ಹೈದರಾಬಾದ್: ನಾಯಿಯಿಂದ ತಪ್ಪಿಸಿಕೊಳ್ಳಲು ಮುಂದಾದ ಯುವಕನೊಬ್ಬ ಹೋಟೆಲ್ನ ಮೂರನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಭಾನುವಾರ ಈ ಘಟನೆ ನಡೆದಿದ್ದರೂ, 24 ಗಂಟೆಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಚಂದಾನಗರ್ ಪೊಲೀಸ್ ಠಾಣೆಯ ಅಡಿಯ ವಿವಿ ಪ್ರೈಡ್ ಕ್ಲಾಸಿಕ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ.
ನೆರೆಯ ಆಂಧ್ರಪ್ರದೇಶದ ತೆನಾಲಿ ಮೂಲದ ಉದಯ್(23) ಸಾವನ್ನಪ್ಪಿದ ಯುವಕ. ತನ್ನ ಸ್ನೇಹಿತನೊಂದಿಗೆ ರಾಮಚಂದ್ರಪುರಂನಲ್ಲಿನ ಅಶೋಕ್ ನಗರ ಪ್ರದೇಶದ ಹೋಟೆಲ್ನಲ್ಲಿ ಇವರು ವಾಸ್ತವ್ಯ ಹೂಡಿದ್ದರು. ಈ ವೇಳೆ ಹೋಟೆಲ್ನ ಮೂರನೇ ಮಹಡಿಗೆ ಹೋದಾಗ ಅಲ್ಲಿ ಕಾರಿಡಾರ್ನಲ್ಲಿದ್ದ ನಾಯಿ ಇವರ ಮೇಲೆ ದಾಳಿಗೆ ಸಜ್ಜಾಗಿದೆ. ಇದರಿಂದ ಆತಂಕಗೊಂಡ ಯುವಕ ತನ್ನ ರಕ್ಷಣೆಗಾಗಿ ಅಲ್ಲಿನ ಕಿಟಿಕಿಯಿಂದ ಹೊರ ಜಿಗಿದಿದ್ದಾನೆ.
ಜಿಗಿತದಿಂದ ಗಂಭೀರವಾಗಿ ಗಾಯಗೊಂಡ ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಲಿಸಲಾಗಿತ್ತು. ಆದರೆ, ಆತ ಮಾರ್ಗ ಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.