ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಏಳು ಮಂದಿಗೆ ನೀಡಲಾಗಿರುವ ಜಾಮೀನು ರದ್ದುಕೋರಿ ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ಇದೇ ಶುಕ್ರವಾರ ವಿಚಾರಣೆ ನಡೆಸಲಿದೆ.
ಹತ್ಯೆ ಪ್ರಕರಣದ ಆರೋಪಿಗಳಾಗಿರುವ ದರ್ಶನ್, ನಾಗರಾಜು, ಅನುಕುಮಾರ್, ಲಕ್ಷ್ಮಣ್, ಪವಿತ್ರಾಗೌಡ, ಜಗದೀಶ್ ಹಾಗೂ ಪ್ರದೂಷ್ ಅವರಿಗೆ ಹೈಕೋರ್ಟ್ ನೀಡಿರುವ ಜಾಮೀನು ರದ್ದುಕೋರಿ ಮೇಲ್ಮನವಿ ಸಲ್ಲಿಸಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪರಿದಿವಾಲಾ ಹಾಗೂ ಆರ್.ಮಹದೇವನ್ ದ್ವಿಸದಸ್ಯ ಪೀಠ ವಿಚಾರಣೆ ನಡೆಸಲಿದೆ.

ಹತ್ಯೆ ಪ್ರಕರಣದಲ್ಲಿ 17 ಮಂದಿ ಆರೋಪಿಗಳಿಗೂ ಜಾಮೀನು ದೊರೆತಿದ್ದು, ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಎನ್ನಲಾದ ಏಳು ಆರೋಪಿಗಳ ಜಾಮೀನು ರದ್ದು ಕೋರಿ 1492 ಪುಟಗಳ ಕಡತವನ್ನ ಸುಪ್ರೀಂಗೆ ಸಲ್ಲಿಸಲಾಗಿದೆ.
ಸುಪ್ರೀಂಗೆ ಸಲ್ಲಿಸಿದ ಕಡತದಲ್ಲಿ ಏನಿದೆ?: ವಕೀಲ ಅನಿಲ್ ನಿಶಾನಿ ಮುಖಾಂತರ ರಾಜ್ಯ ಪ್ರಾಸಿಕ್ಯೂಷನ್ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದು, ಬರೋಬ್ಬರಿ 1492 ಪುಟಗಳು ಒಳಗೊಂಡಿದೆ. ಬೃಹತ್ ಕಡತದಲ್ಲಿ ಹೈಕೋರ್ಟ್, ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಹಾಗೂ ದೂರಿನ ಪ್ರತಿ, ಮರಣೋತ್ತರ ಪರೀಕ್ಷೆ ವರದಿ, ಆರೋಪಿಗಳ ಗ್ರೌಂಡ್ಸ್ ಆಫ್ ಅರೆಸ್ಟ್ ಕುರಿತು ನೀಡಿರುವ ಪ್ರತಿ, ಪ್ರತ್ಯಕ್ಷದರ್ಶಿಗಳಾದ ಸಾಕ್ಷಿ ಹೇಳಿಕೆಗಳು, ಮರಣೋತ್ತರ ವರದಿ ಮೇಲೆ ವೈದ್ಯರಿಂದ ಪಡೆದ ಹೆಚ್ಚುವರಿ ಅಭಿಪ್ರಾಯ ವರದಿ, ಎಫ್ಎಸ್ಎಲ್ ಹಾಗೂ ಎಫ್ಎಸ್ಎಲ್ ವರದಿಗಳ ಪ್ರತಿಗಳು, ಪಂಚನಾಮೆ ರಿಪೋರ್ಟ್, ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ, ಸೆಷನ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಳಿಸಿದ ಆದೇಶ ಪ್ರತಿ, ದರ್ಶನ್ಗೆ ನೀಡಿದ್ದ ಮಧ್ಯಂತರ ಜಾಮೀನು ಹಾಗೂ ಅವರ ಅನಾರೋಗ್ಯ ಸಂಬಂಧಿಸಿದ ವೈದ್ಯರ ವರದಿ ಸೇರಿದಂತೆ ಹಲವು ಅಂಶಗಳು ಒಳಗೊಂಡಿದೆ.
ಇದನ್ನೂ ಓದಿ: ದರ್ಶನ್ ಸೇರಿ ಎಲ್ಲ ಆರೋಪಿಗಳ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ - RENUKASWAMY MURDER CASE