ಶ್ರೀನಗರ: ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಆರ್ಎಸ್ಎಸ್ನ ಮಿತ್ರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಅಧ್ಯಕ್ಷ ಡಾ.ಫಾರೂಕ್ ಅಬ್ದುಲ್ಲಾ ರವಿವಾರ ಗಂಭೀರ ಆರೋಪ ಮಾಡಿದ್ದಾರೆ. ಜಮಾತೆ ಇಸ್ಲಾಮಿಯ ಮಾಜಿ ಸದಸ್ಯರುಗಳು ಮತ್ತು ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಇಬ್ಬರೂ ಆರ್ಎಸ್ಎಸ್ನ ಮಿತ್ರರು ಮತ್ತು ಮುಸ್ಲಿಮ್ ಮತಗಳನ್ನು ವಿಭಜಿಸುವ ಸಲುವಾಗಿಯೇ ಅವರನ್ನು ಚುನಾವಣೆಯ ಕಣಕ್ಕೆ ಇಳಿಸಲಾಗಿದೆ ಡಾ. ಅಬ್ದುಲ್ಲಾ ಆರೋಪಿಸಿದ್ದಾರೆ.
ಗಂದರ್ ಬಾಲ್ ಜಿಲ್ಲೆಯಲ್ಲಿ ತಮ್ಮ ಪಕ್ಷದ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ನಾನು ಕೇವಲ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಎಂಜಿನಿಯರ್ ರಶೀದ್ ಅವರನ್ನು ಮೊದಲೇ ಏಕೆ ಜೈಲಿನಿಂದ ಬಿಡುಗಡೆ ಮಾಡಲಿಲ್ಲ ಮತ್ತು ಈಗ ಅವರನ್ನು ಬಿಡುಗಡೆ ಮಾಡಿರುವ ಉದ್ದೇಶವೇನು? ಅವರು ಆರ್ಎಸ್ಎಸ್ನ ಮಿತ್ರರಾಗಿದ್ದು, ಮುಸ್ಲಿಮರ ಮತಗಳನ್ನು ವಿಭಜಿಸುವ ಸಲುವಾಗಿಯೇ ಅವರನ್ನು ಚುನಾವಣೆಯಲ್ಲಿ ನಿಲ್ಲಿಸಲಾಗಿದೆ" ಎಂದು ಅವರು ಹೇಳಿದರು.
ಸ್ಥಳೀಯ ಜಮಾತ್-ಎ-ಇಸ್ಲಾಮಿ (ಜೆಇಐ) ಸದಸ್ಯರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ ಅವರು, "ನಿನ್ನೆಯವರೆಗೆ ರಾಜ್ಯದಲ್ಲಿ ಅವರು ಜನಮತಗಣನೆ ನಡೆಸುವ ಬಗ್ಗೆ ಮಾತನಾಡುತ್ತಿದ್ದರು ಮತ್ತು ಪಾಕಿಸ್ತಾನವನ್ನು ಬೆಂಬಲಿಸುವವರಾಗಿದ್ದರು. ಅವರ ಈ ನಿಲುವು ಏನಾಯಿತು ಎಂದು ಅವರನ್ನು ಕೇಳಬೇಕಿದೆ. ಅವರೆಲ್ಲರೂ ಆರ್ಎಸ್ಎಸ್ನ ಸ್ನೇಹಿತರಾಗಿದ್ದಾರೆ" ಎಂದು ಅಬ್ದುಲ್ಲಾ ಆರೋಪಿಸಿದರು.