Published : 7 hours ago
ಶಿರಡಿ ಸಾಯಿಬಾಬಾಗೆ 258 ಗ್ರಾಂ ತೂಕದ ಚಿನ್ನದ ಕಿರೀಟ ದಾನ - devotee offered gold crown
ಶಿರಡಿ (ಮಹಾರಾಷ್ಟ್ರ): ಕೋಟ್ಯಂತರ ಭಕ್ತರ ಆರಾಧ್ಯದೈವವಾದ ಶಿರಡಿ ಸಾಯಿಬಾಬಾಗೆ ಭಕ್ತರು ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರ, ಚಿನ್ನದ ಕಿರೀಟಗಳನ್ನು ಮಾಡಿಸಿಕೊಡುವುದು ಹೆಚ್ಚಾಗಿದೆ. ಇತ್ತೀಚೆಗೆ ಒಬ್ಬ ಭಕ್ತರು 13 ಲಕ್ಷ ಮೌಲ್ಯದ ವಜ್ರದ ಕಿರೀಟವನ್ನು ಸಂಸ್ಥಾನಕ್ಕೆ ನೀಡಿದ್ದರು. ಇದರ ಬೆನ್ನಲ್ಲೇ ತೆಲಂಗಾಣದ ಮಹಿಳಾ ಸಾಯಿ ಭಕ್ತೆ ಸಿ.ಎಚ್.ಭಾಗ್ಯಲಕ್ಷ್ಮಿ ಎಂಬುವವರು ಗುರುವಾರ ಶಿರಡಿ ಸಾಯಿಬಾಬಾಗೆ 17. 73 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದರು.
ಸಾಯಿಬಾಬಾ ಸಂಸ್ಥಾನಕ್ಕೆ ದೇಶ- ವಿದೇಶಗಳ ಭಕ್ತರು ಹೇರಳವಾಗಿ ದಾನ ಮಾಡುತ್ತಲೇ ಇರುತ್ತಾರೆ. ತೆಲಂಗಾಣದ ಸಿ.ಎಚ್. ಭಾಗ್ಯಲಕ್ಷ್ಮಿ ಭಾಗ್ಯಲಕ್ಷ್ಮಿ ಅವರು ಸಾಯಿಬಾಬಾರ ಪರಮ ಭಕ್ತೆಯಾಗಿದ್ದು, ಕುಟುಂಬ ಸಮೇತ ಗುರುವಾರ ಶಿರಡಿಗೆ ಆಗಮಿಸಿ ಆಕರ್ಷಕ ವಿನ್ಯಾಸಗೊಳಿಸಲಾದ 258 ಗ್ರಾಂ ಚಿನ್ನದ ಕಿರೀಟವನ್ನು ಅರ್ಪಿಸಿದರು.
ಭಕ್ತೆಯ ಕುಟುಂಬ ಚಿನ್ನದ ಕಿರೀಟವನ್ನು ಸಾಯಿಬಾಬಾ ಸಂಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋರಕ್ಷ ಗಾಡಿಲ್ಕರ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಕಿರೀಟವನ್ನು ಸಾಯಿಬಾಬಾಗೆ ತೊಡಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥಾನದ ಪರವಾಗಿ ದಾನಿ ಭಾಗ್ಯಲಕ್ಷ್ಮಿ ಅವರಿಗೆ ಶಾಲು ಹೊದಿಸಿ ಬಾಬಾರ ಮೂರ್ತಿಯನ್ನು ನೀಡಿ ಗೌರವಿಸಲಾಯಿತು.