ಬಾಗಲಕೋಟೆ : ಜಾಗೃತ ದೇವರು ಎಂದು ಹೆಸರು ವಾಸಿಯಾಗಿರುವ ತುಳಸಿಗೇರಿ ಆಂಜನೇಯ ದೇವಾಲಯದ ಓಕಳಿ ಉತ್ಸವ ಸಂಭ್ರಮ ಸಡಗರದಿಂದ ಜರುಗಿತು. ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಈ ಓಕಳಿ ಉತ್ಸವವು ತನ್ನದೇ ಆದ ವೈಶಿಷ್ಟ್ಯತೆ ಪಡೆದುಕೊಂಡಿದೆ.
ಓಕಳಿ ಉತ್ಸವ ನಂತರ ಆರು ತಿಂಗಳ ಕಾಲ ಈ ಗ್ರಾಮದಲ್ಲಿ ಯುವಕರು ಮದುವೆ ಆಗುವಂತಿಲ್ಲ. ಮನೆಗೆ ಸುಣ್ಣ ಬಣ್ಣ ಹಚ್ಚುವಂತಿಲ್ಲ ಹಾಗೂ ಹೊಸ ಕಸಬರಿಗೆ ಮತ್ತು ಎತ್ತುಗಳಿಗೆ ಶೃಂಗಾರ ಮಾಡುವಂತಿಲ್ಲ. ಇದು ಓಕಳಿ ನಂತರ ಈ ಗ್ರಾಮದಲ್ಲಿ ಆಚರಿಸಿಕೊಂಡು ಬರುವ ಸಂಪ್ರದಾಯ ಹಾಗೂ ಪದ್ಧತಿ. ನೂರಾರು ವರ್ಷಗಳ ಇತಿಹಾಸ ಹಿನ್ನೆಲೆ ಹೊಂದಿರುವ ತುಳಸಿಗೇರಿ ಆಂಜನೇಯ ದೇವಾಲಯ ಓಕಳಿಯು ಮೇ ತಿಂಗಳಿನಲ್ಲಿ ನಡೆಯುತ್ತೆ. ಹುಣ್ಣಿಮೆ ಮುಂಚೆಯೇ ಗ್ರಾಮಸ್ಥರು ವಾರ ಹಿಡಿದಿರುತ್ತಾರೆ.
ಮೂರು ವಾರದ ಬಳಿಕ ಶನಿವಾರದ ದಿನದಂದು ಓಕಳಿ ಉತ್ಸವ ಪ್ರಾರಂಭ ಆಗುತ್ತದೆ. ಮೊದಲು ಆಂಜನೇಯ ದೇವರಿಗೆ ವಿಶೇಷ ಪೂಜೆ, ಪುರಸ್ಕಾರ, ನಂತರ ಕಡುಬಿನ ನೈವೇದ್ಯ ಮೂರನೆಯ ದಿನ ಓಕಳಿ ಅಂದರೆ ಪುಟ್ಟ ಹೊಂಡದ ನೀರಿನಲ್ಲಿ ಮಿಂದೇಳುವುದು. ದೇವಾಲಯದ ಆವರಣ ಪಕ್ಕದಲ್ಲಿಯೇ ಚಿಕ್ಕ ಹೊಂಡ ಇದೆ. ಕೊನೆಯ ದಿನದಂದು ಸೋಮವಾರ ಮುಂಜಾನೆಯಿಂದಲೇ ಪೂಜೆ, ಪುರಸ್ಕಾರ ನೇರವೇರಿಸುತ್ತಾರೆ. ನಂತರ ಹೊಂಡದಲ್ಲಿ ಕುಂಕುಮ, ಅರಿಶಿಣ, ಕೊಬ್ಬರಿ ಎಣ್ಣೆ ಸೇರಿದಂತೆ ಇತರ ವಸ್ತುಗಳನ್ನು ಹಾಕಿ, ಶೃಂಗಾರ ಮಾಡಿ, ಪೂಜೆ ಸಲ್ಲಿಸುತ್ತಾರೆ. ಸಂಜೆ ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.
ಪಲ್ಲಕ್ಕಿಯನ್ನು ಪುಟ್ಟ ಹೊಂಡದಲ್ಲಿ ಐದು ಸುತ್ತು ಹಾಕಿ ಪೂಜೆ ಸಲ್ಲಿಸಿದ ಬಳಿಕ ಸೇರುವ ಯುವಕರು ಹೊಂಡದಲ್ಲಿ ಮುಗಿ ಬೀಳುತ್ತಾರೆ. ಇದೇ ಸಮಯದಲ್ಲಿ ನೀರು ಎರಚುವುದು, ಬಡಿಗೆಯಿಂದ ಮಹಿಳೆಯರು ಯುವಕರಿಗೆ ಹೊಡೆಯುತ್ತಾ, ಓಕಳಿ ಆಡುವ ಸಂಪ್ರದಾಯವನ್ನು ಮುಂದುವರೆಸುತ್ತಾರೆ.
ಈ ಹಿಂದೆ ಇಂತಹ ಓಕಳಿ ಪದ್ದತಿ ಮೂರು ವರ್ಷಕ್ಕೊಮ್ಮೆ ದೇವಾಲಯ ಸಮಿತಿ ವತಿಯಿಂದ ಆಚರಿಸಿಕೊಂಡು ಬರಲಾಗುತ್ತಿತ್ತು. ಭಕ್ತರು ದೇಣಿಗೆ ಕೂಡಲು ಮುಂದಾದ ಹಿನ್ನೆಲೆ ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತದೆ. 2030 ರವರೆಗೆ ಪ್ರತಿವರ್ಷ ಹಬ್ಬದ ಆಚರಣೆ ಮಾಡುವಷ್ಟು ಈಗಲೇ ದೇಣಿಗೆ ಸಂಗ್ರಹವಾಗಿರುವುದು ವಿಶೇಷ.
ಪ್ರತಿವರ್ಷ ನಡೆಯುವ ಓಕಳಿ ಬಳಿಕ ಕಾರ್ತಿಕ ಮಾಸದವರೆಗೆ ಅಂದರೆ ತುಳಸಿ ವಿವಾಹ ದಿನದವರೆಗೆ ಈ ಗ್ರಾಮದಲ್ಲಿ ಶುಭ ಕಾರ್ಯಕ್ರಮ ಜರುಗುವುದಿಲ್ಲ. ಇಂತಹ ಆಚರಣೆಯನ್ನು ಗ್ರಾಮಸ್ಥರು ಮುಂದುವರೆಸಿಕೊಂಡು ಬಂದಿದ್ದಾರೆ. ಹೆಣ್ಣು ಮಕ್ಕಳ ಮದುವೆ ಮಾತ್ರ ಮಾಡಬಹುದು. ಆದರೆ ಯುವಕರ ಮದುವೆ ಸಮಾರಂಭ ಸೇರಿದಂತೆ ಇತರ ಶುಭ ಕಾರ್ಯಗಳು ಜರುಗುವುದಿಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈಗಲೂ ಇದನ್ನು ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ಇದನ್ನೂ ಓದಿ : ಆರು ತಿಂಗಳು ಈ ಗ್ರಾಮದ ಯುವಕರಿಗೆ ವಿವಾಹ ನಿಷಿದ್ಧ... ಓಕಳಿ ಸಂಪ್ರದಾಯ ಮೀರಂಗಿಲ್ಲ!