ಚಾಮರಾಜನಗರ: ಜಮೀನಿನಲ್ಲಿ ಮಲಗಿದ್ದ ರೈತನ ಎದೆಯ ಮೇಲೆ ಆನೆ ಕಾಲಿಟ್ಟಿದ್ದು, ಅವರು ಪವಾಡಸದೃಶ್ಯ ರೀತಿಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ನಿವಾಸಿ ಬಸವಣ್ಣ (52) ಅಪಾಯದಿಂದ ಪಾರಾದವರು. ಆಲೂಗೆಡ್ಡೆ ಬೆಳೆ ಸಂರಕ್ಷಣೆಗೆ ಕಾವಲಿಗೆಂದು ಇವರು ಜಮೀನಿಗೆ ತೆರಳಿದ್ದರು. ತೆವರಿನ ಮೇಲೆ ಮಲಗಿದ್ದಾಗ ಕಾಡಾನೆ ನುಗ್ಗಿ ಬಂದು ಬಲ ಎದೆಯ ಮೇಲೆ ಕಾಲಿಟ್ಟಿದೆ. ತಕ್ಷಣವೇ ಜೋರಾಗಿ ಕೂಗಿಕೊಂಡಿದ್ದರಿಂದ ತನ್ನ ಮರಿ ಜೊತೆ ಆನೆ ಕಾಲ್ಕಿತ್ತಿದೆ. ಇದರಿಂದಾಗಿ ರೈತ ಅಪಾಯದಿಂದ ಪಾರಾಗಿದ್ದಾರೆ. ಆದರೆ ಎದೆಗೆ ತೀವ್ರವಾದ ಗಾಯವಾಗಿದೆ.
ಮಾಹಿತಿ ಅರಿತ ತಕ್ಷಣ ಸ್ಥಳೀಯರು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಬಸವಣ್ಣರನ್ನು ದಾಖಲು ಮಾಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.