ಗಂಗಾವತಿ: ಮನುಕುಲಕ್ಕೆ ವ್ಯಾಪಿಸಿರುವ ಕೊರೊನಾವನ್ನು ತೊಲಗಿಸಿ ನಾಡಿಗೆ ಸಮೃದ್ಧ ಮಳೆ, ಬೆಳೆ ನೀಡಿ, ಜನರಿಗೆ ಆರೋಗ್ಯ ಕರುಣಿಸುವಂತೆ ಹರಕೆ ಹೊತ್ತ ಗಂಗಾವತಿಯ ನೂರಾರು ಜನ ಕುಮ್ಮಟ ದುರ್ಗದ ಕುಮಾರ ರಾಮನ ಮೊರೆ ಹೋಗಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಮ್ಮಟ ದುರ್ಗ ಬೆಟ್ಟದ ಮೇಲಿನ ನಿರ್ಜನ ಪ್ರದೇಶದಲ್ಲಿರುವ ಕುಮಾರ ರಾಮನ ದೇಗುಲ, ಜನವಸತಿ ಪ್ರದೇಶದಿಂದ ದೂರವಿದೆ. ದ್ವಿಚಕ್ರ ವಾಹನ ಹಾಗೂ ಟ್ರಾಕ್ಟರ್ ಮೂಲಕವೇ ಸಾಗಬೇಕು. ವಿಜಯನಗರ ಸಾಮ್ರಾಜ್ಯದ ಮೂಲ ಪುರುಷನೆಂದು ಕರೆಯಿಸಿಕೊಳ್ಳುವ ಕುಮಾರ ರಾಮನಿಗೆ ಗಂಗಾವತಿ ನಗರ ಹಾಗೂ ಸುತ್ತಲಿನ ಜನ ವಿಶೇಷ ಪೂಜೆ ಸಲ್ಲಿಸಿ ಹರಕೆ ಹೊತ್ತರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ ರಾಮನ ವಂಶಜ ರಾಜೇಶ ನಾಯಕ್ ಪಾಳೆಗಾರ, ಇಡೀ ಭರತ ಖಂಡದಲ್ಲಿ ಪೂಜಿಸಲ್ಪಡುವ ಏಕೈಕ ಅರಸ ಕುಮಾರ ರಾಮ. ಪರಾಕ್ರಮದಿಂದಲೇ ಆತ ಹೆಸರು ಮಾಡಿದ್ದ. ಸಾಕಷ್ಟು ಜನರ ಬಯಕೆಯನ್ನು ತೀರಿಸುತ್ತಾನೆ ಎಂಬ ನಂಬಿಕೆ ಇದ್ದು, ಜನ ಹರಕೆ ಹೊರುತ್ತಾರೆ ಎಂದರು.