ಕರ್ನಾಟಕ

karnataka

ತ್ರಯಂಬಕೇಶ್ವರ ದೇವಾಲಯಕ್ಕೆ ಯಾರೂ ಬಲವಂತವಾಗಿ ಪ್ರವೇಶಿಸಲು ಯತ್ನಿಸಿಲ್ಲ : ಸಂಜಯ್​ ರಾವತ್

By

Published : May 17, 2023, 4:35 PM IST

ಮಹಾರಾಷ್ಟ್ರದ ಥಾಣೆಯಲ್ಲಿರುವ ತ್ರಯಂಬಕೇಶ್ವರ ದೇವಾಲಯಕ್ಕೆ ಯಾರೂ ಬಲವಂತವಾಗಿ ಪ್ರವೇಶಿಸಲು ಯತ್ನಿಸಿಲ್ಲ ಎಂದು ಸಂಸದ ಸಂಜಯ್ ರಾವತ್​ ಹೇಳಿದ್ದಾರೆ.

mh-sanjay-raut-on-trimbakeshwar-temple-entry-row-and-communal-violence-in-nashik
ತ್ರಯಂಬಕೇಶ್ವರ ದೇವಾಲಯಕ್ಕೆ ಯಾರೂ ಬಲವಂತವಾಗಿ ಪ್ರವೇಶಿಸಲು ಯತ್ನಿಸಿಲ್ಲ : ಸಂಜಯ್​ ರಾವತ್

ನಾಸಿಕ್​(ಮಹಾರಾಷ್ಟ್ರ) : ಇಲ್ಲಿನ ಪ್ರಸಿದ್ಧ ತೀರ್ಥ ಕ್ಷೇತ್ರ ಹಾಗೂ ಪವಿತ್ರ ಜ್ಯೋತಿರ್ಲಿಂಗಳಲ್ಲಿ ಒಂದಾದ ತ್ರಯಂಬಕೇಶ್ವರ ದೇವಾಲಯಕ್ಕೆ ಯಾರೂ ಬಲವಂತವಾಗಿ ಪ್ರವೇಶಿಸಲು ಯತ್ನಿಸಿಲ್ಲ ಎಂದು ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ. ಥಾಣೆಯಲ್ಲಿರುವ ತ್ರಿಯಂಬಕೇಶ್ವರ ದೇವಾಲಯದ ಶಿಷ್ಟಾಚಾರಕ್ಕೆ ವಿರುದ್ಧವಾಗಿ ಒಂದು ಸಮುದಾಯದ ಕೆಲ ಜನರು ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿದ್ದು, ಈ ವೇಳೆ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿದ್ದರು. ಈ ಸಂಬಂಧ ನಾಸಿಕ್​ನಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

ನಾಸಿಕ್​ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಸಂಜಯ್​ ರಾವತ್,​​ ತ್ರಯಂಬಕೇಶ್ವರ ದೇವಾಲಯದ ಆವರಣದಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲ. ಈ ಬಗ್ಗೆ ನಾನು ಈಗಾಗಲೇ ವಿಚಾರಿಸಿದ್ದೇನೆ. ಇಲ್ಲಿನ ದೇವಾಲಯದ ಆವರಣದಲ್ಲಿ ನಡೆಯುವ ದೇವರ ಮೆರವಣಿಗೆಯಲ್ಲಿ ಧೂಪದ್ರವ್ಯವನ್ನು ಹಾಕಲಾಗುತ್ತದೆ. ಈ ವೇಳೆ ದೇವಾಲಯದ ಹೊರಗೆ ಒಂದು ಸಮುದಾಯವು ಧೂಪವನ್ನು ಹಾಕಿ ಬಳಿಕ ಅಲ್ಲಿಂದಲೇ ತೆರಳಿದ್ದಾರೆ. ಯಾರೂ ಕೂಡ ಬಲವಂತವಾಗಿ ದೇವಾಲಯದ ಒಳಗೆ ಪ್ರವೇಶಿಸಲು ಯತ್ನಿಸಿಲ್ಲ ಎಂದು ಹೇಳಿದರು.

