ಶಿವಮೊಗ್ಗ: ನಾನು ಭೇಟಿ ಮಾಡಿದ ಮಠಾಧೀಶರು ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ತಿಳಿಸಿದ್ದಾರೆ. ಜೊತೆಗೆ ಸಿಗಂದೂರು ದೇವಿಯ ದರ್ಶನಕ್ಕೆ ಹೋದಾಗ ತಾಯಿಯೂ ಆಶೀರ್ವಾದ ಮಾಡಿದ್ದಾಳೆ. ಇದರಿಂದ ನನಗೆ ಗೆಲುವಿನ ವಿಶ್ವಾಸವಿದೆ ಎಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.
ಇಂದು ತಮ್ಮ ಮನೆಯ ಬಳಿ ಕಾರ್ಯಕರ್ತರ ಸಭೆ ನಡೆಸಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, "ಮಠಾಧೀಶರು ನಿಮ್ಮ ಸ್ಪರ್ಧೆ ಖಚಿತವೇ ಅಥವಾ ದೆಹಲಿಯವರು ಹೇಳಿದರೆ ವಾಪಸ್ ತೆಗೆದುಕೊಳ್ಳುತ್ತೀರಾ ಎಂದು ಕೇಳಿದ್ರು. ನಾನು ಯಾರ ಮಾತಿಗೂ ಜಗ್ಗಲ್ಲ, ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದೇನೆ. ಆಗ ಮಠಾಧೀಶರು ಹಿಂದುತ್ವ ರಕ್ಷಣೆಗಾಗಿ ಸ್ಪರ್ಧೆ ಮಾಡು ಎಂದು ಹೇಳಿದರು. ಇನ್ನು ಸಿಗಂದೂರು ದೇವಾಲಯದ ಧರ್ಮದರ್ಶಿಗಳು ನನಗೋಸ್ಕರ ವಿಶೇಷ ಹೋಮ ಮಾಡಿಸಿದ್ರು. ಹೋಮದ ನಂತರದ ಪೂಜೆಯಲ್ಲಿ ದೇವಿಯ ತಲೆ ಮೇಲಿನ ಹೂ ಪ್ರಸಾದದ ಥರ ಬಿದ್ದಿದೆ. ಇದರಿಂದ ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ಭರವಸೆ ಇದೆ" ಎಂದರು.
ನಂತರ ಮಾತನಾಡಿದ ಈಶ್ವರಪ್ಪ ಪುತ್ರ ಕಾಂತೇಶ್, "ನಮ್ಮ ತಂದೆ ಪಕ್ಷವನ್ನು ತಾಯಿ ಎಂದು ಭಾವಿಸಿ ದುಡಿದವರು. ಆದರೆ ಹಿರಿಯರು ಅವರ ಇಬ್ಬರು ಮಕ್ಕಳಿಗೆ ಅಧಿಕಾರ ಕೊಡಿಸಿದರು. ಒಬ್ಬರಿಗೆ ಸಂಸದರನ್ನಾಗಿ ಮಾಡಿದರು. ಇನ್ನೂಬ್ಬರನ್ನು ಶಾಸಕರನ್ನಾಗಿ ಮಾಡಿ, ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರು. ನಾನೇನು ತಪ್ಪು ಮಾಡಿದ್ದೆ?" ಎಂದು ಪ್ರಶ್ನಿಸಿದ್ದಾರೆ. ಇಂದು ಬಿಜೆಪಿಯ ಮಹಾನಗರ ಪಾಲಿಕೆಯ ಅನೇಕ ಸದಸ್ಯರು ಈಶ್ವರಪ್ಪನವರಿಗೆ ತಮ್ಮ ಬೆಂಬಲ ಘೋಷಿಸಿದರು.
ಇದನ್ನೂ ಓದಿ: ಹಾವೇರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ಬಗ್ಗೆ ಗೊತ್ತಿಲ್ಲ, ನನಗೆ ಬೆಳಗಾವಿ ಟಿಕೆಟ್ ಸಿಕ್ಕೇ ಸಿಗುತ್ತೆ: ಶೆಟ್ಟರ್