟಿದೋಷ ಮತ್ತು ಮಾನಸಿಕ ಅಸ್ವಸ್ಥತೆ ಇದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆಯೂ ತನಿಖೆಗೆ ಆಗ್ರಹಿಸಲಾಗಿದೆ.

ಇದನ್ನೂ ಓದಿ:ಟ್ರೈನಿಂಗ್ ಅವಧಿಯಲ್ಲೇ ಐಎಎಸ್ ಅಧಿಕಾರಿ ಪೂಜಾ ವಿವಾದ; ರೈತರಿಗೆ ಪಿಸ್ತೂಲ್ ಹಿಡಿದು ಬೆದರಿಸಿದ್ದ ತಾಯಿ! - Pooja Khedkar

ABOUT THE AUTHOR

...view details