ಹೈದರಾಬಾದ್:ಭಾರತ ಎಂದರೆ ಗುಟುರು ಹಾಕುವ ಚೀನಾದಲ್ಲಿ ಬುದ್ಧನ ಆರಾಧನೆ ಬಿಟ್ಟು ಬೇರೆ ದೈವಾರಾಧನೆಗೆ ಪ್ರಾಧಾನ್ಯತೆ ಇಲ್ಲ. ಇಂತಿಪ್ಪ, ಡ್ರ್ಯಾಗನ್ ರಾಷ್ಟ್ರದ ಯೋಧರು ನೈಜ ಗಡಿ ರೇಖೆ (ಎಲ್ಎಸಿ)ಯಲ್ಲಿ ನಿಂತು 'ಜೈ ಶ್ರೀರಾಮ್' ಎಂದು ಘೋಷಣೆ ಕೂಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶತಮಾನಗಳ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಜನವರಿ 22 ರಂದು ಉದ್ಘಾಟನೆಯಾಗಿದೆ. ಇದು ದೇಶ - ವಿದೇಶದಲ್ಲಿನ ರಾಮ ಭಕ್ತರಿಗೆ ಅಪರಿಮಿತ ಸಂತಸ ತಂದಿದೆ. ದಿವ್ಯ ದೇಗುಲದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು. ಪ್ರಧಾನಿ ಮೋದಿ ಅವರು ಪ್ರಥಮ ಪುಷ್ಪಾರ್ಚನೆ ಮಾಡುವ ಮೂಲಕ ರಘುರಾಮನನ್ನು ಅನಾವರಣ ಮಾಡಿದರು. ದೇಶದಲ್ಲಿ ಭಕ್ತಿಭಾವದ ಸಂಭ್ರಮ ಮನೆ ಮಾಡಿದ್ದರೆ, ಚೀನಾ ಯೋಧರೂ ಇದರಲ್ಲಿ ಭಾಗಿಯಾಗಿ ಅಚ್ಚರಿ ಉಂಟು ಮಾಡಿದ್ದಾರೆ.
ಚೀನೀ ಯೋಧರ ರಾಮಜಪ:ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಇರುವುದು ತಿಳಿದೇ ಇದೆ. ಎರಡೂ ದೇಶಗಳ ಸೇನಾ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಹಲವು ಬಾರಿ ಮಾತುಕತೆ ನಡೆಸಿದ್ದಾರೆ. ಕುತೂಹಲಕಾರಿ ಘಟನೆಯೊಂದರಲ್ಲಿ ಗಡಿಯಲ್ಲಿ ಗಸ್ತು ತಿರುಗುವ ವೇಳೆ ಎದುರು ಸಿಕ್ಕ ಚೀನೀ ಯೋಧರಿಗೆ ಭಾರತದ ಯೋಧರು 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಲು ಹೇಳಿದ್ದಾರೆ. ಜೈ ಶ್ರೀರಾಮ್ ಹೇಗೆ ಉಚ್ಚರಿಸಬೇಕೆಂದು ಭಾರತೀಯ ಸೈನಿಕರು ಹೇಳುತ್ತಿರುವುದನ್ನು ವಿಡಿಯೋದಲ್ಲಿದೆ.