ಕರ್ನಾಟಕ

karnataka

ಮಣಿಪುರ ಹಿಂಸಾಚಾರ : ಉಗ್ರರು-ಶಸ್ತ್ರಸಜ್ಜಿತ ಪುರುಷರ ನಡುವೆ ಗುಂಡಿನ ಚಕಮಕಿ, ಐವರು ಸಾವು - MANIPUR VIOLENCE

By ETV Bharat Karnataka Team

Published : Sep 7, 2024, 1:16 PM IST

ಕಳೆದ ವಾರ ಡ್ರೋನ್ ದಾಳಿಗೆ ಇಡೀ ಮಣಿಪುರವೇ ಬೆಚ್ಚಿಬಿದ್ದಿತ್ತು. ಇದೀಗ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದುಬಂದಿದೆ.

Manipur
ಮಣಿಪುರ ಹಿಂಸಾಚಾರ (ANI)

ಬಿಷ್ಣುಪುರ್ (ಮಣಿಪುರ) :ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಹಿಂಸಾಚಾರದಲ್ಲಿ ಉಗ್ರರು ಐವರನ್ನ ಗುಂಡಿಕ್ಕಿ ಕೊಂದಿದ್ದಾರೆ. ಅವರಲ್ಲಿ ಒಬ್ಬರಿಗೆ ನಿದ್ರೆಯಲ್ಲಿದ್ದಾಗಲೇ ಗುಂಡು ಹಾರಿಸಿದ್ದಾರೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ 5 ಕಿ.ಮೀ ದೂರದ ಪ್ರತ್ಯೇಕ ಸ್ಥಳದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ವ್ಯಕ್ತಿಯ ಮನೆಗೆ ನುಗ್ಗಿದ ಉಗ್ರರು ನಿದ್ದೆಯಲ್ಲಿರುವಾಗಲೇ ಅವರನ್ನ ಗುಂಡಿಟ್ಟು ಕೊಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ಹತ್ಯೆಯ ನಂತರ, ಜಿಲ್ಲಾ ಕೇಂದ್ರದಿಂದ 7 ಕಿ.ಮೀ ದೂರದಲ್ಲಿರುವ ಬೆಟ್ಟಗಳಲ್ಲಿ ಉಗ್ರರು ಹಾಗೂ ಶಸ್ತ್ರಸಜ್ಜಿತ ಪುರುಷರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ಉಗ್ರಗಾಮಿಗಳು ಸೇರಿದಂತೆ ನಾಲ್ವರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಹತ್ಯೆಗಳು ಈಶಾನ್ಯ ರಾಜ್ಯದಲ್ಲಿ ಮತ್ತೆ ಹಿಂಸಾಚಾರಕ್ಕೆ ಭುಗಿಲೇಳಲು ದಾರಿಮಾಡಿಕೊಡುತ್ತಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರವು ರಾಕೆಟ್ ದಾಳಿಗಳು ಮತ್ತು ಕಳೆದ ಕೆಲವು ವಾರಗಳಲ್ಲಿ ರಾಜ್ಯವನ್ನೇ ನಡುಗಿಸಿರುವ ಡ್ರೋನ್ ದಾಳಿಗಳೊಂದಿಗೆ ತೀವ್ರಗೊಂಡಿದೆ. ಈ ಸಂಘರ್ಷ ಭದ್ರತಾ ಪಡೆಗಳಿಗೆ ಸವಾಲಾಗಿ ಪರಿಣಮಿಸಿದೆ.

ಮಣಿಪುರದಲ್ಲಿ ಸೆಪ್ಟೆಂಬರ್ 1 ರಿಂದ ಹಿಂಸಾಚಾರ ತೀವ್ರಗೊಂಡಿದ್ದು, ಶಂಕಿತ ಕುಕಿ ಉಗ್ರಗಾಮಿಗಳು ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿ ನ್ಗಂಗ್‌ಬಾಮ್ ಸುರ್ಬಾಲಾ (31) ಎಂಬುವರನ್ನು ಕೊಂದಿದ್ದಾರೆ. ಹಾಗೆಯೇ ಕೌಟ್ರುಕ್‌ನಲ್ಲಿ ನಡೆದ ದಾಳಿಯಲ್ಲಿ ಅವರ 8 ವರ್ಷದ ಮಗಳು ಮತ್ತು ಇಬ್ಬರು ಪೊಲೀಸರು ಹಾಗೂ ಇತರ ಮೂವರು ನಾಗರಿಕರು ಗಾಯಗೊಂಡಿದ್ದರು.

''ಕುಕಿ ಉಗ್ರಗಾಮಿಗಳು ಹೈಟೆಕ್ ಡ್ರೋನ್‌ಗಳನ್ನು ಬಳಸಿಕೊಂಡು ಹಲವಾರು ಆರ್‌ಪಿಜಿಗಳನ್ನು ನಿಯೋಜಿಸಿದ್ದಾರೆ. ಒಂದೆಡೆ ಡ್ರೋನ್ ಬಾಂಬ್‌ಗಳನ್ನು ಸಾಮಾನ್ಯ ಯುದ್ಧಗಳಲ್ಲಿ ಬಳಸುತ್ತಿರುವ ಈ ಸಂದರ್ಭದಲ್ಲಿ ಮಣಿಪುರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಈ ದ್ರೋನ್​ ದಾಳಿಗಳು ಜನರ ನಿದ್ದೆಗೆಡಿಸಿವೆ. ಹೆಚ್ಚು ತರಬೇತಿ ಪಡೆದ ವೃತ್ತಿಪರರ ಒಳಗೊಳ್ಳುವಿಕೆ, ತಾಂತ್ರಿಕ ಪರಿಣತರು ಇದರಲ್ಲಿ ಪಾಲ್ಗೊಂಡಿರುವುದನ್ನ ತಳ್ಳಿಹಾಕುವಂತಿಲ್ಲ. ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದೆ ಉದ್ಭವಿಸಬಹುದಾದ ಯಾವುದೇ ಅನಿಶ್ಚಿತತೆಗೆ ಪ್ರತಿಕ್ರಿಯಿಸಲು ಪೊಲೀಸರು ಸಿದ್ಧರಾಗಿದ್ದಾರೆ” ಎಂದು ಮಣಿಪುರ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪ್ರತ್ಯೇಕ ಸರ್ಕಾರ; ಸಿಎಂ ವಿರುದ್ಧ ಕುಕಿ ಸಮುದಾಯ ​​ಹೋರಾಟ - Kuki community protests

ABOUT THE AUTHOR

...view details