ಕರ್ನಾಟಕ

karnataka

ETV Bharat / bharat

ಎರಡನೇ ದಿನವೂ ನಂದಿಘೋಷ ರಥವೇರಿ ಬಂದ ಜಗನ್ನಾಥ: ನಾಳೆ ಒಡಹುಟ್ಟಿದವರಿಗೆ ಪೂಜೆ - Puri Jagannath Rath Yatra

ಪುರಿಯಲ್ಲಿ ನಡೆಯುತ್ತಿರುವ ಜಗನ್ನಾಥ ರಥಯಾತ್ರೆಯು ಎರಡನೇ ದಿನವೂ ಸಾಂಗವಾಗಿ ನಡೆಯಿತು. ಎರಡು ತಿಥಿಗಳು ಬಂದ ಕಾರಣ ಎರಡು ದಿನ ರಥಯಾತ್ರೆ ನಡೆಸಲಾಯಿತು.

By ETV Bharat Karnataka Team

Published : Jul 8, 2024, 7:37 PM IST

ನಂದಿಘೋಷ ರಥವೇರಿ ಬಂದ ಜಗನ್ನಾಥ
ನಂದಿಘೋಷ ರಥವೇರಿ ಬಂದ ಜಗನ್ನಾಥ (ETV Bharat)

ಪುರಿ (ಒಡಿಶಾ):ಖ್ಯಾತ ಪುರಿ ಜಗನ್ನಾಥನ ವಾರ್ಷಿಕ ಮೆರವಣಿಗೆಯು ಎರಡನೇ ದಿನವೂ (ಸೋಮವಾರ) ಸಾಂಗವಾಗಿ ನಡೆಯಿತು. ಭಗವಾನ್​ ಬಲಭದ್ರ, ದೇವಿ ಸುಭದ್ರ ಮತ್ತು ಪ್ರಭು ಜಗನ್ನಾಥನ ರಥಗಳನ್ನು ಭಕ್ತರು ಎಳೆದು ಗುಂಡಿಚಾ ದೇವಸ್ಥಾನದ ಶಾರದಾಬಲಿಯಲ್ಲಿ ತಂದು ನಿಲ್ಲಿಸಿದರು. ಘೋಷವಾಕ್ಯಗಳ ನಡುವೆ ಮಹಾಪ್ರಭುವಿನ ಪೂಜಾ ಕೈಂಕರ್ಯಗಳು ನಡೆದವು.

ಬಲಭದ್ರ ದೇವರ ತಾಳಧ್ವಜ ರಥವು ಮೊದಲು ಗುಂಡಿಚಾ ದೇವಸ್ಥಾನವನ್ನು ತಲುಪಿತು. ನಂತರ ದೇವಿ ಸುಭದ್ರೆಯ ದರ್ಪದಾಳನ ರಥ ಮತ್ತು ಕೊನೆಯದಾಗಿ ಜಗನ್ನಾಥ ದೇವರ ನಂದಿಘೋಷ ರಥವು ಗುಂಡಿಚಾ ದೇವಸ್ಥಾನವನ್ನು ತಲುಪಿತು. ವಾರ್ಷಿಕ ರಥಯಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ನಾಳೆ ಅಡಪ ಮಂಟಪ ಪೂಜೆ:ನಾಳೆ ಮಹಾಪ್ರಭು ಜಗನ್ನಾಥ ಮತ್ತು ಅವರ ಒಡಹುಟ್ಟಿದವರಿಗೆ ಅಡಪ ಮಂಟಪ ಪೂಜೆ ವಿಧಿಗಳು ಗುಂಡಿಚಾ ದೇವಸ್ಥಾನದಲ್ಲಿ ನಡೆಯಲಿದೆ. ರಥಯಾತ್ರೆಯ ಒಂದು ದಿನದ ನಂತರ, ದೇವತೆಗಳಾದ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ಗುಂಡಿಚಾ ದೇವಾಲಯದ ಗರ್ಭಗುಡಿಯೊಳಗಿನ ಅಡಪ ಮಂಟಪವನ್ನು ಪ್ರವೇಶಿಸಲಿದ್ದಾರೆ.

ಭದ್ರತೆಗೆ 180 ತುಕಡಿ:ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು, ಭಾರಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಬಂದೋಬಸ್ತ್​ಗೆ 180 ತುಕಡಿಗಳನ್ನು (ಒಂದು ತುಕಡಿಯಲ್ಲಿ 30 ಸಿಬ್ಬಂದಿ) ನಿಯೋಜಿಸಲಾಗಿದೆ. ಅಲ್ಲದೇ, ಇತರ ಆಯಕಟ್ಟಿನ ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಥಯಾತ್ರೆ ನಿಮಿತ್ತ ಪಟ್ಟಣದ ವಿವಿಧೆಡೆ ಹಾಗೂ ಸಮುದ್ರ ತೀರದಲ್ಲಿ ಒಟ್ಟು 46 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ಭಕ್ತರ ಮೇಲೆ ವಾಹನಗಳ ಮೂಲಕ ನೀರು ಚಿಮ್ಮಿಸಲಾಯಿತು.

ಓರ್ವ ಸಾವು:ಬಿಗಿ ಬಂದೋಬಸ್ತ್​ ನಡುವೆಯೂ ರಥ ಯಾತ್ರೆಯಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಥ ಯಾತ್ರೆಯ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದ ಹಿನ್ನೆಲೆಯಲ್ಲಿ ಭಕ್ತರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಬಲಭದ್ರ ದೇವರ ತಾಳಧ್ವಜ ರಥವನ್ನು ಎಳೆಯುವ ಸಂದರ್ಭದಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸಂಭವಿಸಿ ಹಲವು ಭಕ್ತರು ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಪುರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಉಸಿರುಗಟ್ಟುವಿಕೆಯಿಂದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ವೈಭವದಿಂದ ಜರುಗಿದ ಪುರಿ ಜಗನ್ನಾಥ ರಥಯಾತ್ರೆ; ತೇರು ಎಳೆದ ರಾಷ್ಟ್ರಪತಿ ಮುರ್ಮು - Puri Jagannath Rath Yatra

ABOUT THE AUTHOR

...view details