Published : Mar 8, 2024, 12:02 PM IST
ಬೆಳಗಾವಿಯಲ್ಲಿ ಮಹಾ ಶಿವರಾತ್ರಿ ಸಂಭ್ರಮ: ಕಪಿಲೇಶ್ವರ ದೇಗುಲದಲ್ಲಿ ಭಕ್ತಸಾಗರ
ಬೆಳಗಾವಿ: ನಾಡಿನೆಲ್ಲೆಡೆ ಇಂದು ಮಹಾ ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ದೇವಸ್ಥಾನದತ್ತ ಹರಿದು ಬಂದಿದೆ.
ಕಪಿಲೇಶ್ವರ ದೇವಸ್ಥಾನದಲ್ಲಿರುವ ಶಿವಲಿಂಗಕ್ಕೆ ಮಧ್ಯರಾತ್ರಿಯಿಂದಲೇ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಬಿಲ್ವಪತ್ರೆಗಳನ್ನು ಅರ್ಪಿಸಲಾಗುತ್ತಿದೆ. ಮಧ್ಯರಾತ್ರಿ 3 ಗಂಟೆಗೆ ತ್ರಿಕಾಲ ಪೂಜೆ, ಬೆಳಗ್ಗೆ 8ಕ್ಕೆ ಪಲ್ಲಕ್ಕಿ ಉತ್ಸವ, ಆ ಬಳಿಕ ಮಹಾ ಆರತಿ ಕಾರ್ಯಕ್ರಮ, ಮಧ್ಯಾಹ್ನ ಪ್ರಸಾದ ವಿತರಣೆ ಆಯೋಜಿಸಲಾಗಿದೆ.
ಹರ, ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡ ಭಾರತದ ಏಕೈಕ ದೇವಸ್ಥಾನ ಎಂಬ ಹೆಗ್ಗಳಿಕೆಯೂ ಕಪಿಲೇಶ್ವರ ಮಂದಿರಕ್ಕಿದೆ. 1,500ರಲ್ಲಿ ಕಪಿಲ ಮುನಿಗಳ ತಪಸ್ಸಿನ ಶಕ್ತಿಯಿಂದ ಶಿವಲಿಂಗ ಮೂರ್ತಿ ಉದ್ಭವವಾಯಿತು ಎಂಬ ಪ್ರತೀತಿ ಇದೆ. ಹೀಗಾಗಿ ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಶ್ರೀ ಕಪಿಲೇಶ್ವರ ದೇವಸ್ಥಾನಕ್ಕೂ ಇದೆ. ಮಹಾರಾಷ್ಟ್ರ ಗೋವಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಇನ್ನು, ಬೆಳಗಾವಿ ಕೆಎಲ್ಇ ಶಿವಾಲಯ, ಶಾಹಪುರ ಶಿವಾಲಯ ಸೇರಿದಂತೆ ವಿವಿಧ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ದಿನವಿಡೀ ಉಪವಾಸ ಇರುವ ಭಕ್ತರು ರಾತ್ರಿ ಜಾಗರಣೆ ಮಾಡಿ, ಶಿವನ ಆರಾಧನೆ ಮಾಡುತ್ತಾರೆ.
ಇದನ್ನೂ ಓದಿ: ಇಂದು ಮಹಾ ಶಿವರಾತ್ರಿ: ದೇಶಾದ್ಯಂತ ಶಿವನಿಗೆ ವಿಶೇಷ ಆರತಿ, ಪೂಜೆ