ಪ್ರಸ್ತುತ ಮಹಾರಾಷ್ಟ್ರದಲ್ಲಿ ಹಿಂದುತ್ವದ ಹೆಸರಿನಲ್ಲಿ ಗುಂಪುಗಳನ್ನು ಕಟ್ಟಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕದಡುವ ಕೆಲಸ ಆಗುತ್ತಿದೆ. ನಮ್ಮಲ್ಲಿರುವಷ್ಟು ಹಿಂದುತ್ವ ದೇಶದ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ತ್ರಿಯಂಬಕೇಶ್ವರ ನಮ್ಮ ನಂಬಿಕೆಯ ಮತ್ತು ಭಕ್ತಿಯ ಸಂಕೇತ. ತ್ರಯಂಬಕೇಶ್ವರದಲ್ಲಿ ಇಂತಹ ಯಾವುದೇ ಘಟನೆಗಳು ನಡೆದಿರುವುದು ನನಗೆ ನೆನಪಿಲ್ಲ ಎಂದು ಹೇಳಿದರು.

ಘಟನೆ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​​ ಅವರು ಎಸ್​ಐಟಿ ತನಿಖೆಗೆ ಆದೇಶಿಸಿದ್ದಾರೆ. ಕಳೆದ 60 ವರ್ಷಗಳಲ್ಲಿ ರಾಜ್ಯದಲ್ಲಿ ಇದುವರೆಗೂ ರಾಮನವಮಿ ಸಂದರ್ಭದಲ್ಲಿ ಯಾವುದೇ ಗಲಭೆಗಳು ನಡೆದಿರಲಿಲ್ಲ. ಆದರೆ ಈ ಬಾರಿಯ ರಾಮನವಮಿ ಸಂದರ್ಭದಲ್ಲಿ ಗಲಭೆ ನಡೆದಿದ್ದು, ಈ ಘಟನೆಯನ್ನು ಯಾಕೆ ಎಸ್​ಐಟಿ ತನಿಖೆಗೆ ನೀಡಿಲ್ಲ ಎಂದು ಸಂಜಯ್ ರಾವತ್​ ಪ್ರಶ್ನಿಸಿದರು.

ಕಳೆದ ಮೇ 13 ರಂದು ಇಲ್ಲಿನ ತ್ರಯಂಬಕೇಶ್ವರ ದೇವಾಲಯದಲ್ಲಿ ಒಂದು ಸಮುದಾಯದ ಗುಂಪು ದೇವಾಲಯವನ್ನು ಪ್ರವೇಶಿಸಲು ಯತ್ನಿಸಿರುವುದಾಗಿ ಹೇಳಲಾಗಿದೆ. ಈ ವೇಳೆ ದೇವಾಲಯದ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿದ್ದಾರೆ. ಈ ಸಂದರ್ಭ ಆ ಸಮುದಾಯದ ಜನರು ದೇವರಿಗೆ ಧೂಪವನ್ನು ತೋರಿಸಬೇಕೆಂದು ಒತ್ತಾಯಿಸಿದ್ದಾರೆ. ಇದಕ್ಕೆ ದೇವಾಲಯದ ಅರ್ಚಕರು ವಿರೋಧ ವ್ಯಕ್ತಪಡಿಸಿದ್ದು, ಇದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದಾಗಿ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ದೇವರ ಮೆರವಣಿಗೆ ಕೆಲಕಾಲ ಸ್ಥಗಿತಗೊಂಡಿತ್ತು.

ಈ ಸಂಬಂಧ ದೇವಾಲಯದ ಅರ್ಚಕರ ಸಂಘ ತ್ರಯಂಬಕೇಶ್ವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆ ಪೊಲೀಸರು ಎರಡೂ ಗುಂಪುಗಳನ್ನು ಕರೆದು ಶಾಂತಿ ಮಾತುಕತೆ ನಡೆಸಿದ್ದು, ಎರಡೂ ಗುಂಪುಗಳಿಗೂ ತಿಳಿ ಹೇಳುವ ಕೆಲಸ ಮಾಡಿದ್ದಾರೆ. ಘಟನೆ ಬಳಿಕ ದೇವಾಲಯದ ಸುತ್ತಮುತ್ತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ :ತ್ರಯಂಬಕೇಶ್ವರ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ ಸಂದಲ್ ಮಿರ್ವಾನುಕಿ ಸಮುದಾಯ: ತನಿಖೆಗೆ ಆದೇಶಿಸಿದ ಫಡ್ನವೀಸ್​

ABOUT THE AUTHOR

...view details