ಕರ್ನಾಟಕ

karnataka

ಹೈದರಾಬಾದ್​ನಲ್ಲಿ ಭಾರಿ ಮಳೆ: ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿ - HUSSAIN SAGAR LAKE

By ETV Bharat Karnataka Team

Published : Sep 1, 2024, 4:50 PM IST

ಹೈದರಾಬಾದಿನ ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿಯಾಗಿದೆ.

ಹುಸೇನ್ ಸಾಗರ್ ಸರೋವರ
ಹುಸೇನ್ ಸಾಗರ್ ಸರೋವರ (IANS)

ಹೈದರಾಬಾದ್: ಭಾರೀ ಮಳೆ ಮತ್ತು ನೀರಿನ ಭಾರೀ ಒಳಹರಿವಿನಿಂದಾಗಿ ಹೈದರಾಬಾದ್ ನ ಹೃದಯಭಾಗದಲ್ಲಿರುವ ಹುಸೇನ್ ಸಾಗರ್ ಸರೋವರ ಸಂಪೂರ್ಣ ಭರ್ತಿಯಾಗಿದ್ದು, ಅಧಿಕಾರಿಗಳು ಭಾನುವಾರ ನಾಲ್ಕು ಸ್ಲೂಯಿಸ್ ಗೇಟ್ ಗಳನ್ನು ತೆರೆದು ನೀರನ್ನು ಬಿಡುಗಡೆ ಮಾಡಿದ್ದಾರೆ. ಸರೋವರದಿಂದ ನೀರು ಹೊರ ಹೋಗುವ ಕಾಲುವೆಗಳ ಪಾತ್ರದಲ್ಲಿ ವಾಸಿಸುವ ಜನತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ಎಂಸಿ) ಸೂಚಿಸಿದೆ.

ಶನಿವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೈದರಾಬಾದ್ ಮತ್ತು ಸಿಕಂದರಾಬಾದ್ ಅವಳಿ ನಗರಗಳ ವಿವಿಧ ಭಾಗಗಳಿಂದ ಭಾರಿ ಪ್ರಮಾಣದ ಮಳೆನೀರು ಚರಂಡಿಗಳ ಮೂಲಕ ಹುಸೇನ್ ಸಾಗರ್ ಗೆ ಹರಿದು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 514 ಮೀಟರ್ ಇದ್ದು, ಇಂದಿನ ನೀರಿನ ಮಟ್ಟ 513.60 ಮೀಟರ್ ಇದೆ. ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರೆದಿದ್ದು, ಜಿಎಚ್ ಎಂಸಿ ಅಧಿಕಾರಿಗಳು ನೀರಿನ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಮುಂದಿನ 24 ಗಂಟೆಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಎಚ್ ಎಂಸಿ ಈಗಾಗಲೇ ಅಲರ್ಟ್​ ಹೊರಡಿಸಿದೆ ಎಂದು ಉಪ ಮೇಯರ್ ಶ್ರೀ ಲತಾ ಹೇಳಿದರು. ಮಳೆಯಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ವಿವಿಧ ವಿಭಾಗಗಳಿಗೆ ನಿರ್ದೇಶಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, 11 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಹೈದರಾಬಾದ್ ಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಹೈದರಾಬಾದ್ ಜಿಲ್ಲಾಧಿಕಾರಿ ಈಗಾಗಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದ್ದಾರೆ. ನಿರಂತರ ಮಳೆಯ ಹಿನ್ನೆಲೆಯಲ್ಲಿ ನಾಗರಿಕರು ಆದಷ್ಟೂ ಮನೆಯಲ್ಲಿಯೇ ಇರಬೇಕೆಂದು ಜಿಎಚ್ಎಂಸಿ ಆಯುಕ್ತ ಅಮ್ರಪಾಲಿ ಕಟಾ ವಿನಂತಿಸಿದ್ದಾರೆ. ತೀರಾ ಅಗತ್ಯವಿಲ್ಲದ ಹೊರತು ರಸ್ತೆಗಿಳಿಯಬೇಡಿ ಎಂದು ಅವರು ಜನರಿಗೆ ಮನವಿ ಮಾಡಿದ್ದಾರೆ.

ಏತನ್ಮಧ್ಯೆ, ಮೇಲ್ಭಾಗದಿಂದ ಭಾರಿ ಒಳಹರಿವಿನಿಂದಾಗಿ, ಹೈದರಾಬಾದ್​ನ ಮೂಸಿ ನದಿಗೆ ಅಡ್ಡಲಾಗಿ ಇರುವ ಅವಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ಉಸ್ಮಾನ್ ಸಾಗರ್​ನ ನೀರಿನ ಮಟ್ಟವು 1,781 ಅಡಿಗಳಷ್ಟಿತ್ತು ಹಾಗೂ ಎಫ್​ಟಿಎಲ್ 1,790 ಅಡಿಗಳಷ್ಟಿತ್ತು. ಹಿಮಾಯತ್ ಸಾಗರದಲ್ಲಿ ನೀರಿನ ಮಟ್ಟವು 1,755.85 ಅಡಿಗಳಷ್ಟಿದ್ದು, ಎಫ್ ಟಿಎಲ್ 1,763.50 ಅಡಿಗಳಷ್ಟಿದೆ.

ಇದನ್ನೂ ಓದಿ : ಕೇಂದ್ರ ವಾಯು ಕಮಾಂಡ್​ನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ದೀಕ್ಷಿತ್ ಅಧಿಕಾರ ಸ್ವೀಕಾರ - AIR MARSHAL DIXIT

ABOUT THE AUTHOR

...view details