ಉಡುಪಿ: ಕನ್ಯಾ ಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್ ಅನ್ನು ಜಿಲ್ಲಾದ್ಯಂತ ಭಾನುವಾರ ಕ್ರೆಸ್ತರು ಸಂಭ್ರಮದಿಂದ ಆಚರಿಸಿದರು. ಧರ್ಮಗುರುಗಳು ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು. ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಚರ್ಚ್ಗಳಲ್ಲಿ ಧರ್ಮಗುರುಗಳು ಭತ್ತದ ತೆನೆಯನ್ನು ಆಶೀರ್ವದಿಸಿ, ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಸಸ್ಯಾಹಾರದ ಭೋಜನ: ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿದರು. ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಮಾಡಿ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ, ಮನೆಗಳಲ್ಲಿ ಸಂಪೂರ್ಣ ಸಸ್ಯಾಹಾರದ ಭೋಜನ ತಯಾರಿಸಿ ಕುಟುಂಬದವರೆಲ್ಲ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿದರು.
![monti fest](https://etvbharatimages.akamaized.net/etvbharat/prod-images/09-09-2024/22411637_thews-1.png)
ಹಬ್ಬಕ್ಕೆ ಮುಂಚಿತವಾಗಿ 9 ದಿನ ಎಲ್ಲಾ ಚರ್ಚ್ಗಳಲ್ಲಿ ಮಾತೆ ಮೇರಿಯ ಕೃಪೆಗೆ ಬೇಡಿಕೊಂಡು ವಿಶೇಷ ಪ್ರಾರ್ಥನೆ (ನವೇನಾ) ನಡೆಯುತ್ತದೆ. 9ನೇ ದಿನವನ್ನು ಮೊಂತಿ ಹಬ್ಬವಾಗಿ ಕರಾವಳಿಯ ಕ್ರೈಸ್ತ ಬಂಧುಗಳು ಆಚರಿಸುತ್ತಾರೆ. ಹಬ್ಬದ ದಿನದಂದು ಕನ್ಯಾ ಮರಿಯಮ್ಮನ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು, ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಪುಷ್ಪಾರ್ಪಣೆ ಮಾಡಿದ ನಂತರ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆಗಳು ನಡೆಯುತ್ತದೆ.
ಈ ವೇಳೆ ಗದ್ದೆಗಳಲ್ಲಿ ಬೆಳೆದ ಹೊಸ ತೆನೆಯನ್ನು ಗೌರವಪೂರ್ವಕವಾಗಿ ವಾಳೆಯ ಗುರಿಕಾರರು ಚರ್ಚ್ಗೆ ತರುತ್ತಾರೆ. ಅದಕ್ಕೆ ಧರ್ಮಗುರುಗಳು ಆಶೀರ್ವಚನ ಮಾಡಿ, ಪೂಜೆಯ ಬಳಿಕ ಹಬ್ಬದ ಪ್ರಸಾದ ರೂಪದಲ್ಲಿ ಕುಟುಂಬಗಳಿಗೆ ತೆನೆ ವಿತರಣೆ ಮಾಡುತ್ತಾರೆ. ಅಲ್ಲದೆ, ಪುಷ್ಪಾರ್ಪಣೆ ಮಾಡಿದ ಪುಟಾಣಿ ಮಕ್ಕಳಿಗೆ ಕಬ್ಬು ಹಾಗೂ ಸಿಹಿ ತಿಂಡಿಗಳನ್ನು ನೀಡಲಾಗುತ್ತದೆ.
ಹೊಸ ಅಕ್ಕಿ ಊಟವು 'ಮೊಂತಿ ಹಬ್ಬ'ದ ಮತ್ತೊಂದು ಪ್ರಮುಖ ಆಚರಣೆಯಲ್ಲಿ ಮನ್ನಣೆ ಪಡೆದುಕೊಂಡಿದೆ. ಹೊಸ ಭತ್ತದ ತೆನೆಗಳನ್ನು ಚರ್ಚ್ಗಳಲ್ಲಿ ಪವಿತ್ರೀಕರಿಸಿ ನಂತರ ಕ್ರೈಸ್ತ ಸಮುದಾಯದವರಿಗೆ ಹಂಚಲಾಗುತ್ತದೆ. ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಪ್ರಾರ್ಥನೆ ಬಳಿಕ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕೂತು ಸೇವಿಸುವುದು ಈ ಹಬ್ಬದ ವಿಶೇಷತೆಗಳಲ್ಲೊಂದಾಗಿದೆ.
![monti fest](https://etvbharatimages.akamaized.net/etvbharat/prod-images/09-09-2024/22411637_thews-2.png)
ವಿದೇಶದಲ್ಲಿದ್ದರೂ ಹಬ್ಬದ ಆಚರಣೆ: ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ತೆರಳಿದ ಕುಟುಂಬ ಸದಸ್ಯರೆಲ್ಲರೂ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ಹಾಜರಿರುವುದು ಕಡ್ಡಾಯ. ಅನಿವಾರ್ಯ ಕಾರಣಗಳಿಂದಾಗಿ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಇರುವ ಕುಟುಂಬ ಸದಸ್ಯರಿಗೆ ಅಂಚೆ ಮೂಲಕ ಭತ್ತದ ತೆನೆ ಕಳುಹಿಸಿ ಅವರೂ ಪ್ರಥಮ ಭೋಜನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ವಿದೇಶದಲ್ಲಿ, ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆ ನಿಂತ ಕೆಥೋಲಿಕ್ ಕ್ರೈಸ್ತರು ಅಲ್ಲಿನ ಕ್ರೈಸ್ತ ದೇವಾಲಯಗಳಲ್ಲಿ ಕುಟುಂಬದ ಸದಸ್ಯರಂತೆ ಜತೆಗೂಡಿ ತೆನೆಹಬ್ಬ ಆಚರಿಸಿ, 'ಹೊಸ ಅಕ್ಕಿ' ಊಟ ಮಾಡುವುದು ನಡೆದುಕೊಂಡು ಬಂದಿದೆ.
ಈ ಹಬ್ಬ ಒಂದರ್ಥದಲ್ಲಿ ಕುಟುಂಬ ಸದಸ್ಯರ ಏಕತೆಯ ಸಂಕೇತ. ತೆನೆ ಹಬ್ಬದ ಪ್ರಯುಕ್ತ ಕ್ರೈಸ್ತರು ಸಸ್ಯಾಹಾರಿ ಭೋಜನ ಮಾಡುತ್ತಾರೆ. ಈ ದಿನದ ವಿಶೇಷವೇ ಸಸ್ಯಾಹಾರ ಭೋಜನವಾಗಿದೆ. ಪ್ರತಿ ಮನೆಯಲ್ಲಿ ಕನಿಷ್ಠ 3 ಅಥವಾ 5, ಇಲ್ಲವೇ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ ಇದೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಕ್ರೈಸ್ತ ಬಾಂಧವರು ಇಂದು ಬಾಳೆ ಎಲೆಯಲ್ಲಿ ಊಟ ಮಾಡುವುದೂ ಹಬ್ಬದ ಇನ್ನೊಂದು ವೈಶಿಷ್ಟ್ಯ.
ಇದನ್ನೂ ಓದಿ: ಉಡುಪಿ: ತೊಟ್ಟಂ ಅನ್ನಮ್ಮ ಮೊಂತಿ ಫೆಸ್ಟ್: 'ಸಾವಯವ ತರಕಾರಿ ಸಂತೆ' - Organic Vegetable Mela