ಕರ್ನಾಟಕ

karnataka

ETV Bharat / bharat

ಬಾಲಿವುಡ್​ ನಂಟು, ಭವ್ಯ ಇಫ್ತಾರ್​ ಕೂಟ, ಸಾಮಾಜಿಕ ಕಾರ್ಯ: ಬಾಬಾ ಸಿದ್ದಿಕಿಯ ವೈವಿಧ್ಯಮಯ ವ್ಯಕ್ತಿತ್ವ

ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಬಾಬಾ ಸಿದ್ದಿಕಿ ತಮ್ಮ ಸಮಾಜೋಪಯೋಗಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು.

By ETV Bharat Karnataka Team

Published : 5 hours ago

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ
ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ (IANS)

ಮುಂಬೈ: ಮುಂಬೈನಲ್ಲಿ ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ತಮ್ಮ ಹಲವಾರು ಸಾಮಾಜಿಕ ಕಾರ್ಯಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಮುಂಬೈನ ಬಾಲಿವುಡ್ ವಲಯದಲ್ಲಿಯೂ ಜನಪ್ರಿಯ ವ್ಯಕ್ತಿಯಾಗಿದ್ದ ಅವರು ಕೋವಿಡ್ ಅಲೆಯ ಸಮಯದಲ್ಲಿ ರೋಗಿಗಳಿಗೆ ಜೀವ ರಕ್ಷಕ ಔಷಧಿಗಳನ್ನು ಪೂರೈಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೋವಿಡ್​ ಅಲೆ ಅತ್ಯಂತ ತೀವ್ರವಾಗಿರುವಾಗ ರೋಗಿಗಳಿಗೆ ಬೇಕಾದ ಔಷಧಿಗಳನ್ನು ವ್ಯವಸ್ಥೆ ಮಾಡಿದ್ದರು.

ಸಲ್ಮಾನ್, ಶಾರುಖ್‌ಗೆ ಆಪ್ತ: ಸಿದ್ದಿಕಿ ಭವ್ಯ ಇಫ್ತಾರ್​ ಕೂಟಗಳನ್ನು ಏರ್ಪಡಿಸುವುದಕ್ಕೂ ಹೆಸರುವಾಸಿಯಾಗಿದ್ದರು. ಇವರ ಇಫ್ತಾರ್​ ಪಾರ್ಟಿಗಳಲ್ಲಿ ಬಾಲಿವುಡ್‌ನ ಉನ್ನತ ತಾರೆಯರು ಭಾಗವಹಿಸುತ್ತಿದ್ದರು. ಬಾಬಾ ಸಿದ್ದಿಕಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಾಂದ್ರಾ (ಪಶ್ಚಿಮ) ಸ್ಥಾನವನ್ನು ಮೂರು ಬಾರಿ ಪ್ರತಿನಿಧಿಸಿದ್ದರು. ಮುಂಬೈನ ಪ್ರಮುಖ ಮುಸ್ಲಿಂ ನಾಯಕರಾಗಿದ್ದ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಸಂಜಯ್ ದತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರಿಗೆ ಆಪ್ತರಾಗಿದ್ದರು.

ಅವರ ಪುತ್ರ ಝೀಶಾನ್ ಸಿದ್ದಿಕಿ ಪ್ರಸ್ತುತ ಮುಂಬೈನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಎನ್​ಸಿಪಿಗೆ ಸೇರಿದ್ದ ಸಿದ್ದಿಕಿ, ಕಾಂಗ್ರೆಸ್​ ತೊರೆಯಲು ಕಾರಣವೇನೆಂಬುದನ್ನು ಬಹಿರಂಗಪಡಿಸಿರಲಿಲ್ಲ.

ಎನ್​​ಸಿಪಿಗೆ ಸೇರುವ ಮೂಲಕ ಸಿದ್ದಿಕಿ ಅಜಿತ್ ಪವಾರ್ ನೇತೃತ್ವದ ಎನ್​ಸಿಪಿಗೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದೊಡ್ಡ ಮಟ್ಟದ ರಾಜಕೀಯ ಬಲ ತುಂಬಿದ್ದರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುಂಬೈನಲ್ಲಿ ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ವಾರ್ಡ್​ಗಳಲ್ಲಿ ಎನ್‌ಸಿಪಿ ಪಕ್ಷವನ್ನು ಬಲಪಡಿಸುವಲ್ಲಿ ಸಿದ್ದಿಕಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸಿದ್ದಿಕಿ 1999, 2004 ಮತ್ತು 2009ರಲ್ಲಿ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 2004 ರಿಂದ 2008ರ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು, ಕಾರ್ಮಿಕ ಮತ್ತು ಎಫ್ ಡಿಎ ರಾಜ್ಯ ಸಚಿವರಾಗಿದ್ದರು ಮತ್ತು ಸತತ ಎರಡು ಅವಧಿಗೆ ಪುರಸಭೆಯ ಕಾರ್ಪೊರೇಟರ್ ಆಗಿದ್ದರು.

ಅವರು ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತು ಹಿರಿಯ ಉಪಾಧ್ಯಕ್ಷರಾಗಿ ಮತ್ತು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಸದೀಯ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

"ನನ್ನ ರಾಜಕೀಯ ಜೀವನ ಇಂದಿರಾ ಗಾಂಧಿ-ರಾಜೀವ್ ಗಾಂಧಿ-ಸಂಜಯ್ ಗಾಂಧಿ ಅವರೊಂದಿಗೆ ಆರಂಭವಾಗಿತ್ತು. ಪ್ರಸ್ತುತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನನ್ನ ತಂದೆಯ ಸಮಾನ. ಆದರೆ ಕೆಲವೊಮ್ಮೆ ವೈಯಕ್ತಿಕ ಜೀವನದಲ್ಲಿ ಕೆಲ ಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ಎನ್​ಸಿಪಿಗೆ ಸೇರುವ ಮೊದಲು ಸಿದ್ದಿಕಿ ಹೇಳಿದ್ದರು ಮತ್ತು ಕಾಂಗ್ರೆಸ್​ನಲ್ಲಿ ತಮ್ಮ 48 ವರ್ಷಗಳ ಪ್ರಯಾಣದಲ್ಲಿ ತಮ್ಮನ್ನು ಬೆಂಬಲಿಸಿದ ಕಾರ್ಯಕರ್ತರು ಮತ್ತು ನಾಯಕರಿಗೆ ಧನ್ಯವಾದ ಅರ್ಪಿಸಿದ್ದರು.

ಶನಿವಾರ ರಾತ್ರಿ 9.30 ರ ಸುಮಾರಿಗೆ ಮುಂಬೈನ ಖೇರ್ ನಗರದಲ್ಲಿ, ಅವರ ಪುತ್ರನ ಕಚೇರಿಯ ಹೊರಗೆ ಬಾಬಾ ಸಿದ್ದಿಕಿ ಅವರ ಮೇಲೆ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಇದನ್ನೂ ಓದಿ: ಮುಂಬೈನಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗೆ ಗುಂಡಿಕ್ಕಿ ಹತ್ಯೆ

ABOUT THE AUTHOR

...view details