ಕೋಲ್ಕತ್ತಾ (ಪಶ್ಚಿಮ ಬಂಗಾಳ):ಸರ್ಕಾರಿ ಆಸ್ಪತ್ರೆಗಳ ಆಂಬ್ಯುಲೆನ್ಸ್ ಮಾಫಿಯಾಕ್ಕೆ ತಡೆ ಇಲ್ಲವಾಗಿದೆ. ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ, ವೈದ್ಯರ ಕೊರತೆ ನಡುವೆ ಈ ಜೀವರಕ್ಷಕ ವಾಹನದ ದಂಧೆ ಕೂಡ ಜೋರಾಗಿದೆ. ಮಹಿಳೆ, ಮಕ್ಕಳು, ವೃದ್ಧರು ಎನ್ನದೇ ಹಣಕ್ಕಾಗಿ ಅದರ ಚಾಲಕರು ರಕ್ತಪಿಪಾಸುಗಳಾಗಿ ಬದಲಾಗುತ್ತಿದ್ದಾರೆ. ಇಂಥದ್ದೊಂದು ಘಟನೆ ಪಶ್ಚಿಮಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಆಸ್ಪತ್ರೆಯಲ್ಲಿ ಹೆರಿಗೆಯ ಬಳಿಕ ಮನೆಗೆ ವಾಪಸ್ ಕರೆತರಬೇಕಿದ್ದ ಆಂಬ್ಯುಲೆನ್ಸ್ ಚಾಲಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಕೇಳಿದಷ್ಟು ಹಣ ನೀಡಿಲ್ಲ ಎಂದು ನವಜಾತ ಶಿಶು, ತಾಯಿ ಮತ್ತು ಆಕೆಯ ಕುಟುಂಬವನ್ನು ನಡು ರಸ್ತೆಯಲ್ಲೇ ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಅಲ್ಲಿನ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ.
ಘಟನೆಯ ವಿವರ:ಪೂರ್ವ ಬುರ್ದವಾನ್ ಜಿಲ್ಲೆಯ ಕತ್ವಾ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ಧರಸೋನಾ ಗ್ರಾಮಕ್ಕೆ ಸೇರಿದ ಗರ್ಭಿಣಿಯೊಬ್ಬರು ಕತ್ವಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಗುರುವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎರಡು ದಿನಗಳ ಬಳಿಕ ಅಂದರೆ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಕತ್ವಾ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ದಾರಿ ಮಧ್ಯೆ ಆಂಬ್ಯುಲೆನ್ಸ್ ಚಾಲಕ ಮನೆವರೆಗೂ ಬಿಡಲು ಹೆಚ್ಚುವರಿ ಹಣ ಕೇಳಿದ್ದಾನೆ. ತಮ್ಮಲ್ಲಿ ಕೊಡುವಷ್ಟು ಹಣ ಇಲ್ಲ ಎಂದು ನವಜಾತ ಶಿಶುವಿನ ತಾಯಿ ಮತ್ತು ಕುಟುಂಬ ಕೇಳಿಕೊಂಡರೂ, ಆತ ಗ್ರಾಮಕ್ಕೆ ತೆರಳದೆ ನಡುರಸ್ತೆಯಲ್ಲೇ ಎಲ್ಲರನ್ನು ಇಳಿಸಿ ಹೊರಟಿದ್ದಾನೆ.