ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬುದ್ಧಿವಂತ ನಟ ನಿರ್ದೇಶಕನೆಂಬ ಜನಪ್ರಿಯತೆಯ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಿಯಲ್ ಸ್ಟಾರ್ ನಟಿಸಿ, ನಿರ್ದೇಶನ ಮಾಡಿರೋ ಬಹುನಿರೀಕ್ಷಿತ "ಯುಐ" ಚಿತ್ರದ ಬಗ್ಗೆ ಮಾತನಾಡಲು ಬೆಂಗಳೂರಿನ ಕತ್ರಿಗುಪ್ಪಿಯಲ್ಲಿರೋ ನಿವಾಸದಲ್ಲಿ ಮಾಧ್ಯಮಗೋಷ್ಟಿ ಹಮ್ಮಿಕೊಂಡಿದ್ದರು.
ಈ ಸಂದರ್ಭ ನಿರ್ಮಾಪಕರಾದ ಜಿ.ಮನೋಹರನ್, ಕೆ.ಪಿ. ಶ್ರೀಕಾಂತ್, ಸಹ ನಿರ್ಮಾಪಕರಾದ ನವೀನ್, ತುಳಸಿರಾಮ ನಾಯ್ಡು (ಲಹರಿ ವೇಲು), ನಾಯಕಿ ರೀಶ್ಮಾ ನಾಣಯ್ಯ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
![UI film team](https://etvbharatimages.akamaized.net/etvbharat/prod-images/18-09-2024/22482820_bsvdgsg.jpg)
ಮೊದಲು ಮಾತನಾಡಿದ ನಟ-ನಿರ್ದೇಶಕ ಉಪೇಂದ್ರ, ''ಹುಟ್ಟುಹಬ್ಬಕ್ಕೆ ಹಾರೈಸಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಐದಾರು ಮದುವೆ ಆಗಬಹುದು. ಆದರೆ ಒಂದು ಚಿತ್ರ ನಿರ್ದೇಶನ ಮಾಡುವುದು ಅದಕ್ಕಿಂತ ಹೆಚ್ಚು ಕಷ್ಟ. ನಾನು ಬಹಳ ವರ್ಷಗಳ ನಂತರ ನಿರ್ದೇಶಿಸಿರುವ "ಯುಐ" ಚಿತ್ರ ಬಿಡುಗಡೆ ಹಂತಕ್ಕೆ ತಲುಪಿದೆ. ಸಿನಿಮಾವನ್ನು ಬಹಳ ಅದ್ಧೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ತಾಂತ್ರಿಕ (ಟೆಕ್ನಿಕಲ್) ಕಾರ್ಯಗಳು ಹೆಚ್ಚಾಗಿರುವುದು ಹಾಗೂ ಸಿನಿಮಾ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬರುತ್ತಿರುವುದರಿಂದ ಬಿಡುಗಡೆ ಸ್ವಲ್ಪ ವಿಳಂಬವಾಗುತ್ತಿದೆ''.
![UI film team](https://etvbharatimages.akamaized.net/etvbharat/prod-images/18-09-2024/22482820_wesrtfg.jpg)
''ಜನರು ಯಾವಾಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಅದ್ರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ಬಹಳ ಬುದ್ಧಿವಂತರು. ಅವರ ನಿರೀಕ್ಷೆ ಹೆಚ್ಚು. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಎಲ್ಲಾ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ "ಯುಐ" ಉತ್ತಮ ಚಿತ್ರವಾಗಿ ಮೂಡಿ ಬರಲಿದೆ'' ಎಂದು ತಿಳಿಸಿದರು.
![UI film team](https://etvbharatimages.akamaized.net/etvbharat/prod-images/18-09-2024/22482820_ahserw3gyesf.jpg)
ಯುಐ ಚಿತ್ರದ ಇಬ್ಬರು ನಿರ್ಮಾಪಕಲ್ಲಿ ಒಬ್ಬರಾದ ಟಗರು ಸಿನಿಮಾ ಖ್ಯಾತಿಯ ಕೆ.ಪಿ ಶ್ರೀಕಾಂತ್ ಮಾತನಾಡಿ, ''25 ವರ್ಷಗಳ ನನ್ನ ಸಿನಿ ಜರ್ನಿಯಲ್ಲಿ ಶಿವಣ್ಣ ಅವರ ಜೊತೆಗಿನ ಒಡನಾಟ ಹಾಗೂ ಉಪೇಂದ್ರ ಅವರು ನಮ್ಮ ಬ್ಯಾನರ್ನ ಚಿತ್ರವನ್ನು ನಿರ್ದೇಶಿಸಿರುವುದು ನನಗೆ ತುಂಬಾ ಖುಷಿಕೊಟ್ಟ ವಿಚಾರ. ಎಲ್ಲರಂತೆ ನಾನು ಉಪೇಂದ್ರ ಅವರ ನಿರ್ದೇಶನಕ್ಕೆ ಅಭಿಮಾನಿ. ಈ ಚಿತ್ರವನ್ನು ತೆರೆ ಮೇಲೆ ನೋಡುವ ಕಾತುರ ಅವರ ಅಭಿಮಾನಿಗಳಂತೆ ನನಗೂ ಇದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ'' ಎಂದು ತಿಳಿಸಿದರು.
ಚಿತ್ರದ ಮತ್ತೋರ್ವ ನಿರ್ಮಾಪಕ ಜಿ.ಮನೋಹರನ್ ಮಾತನಾಡಿ, ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಇದು ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಬಿಡುಗಡೆ ಸ್ವಲ್ಪ ತಡವಾಯಿತು. ಅಕ್ಟೋಬರ್ನಲ್ಲಿ ಬಿಡುಗಡೆ ದಿನಾಂಕ ತಿಳಿಸುತ್ತೇವೆ ಎಂದರು.
ಚಿತ್ರದಲ್ಲಿ ರೀಷ್ಮಾ ನಾಣಯ್ಯ ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತವಿದೆ. ಶಿವಕುಮಾರ್ ಕಲಾ ನಿರ್ದೇಶನ ಮತ್ತು ಹೆಚ್.ಸಿ ವೇಣು ಅವರ ಕ್ಯಾಮರಾ ಕೈಚಳಕವಿದೆ. ಇನ್ನು ಉಪೇಂದ್ರ ಹುಟ್ಟುಹಬ್ಬದ ಅಂಗವಾಗಿ ಯುಐ ಚಿತ್ರತಂಡ ಕಲರ್ಫುಲ್ ಮೇಕಿಂಗ್ ವಿಡಿಯೋ ಅನಾವರಣಗೊಳಿಸಿದೆ. ಮೇಕಿಂಗ್ನಲ್ಲಿ ಉಪೇಂದ್ರ ಅವರು ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಧೂರಿ ಸೆಟ್ಗಳನ್ನು ಹಾಕಿ ಆ್ಯಕ್ಷನ್ ಸಿಕ್ವೇನ್ಸ್, ಟಾಕೀ ಭಾಗಗಳನ್ನು ಚಿತ್ರೀಕರಣ ಮಾಡೋದು ಈ ವಿಡಿಯೋದಲ್ಲಿ ಕಾಣಸಿಗುತ್ತದೆ.