ನವದೆಹಲಿ: ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವ ಕೇಂದ್ರದ 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಯ ವಿರುದ್ಧ ಕಾಂಗ್ರೆಸ್ ತನ್ನ ನಿಲುವು ದೃಢಪಡಿಸುತ್ತಿದೆ ಮತ್ತು ಬೆಂಬಲ ಕ್ರೋಢೀಕರಿಸುತ್ತಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಎನ್ಡಿಎ ಲೋಕಸಭೆಯಲ್ಲಿ ಅಗತ್ಯ ಸಂಖ್ಯೆ ಬಲ ಹೊಂದಿಲ್ಲ. ಅಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ' ಯೋಜನೆಯನ್ನು ಜಾರಿಗೆ ಸಾಂವಿಧಾನಿಕ ತಿದ್ದುಪಡಿ ಮಂಡಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. 543 ಸಂಖ್ಯಾಬಲದ ಲೋಕಸಭೆಯಲ್ಲಿ ಎನ್ಡಿಎ ಕೇವಲ 293 ಸದಸ್ಯರನ್ನು ಹೊಂದಿದೆ. ಆದರೆ, ಸಾಂವಿಧಾನಿಕ ತಿದ್ದುಪಡಿ ಮಾಡಲು 362 ಸದಸ್ಯರ ಮತಗಳು ಅಗತ್ಯವಿದೆ.
"ಲೋಕಸಭೆಯಲ್ಲಿ ಎನ್ಡಿಎಗೆ ಸಂಖ್ಯಾಬಲ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಇಂತಹ ಯಾವುದೇ ಮಸೂದೆಯನ್ನು ತಂದರೆ ಅದು ತೀವ್ರ ವಿರೋಧ ಎದುರಿಸಬೇಕಾಗುತ್ತದೆ. ಈ ವಿಷಯದ ಕುರಿತು ನಾವು ಸದನದಲ್ಲಿ ಇಂಡಿಯಾ ಮೈತ್ರಿ ಪಕ್ಷಗಳ ಬೆಂಬಲ ಕ್ರೋಢೀಕರಿಸುತ್ತೇವೆ. ಇದು ಅಪ್ರಾಯೋಗಿಕ ಕಲ್ಪನೆ ಎಂದು ನಾವು ನಂಬುತ್ತೇವೆ" ಎಂದು ಲೋಕಸಭೆ ಸಂಸದೆ ಪ್ರಣಿತಿ ಶಿಂಧೆ ಈಟಿವಿ ಭಾರತ್ಗೆ ತಿಳಿಸಿದರು.
ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ:“ಚುನಾವಣೆ ಬಂದಾಗಲೆಲ್ಲ ಅವರು ಈ ರೀತಿಯ ವಿಚಾರಗಳನ್ನು ಪ್ರಸ್ತುತಪಡಿಸುತ್ತಾರೆ. ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ಅಸೆಂಬ್ಲಿ ಚುನಾವಣೆಗಳನ್ನು ಒಟ್ಟಿಗೆ ಏಕೆ ನಡೆಸಲಾಗಲಿಲ್ಲ?. ಇದೆಲ್ಲವೂ ಉದ್ಯೋಗಗಳು ಮತ್ತು ಹೆಚ್ಚಿನ ಬೆಲೆಗಳ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಾಗಿದೆ" ಎಂದು ಎಐಸಿಸಿ ಕಾರ್ಯಾಧ್ಯಕ್ಷ ಅಜೋಯ್ ಕುಮಾರ್ ಹೇಳಿದರು.
'ಒಂದು ರಾಷ್ಟ್ರ, ಒಂದು ಚುನಾವಣೆ' ವರದಿಯನ್ನು ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ ಮತ್ತು ಸಂವಿಧಾನದ ತಿದ್ದುಪಡಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಕಾಂಗ್ರೆಸ್ ಮಾತ್ರವಲ್ಲದೇ ಹಲವಾರು ಮಿತ್ರಪಕ್ಷಗಳು ಮತ್ತು ಇತರ ಪ್ರಾದೇಶಿಕ ಪಕ್ಷಗಳು ಸಹ ಕೇಂದ್ರದ ಈ ಯೋಜನೆಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ನ ನಾಯಕರು ತಿಳಿಸಿದ್ದಾರೆ.