ಯಾದಗಿರಿ: ದರೋಡೆಕೋರರ ತಂಡವೊಂದು ಸಿನಿಮೀಯ ರೀತಿಯಲ್ಲಿ ಬೊಲೆರೋ ವಾಹನ ಅಡ್ಡಗಟ್ಟಿ ಪೆಪ್ಸಿ ಬಾಟಲ್ನಿಂದ ಹೊಡೆದು, ಜೀವಬೆದರಿಕೆ ಹಾಕಿ ದರೋಡೆ ನಡೆಸಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಯಾದಗಿರಿ-ಶಹಾಪುರ ಮುಖ್ಯ ಹೆದ್ದಾರಿಯ ತಾಲೂಕಿನ ಚಟ್ನಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಒಟ್ಟು 10 ಜನ ಭಾಗಿಯಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನುಳಿದ 7 ಜನರಿಗಾಗಿ ಬಲೆ ಬೀಸಿದ್ದಾರೆ. ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಜ.21 ರಂದು 4 ಲಕ್ಷ ಹಣ ಮತ್ತು 13 ಲಕ್ಷ ಮೌಲ್ಯದ ವಿವಿಧ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ : ತೆಲಂಗಾಣದ ಸೂರ್ಯಪೇಟ ಪಟ್ಟಣದಿಂದ ಕಳೆದ ಜ.3ರಂದು ಶಹಾಪುರದ ಜಾನುವಾರಗಳ ಸಂತೆಗೆ ಬಂದಿದ್ದ ವ್ಯಾಪಾರಿಗಳ ಮೇಲೆ ತಾಲೂಕಿನ ಚಟ್ನಳ್ಳಿ ಕ್ರಾಸ್ ಗುಂಡಳ್ಳಿ ತಾಂಡಾ ಬಳಿ ದರೋಡೆಕೋರರ ತಂಡ ಗಾಜಿನ ಬಾಟಲ್ಗಳಿಂದ ಬೆಳಗಿನ ಜಾವ 3ರ ಹೊತ್ತಿಗೆ ದಾಳಿ ನಡೆಸಿತ್ತು. 4 ಲಕ್ಷ ರೂ. ನಗದು ಹಣ ಕಸಿದು ಪರಾರಿಯಾಗಿದ್ದರು. ಇಬ್ಬರು ಕುರಿ ವ್ಯಾಪಾರಿಗಳ ಬಳಿಯಿದ್ದ ಮೊಬೈಲ್ ಸಿಮ್ ಮುರಿದು ಬಿಸಾಕಿ, ಮೊಬೈಲ್ ಮಾತ್ರ ಕೊಟ್ಟು ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಳ್ಳರ ಹೆಡೆಮುರಿ ಕಟ್ಟಲು ತಂಡಗಳನ್ನು ರಚಿಸಿ ಆರೋಪಿಗಳ ಚಲನವಲನದ ಮೇಲೆ ನಿಗಾ ಇರಿಸಿತ್ತು. ಇದೀಗ ಅಧಿಕಾರಿಗಳ ತಂಡ ರಾಯಚೂರಿನಲ್ಲಿ ಆರೋಪಿಗಳನ್ನು ಬಂಧಿಸಿದೆ. ಲಿಂಗಸೂಗುರಿನ ಯಲ್ಲಪ್ಪ, ಕೃಷ್ಣ ಮತ್ತು ದೇವದುರ್ಗದ ಸಿದ್ದರಾಮಪ್ಪ ಬಂಧಿತರು. ಅವರ ಬಳಿ ಇದ್ದ ಹಣವನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ.
ನಗರದ ಪ್ರಮುಖ 24 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ನಡೆದಿದೆ. ಈ ಹಿಂದೆ 55 ಲಕ್ಷ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಆದರೆ, ಹೆಚ್ಚಿನ ಹಣದ ಅವಶ್ಯಕತೆ ಇದ್ದ ಕಾರಣ ಕೆಕೆಆರ್ಡಿಬಿಯಿಂದ ಮತ್ತೆ 15 ಲಕ್ಷ ಬಿಡುಗಡೆಯಾಗಿದೆ. ಒಟ್ಟು 70 ಲಕ್ಷ ರೂ.ಗಳಲ್ಲಿ 83 ಸಿಸಿ ಕ್ಯಾಮರಾ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ. ನಗರ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ಇದೇ ಜ.27ರಂದು ನಡೆಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃತ್ವಿಕ್ ಶಂಕರ್ ತಿಳಿಸಿದರು.
ಇದನ್ನೂ ಓದಿ: ಸಹಚರರ ಮೂಲಕ ಪರಿಚಿತನ ಅಂಗಡಿಯಲ್ಲಿ ಬೆಳ್ಳಿ ಕಳ್ಳತನ: ಇಬ್ಬರ ಬಂಧನ