ಕರ್ನಾಟಕ

karnataka

ರಾಹುಲ್‌ ದೇಗುಲ ಪ್ರವೇಶಕ್ಕೆ ಅವಕಾಶ ನಿರಾಕರಣೆ: ಹೈದರಾಬಾದ್‌ನಲ್ಲಿ ಕಾಂಗ್ರೆಸ್‌ ಕ್ಯಾಂಡಲ್​ ರ‍್ಯಾಲಿ

By ETV Bharat Karnataka Team

Published : Jan 23, 2024, 6:31 AM IST

Updated : Jan 23, 2024, 6:47 AM IST

ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರಿಗೆ ದೇವಸ್ಥಾನವೊಂದರ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದನ್ನು ಖಂಡಿಸಿ ತೆಲಂಗಾಣದಲ್ಲಿ ಕಾಂಗ್ರೆಸ್ ಮುಖಂಡರು ಕ್ಯಾಂಡಲ್​ ರ‍್ಯಾಲಿ ನಡೆಸಿದರು.

ಕ್ಯಾಂಡಲ್​ ಹಿಡಿದು ಕೈ ನಾಯಕರ​ ರ್ಯಾಲಿ
ಕ್ಯಾಂಡಲ್​ ಹಿಡಿದು ಕೈ ನಾಯಕರ​ ರ್ಯಾಲಿ

ಹೈದರಾಬಾದ್​:'ಭಾರತ್ ಜೋಡೋ ನ್ಯಾಯ ಯಾತ್ರೆ'ಯ ವೇಳೆ ಕಾಂಗ್ರೆಸ್‌ ಮುಖಂಡ, ಸಂಸದ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ರಾಜ್ಯದ ನಾಗಾವ್‌ನಲ್ಲಿರುವ ಶಂಕರದೇವ್ ಅವರ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವುದನ್ನು ವಿರೋಧಿಸಿ ತೆಲಂಗಾಣ ಕಾಂಗ್ರೆಸ್ ಮುಖಂಡರು ಸೋಮವಾರ ಕ್ಯಾಂಡಲ್​ ರ‍್ಯಾಲಿ ನಡೆಸಿದರು. ಐಟಿ ಸಚಿವ ಡಿ.ಶ್ರೀಧರ್ ಬಾಬು ರ‍್ಯಾಲಿಯ ನೇತೃತ್ವ ವಹಿಸಿದ್ದರು. ಬಾಬು ಜಗಜೀವನ್ ರಾಮ್ ಪ್ರತಿಮೆಯಿಂದ ಬಶೀರ್‌ಬಾಗ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆವರೆಗೆ ರ‍್ಯಾಲಿ ಸಾಗಿತು.

ಅಸ್ಸಾಂನಲ್ಲಿ ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಗೆ ಅಡ್ಡಿಪಡಿಸಿರುವ ಬಗ್ಗೆ ತೆಲಂಗಾಣ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು. ಯಾತ್ರೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದನ್ನು ಕಂಡು ಬಿಜೆಪಿ ಆತಂಕಕ್ಕೆ ಒಳಗಾಗಿದೆ. ಅದಕ್ಕಾಗಿಯೇ ಯಾತ್ರೆಯನ್ನು ತಡೆದಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದರು.

ರಾಹುಲ್ ಗಾಂಧಿ ಮೇಲಿನ ದಾಳಿಯನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದೂ ಅವರು ಟೀಕಿಸಿದರು. ಈ ಹಿನ್ನೆಲೆಯಲ್ಲಿ ತೆಲಂಗಾಣ ಕಾಂಗ್ರೆಸ್ ರಾಜ್ಯಾದ್ಯಂತ ಬೃಹತ್ ಪ್ರತಿಭಟನಾ ಕಾರ್ಯಕ್ರಮಕ್ಕೆ ಕರೆ ನೀಡಿದೆ ಎಂದು ಟಿಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಸಂಘಟನೆ ಉಸ್ತುವಾರಿ ಮಹೇಶ್ ಕುಮಾರ್ ಗೌಡ್ ತಿಳಿಸಿದ್ದಾರೆ.

ಬಿಜೆಪಿಯು ರಾಹುಲ್ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಈ ಕುರಿತು ಅವರು ಕ್ಷಮೆ ಯಾಚಿಸಬೇಕು ಎಂದು ಸಚಿವ ಶ್ರೀಧರ್ ಬಾಬು ಆಗ್ರಹಿಸಿದರು. ಅಸ್ಸಾಂನ ಹೈಬೋರಗಾಂವ್‌ನ ಬೋರ್ದುವಾದಲ್ಲಿರುವ ಶ್ರೀ ಶಂಕರ ದೇವ್ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ರಾಹುಲ್ ಅವರನ್ನು ತಡೆದಿರುವುದು ಬಿಜೆಪಿಯ ದುರ್ಬಲ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ವಿರುದ್ಧ ರಾಹುಲ್​ ವಾಗ್ದಾಳಿ:ಶಂಕರದೇವ್ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿದ ರಾಹುಲ್​ ಗಾಂಧಿ, ಈ ಹಿಂದೆ ದೇವಸ್ಥಾನ ಆಡಳಿತ ನನಗೆ ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಿತ್ತು. ಆದರೆ ಇಂದು ಇದೇ ಜನರು ನಾನು ಅಲ್ಲಿಗೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಬಂದಿರುವುದಾಗಿ ಮಾಧ್ಯಮಗಳಿಗೆ ಅವರು ಹೇಳಿದ್ದಾರೆ.

ಇದನ್ನೂ ಓದಿ:ಅಯೋಧ್ಯೆಯಲ್ಲಿ ಆರ್ಥಿಕತೆ ಉತ್ತೇಜಿಸಲಿದೆಯೇ ರಾಮಮಂದಿರ?: ಇಲ್ಲಿದೆ ಮಾಹಿತಿ

Last Updated : Jan 23, 2024, 6:47 AM IST

ABOUT THE AUTHOR

...view details