ಬೆಂಗಳೂರು: ರಿಕವರಿ ಏಜೆಂಟ್ ಎಂದು ಹೇಳಿ ಆಟೋ ಚಾಲಕನಿಗೆ ಧಮ್ಕಿ ಹಾಕಿ ಕಾನೂನು ಬಾಹಿರವಾಗಿ ಆಟೋ ಸೀಜ್ ಮಾಡಿದ್ದಲ್ಲದೆ ಕೋಮು ದೂಷಣೆ ಮಾಡಿದ ಆರೋಪ ಸಂಬಂಧ ಇಬ್ಬರನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ನಿವಾಸಿಯಾಗಿರುವ ಆಟೋ ಚಾಲಕ ಜಗನ್ನಾಥ ಎಂಬುವರು ನೀಡಿದ ದೂರಿನ ಮೇರೆಗೆ ಸಲ್ಮಾನ್ ಹಾಗೂ ಪಠಾಣ್ ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಎಂ. ಜಿ. ರಸ್ತೆಯಲ್ಲಿರುವ ವರ್ಧಮಾನ್ ಫೈನಾನ್ಸ್ ಕಂಪನಿಯಲ್ಲಿ ಆಟೋ ಚಾಲಕ 2 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಮಧ್ಯವರ್ತಿ ಹಾಗೂ ಡೀಲರ್ ಆಗಿದ್ದ ರಂಗಸ್ವಾಮಿ ಇದಕ್ಕೆ ನಾಮಿನಿ ಆಗಿದ್ದರು.
ಮೊದಲ ಎರಡು ತಿಂಗಳು ಸಾಲದ ಕಂತನ್ನು ಜಗನ್ನಾಥ ಪಾವತಿಸಿದ್ದರು. ಮಾರ್ಚ್ನಲ್ಲಿ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಂಗಸ್ವಾಮಿ ಆರೋಪಿತರನ್ನು ಸಂಪರ್ಕಿಸಿ ಆಟೋ ಸೀಜ್ ಮಾಡುವಂತೆ ಹೇಳಿದ್ದ. ಅದರಂತೆ ಕಳೆದ ಸೋಮವಾರ ರಾತ್ರಿ ಪ್ಯಾಸೆಂಜರ್ ಹತ್ತಿಸಿಕೊಂಡು ಬಿಟಿಎಂ ಲೇಔಟ್ ಕಡೆ ಹೋಗುವಾಗ ಆರು ಮಂದಿ ಯುವಕರು ಜಗನ್ನಾಥ ಅವರ ಆಟೋಗೆ ಅಡ್ಡ ಹಾಕಿ ಕರ್ನಾಟಕ ರಿಕವರಿ ಏಜೆನ್ಸಿ ಎಂದು ಹೇಳಿ ಗಾಡಿ ಸೀಜ್ ಮಾಡಿದ್ದಾರೆ.
ಜಪ್ತಿ ಮಾಡದಂತೆ ಚಾಲಕ ರಂಗನಾಥ ಮನವಿ ಮಾಡಿದರೂ ಸೊಪ್ಪು ಹಾಕದೆ ಕೋಮು ದೂಷಣೆ ಮಾಡಿ ನಿಂದಿಸಿದ್ದರು. ಡೀಲರ್ ಆಗಿರುವ ರಂಗಸ್ವಾಮಿ ಎಂಬಾತ ಕಾನೂನು ಗಾಳಿಗೆ ತೂರಿ ಅವರ ಸೂಚನೆಯಂತೆ ಆರೋಪಿತರಿಂದ ಬಲವಂತವಾಗಿ ಆಟೋ ಕೀಯನ್ನು ಕಸಿದುಕೊಂಡು ಸೀಜ್ ಮಾಡಿದ್ದಾರೆ ಎಂದು ಜಗನ್ನಾಥ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಡೀಲರ್ ಆಗಿರುವ ರಂಗಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮದ್ಯ ಸೇವಿಸುವಾಗ ಗಲಾಟೆ: ವ್ಯಕ್ತಿಯನ್ನು ಕಾರು ಹತ್ತಿಸಿ ಹತ್ಯೆಗೈದ ಆರೋಪಿ ಸೆರೆ - Murder Case