ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜಾರ್ಜ್ಟೌನ್ ಯುನಿವರ್ಸಿಟಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮೀಸಲಾತಿ ಕುರಿತು ಹೇಳಿಕೆ ನೀಡಿರುವುದನ್ನು ಕೇಂದ್ರ ಸಚಿವ ಅಮಿತ್ ಶಾ ಖಂಡಿಸಿದ್ದು, ಕಾಂಗ್ರೆಸ್ನ ಮೀಸಲಾತಿ ವಿರೋಧಿ ಮುಖ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ ಎಂದು ಟೀಕಿಸಿದರು.
ಈ ಕುರಿತು 'ಎಕ್ಸ್' ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಮಿತ್ ಶಾ, ಬಿಜೆಪಿ ಎಲ್ಲಿಯವರೆಗೆ ಇರುತ್ತದೋ ಅಲ್ಲಿವರೆಗೆ ಮೀಸಲಾತಿ ರದ್ದು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತ ಉತ್ತಮ ಸ್ಥಿತಿಗೆ ತಲುಪಿದಾಗ ಮೀಸಲಾತಿ ರದ್ದು ಮಾಡುತ್ತೇವೆ. ಆದರೆ, ಈಗ ಮೀಸಲಾತಿ ರದ್ದತಿಗೆ ಸರಿಯಾದ ಸಮಯವಲ್ಲ ಎಂದು ರಾಹುಲ್ ಹೇಳಿದ್ದರು.
ರಾಹುಲ್ ಹೇಳಿಕೆಗಳನ್ನು ಟೀಕಿಸಿದ ಅಮಿತ್ ಶಾ, ದೇಶ ವಿರೋಧಿ ಹೇಳಿಕೆ ನೀಡುವುದು ಅಥವಾ ದೇಶ ವಿಭಜಕ ನೀತಿ ಪರ ನಿಲ್ಲುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿದೆ. ರಾಹುಲ್ ಗಾಂಧಿ ಯಾವಾಗಲೂ ರಾಷ್ಟ್ರದ ಭದ್ರತೆಗೆ ಬೆದರಿಕೆಯೊಡ್ಡುತ್ತಾರೆ ಮತ್ತು ಭಾವನೆಗಳನ್ನು ಘಾಸಿಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕೆಲವು ಧರ್ಮ, ಭಾಷೆಗಳು ಕೀಳೆಂಬ ಭಾವನೆ ಆರ್ಎಸ್ಎಸ್ಗಿದೆ: ರಾಹುಲ್ ಗಾಂಧಿ