ದಾವಣಗೆರೆ: ನಿರಂತರವಾಗಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಕೆರೆ ಕಟ್ಟೆಗಳಿಗೆ ಜೀವ ಕಳೆ ಬಂದಿದೆ. ಮಳೆ ಇಲ್ಲದೆ ಸೊರಗಿದ್ದ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂಗೆ ಜಲ ರಾಶಿ ಹರಿದು ಬರುತ್ತಿದೆ. ಜೀವಜಲದಿಂದ ನಳನಳಿಸುತ್ತಿರುವ ಡ್ಯಾಂ ಭರ್ತಿಯಾಗಿದ್ದು, ಗೇಟ್ಗಳ ಮೂಲಕ ನೀರು ಹೊರಬಿಡಲಾಗಿದೆ. ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರಿನ ಈ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಇದು ಒನ್ ಡೇ ಪಿಕ್ನಿಕ್ಗೆ ಹೇಳಿ ಮಾಡಿಸಿದ ಸ್ಥಳ ಕೂಡ ಹೌದು.
ಪಿಕಪ್ ಡ್ಯಾಂ ತುಂಬಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 20ಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಆಸರೆಯಾಗಿದೆ ಈ ಡ್ಯಾಂ. ಈ ಜಲಾಶಯದ ಹೆಚ್ಚಿನ ನೀರು ತುಂಗಭದ್ರಾ ನದಿಗೆ ಹರಿಬಿಡಲಾಗಿದೆ. ಗೇಟ್ ಮೂಲಕ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಏಳು ಗೇಟ್ಗಳ ಮೂಲಕ ನೀರು ಹೊರ ಹೋಗ್ತಿರುವುದು ಜನ್ರನ್ನು ಆಕರ್ಷಿಸುತ್ತಿದೆ. ದುರಂತ ಎಂದರೇ ಈ ಡ್ಯಾಂ ನಿರ್ಮಿಸಿ ಹಲವು ವರ್ಷಗಳೇ ಉರುಳಿದರು ಕೂಡ ಮೂಲಭೂತ ಸೌಕರ್ಯಗಳು ಮಾತ್ರ ಮರೀಚಿಕೆಯಾಗಿವೆ. ಇದಲ್ಲದೆ ಡ್ಯಾಂಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆಗಾಗಿ ತಡೆಗೋಡೆ ಅವಶ್ಯಕತೆ ಇದೆ. ಈಗಾಗಲೇ ಇರುವ ತಡೆಗೋಡೆಗಳು ಸಂಪೂರ್ಣವಾಗಿ ಹಾನಿಯಾಗಿವೆ. ಈ ಮಳೆಗಾಲದಲ್ಲಿ ಸುತ್ತಮುತ್ತಲಿನ ಹಳ್ಳಿಗಳಿಂದ ಹರಿದು ಬರುವ ನೀರು ದೇವರಬೆಳೆಕೆರೆ ಡ್ಯಾಂ ಸೇರುತ್ತದೆ. ಈಗಾಗಲೇ ದೇವರಬೆಳೆಕೆರೆಗೆ ಅಡ್ಡಲಾಗಿ ನಿರ್ಮಿಸಿರುವ ಈ ಡ್ಯಾಂ ಸಾಕಷ್ಟು ನೀರನ್ನು ಹಿಡಿದಿಟ್ಟುಕೊಳ್ಳಲಿದೆ. ಈ ಪಿಕಪ್ ಡ್ಯಾಂ ನಲ್ಲಿ ಹೆಚ್ಚು ಹೂಳು ತುಂಬಿಕೊಂಡಿದ್ದು, ಅದನ್ನು ತೆರವು ಮಾಡ್ಬೇಕೆಂಬುದು ರೈತರ ಒತ್ತಾಯವಾಗಿದೆ.
ಮೀನು ಹಿಡಿಯಲು ಯುವಕರ ಸಾಹಸ: ಈ ಡ್ಯಾಂನ ಗೇಟ್ಗಳ ಮುಂದೆ ಮೀನು ಹಿಡಿಯಬಾರದೆಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಆದ್ರೂ ಕೂಡ ತಮ್ಮ ಜೀವ ಪಣಕ್ಕಿಟ್ಟು ಕೆಲ ಯುವಕರು ಮೀನು ಹಿಡಿಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. "ನಾಲ್ಕೈದು ದಿನಗಳ ಹಿಂದೇ ಡ್ಯಾಂ ತುಂಬಿದೆ. ಡ್ಯಾಂನಿಂದ ಹೆಚ್ಚುವರಿ ನೀರು ಹರಿಯುವುದು ಕಂಡು ಜನ ಆಗಮಿಸುತ್ತಿದ್ದಾರೆ. ಡ್ಯಾಂ ಗೇಟ್ ಮೂಲಕ ನೀರು ಹರಿಯುತ್ತಿರುವುದನ್ನು ನೋಡಿದ್ರೇ ಮನಸ್ಸಿಗೆ ಸಂತಸ ಸಿಗುತ್ತಿದೆ. ಡ್ಯಾಂ ಸುತ್ತಮುತ್ತ ಒಳ್ಳೆ ವಾತಾವರಣ ಇದ್ದು, ರೈತರಿಗೆ ಸೇರಿದ ಬೋರ್ವೆಲ್ಗಳೆಲ್ಲವೂ ರಿಚಾರ್ಜ್ ಆಗಿವೆ" ಎಂದು ಪ್ರವಾಸಿಗರಾದ ಮಾರುತಿ ತಿಳಿಸಿದರು.
ರಾಜಸ್ಥಾನ ಪ್ರವಾಸಿಗರನ್ನು ಆಕರ್ಷಿಸಿದ ಡ್ಯಾಂ: ದೇವರಬೆಳೆಕೆರೆ ಡ್ಯಾಂ ಕಣ್ತುಂಬಿಕೊಳ್ಳಲು ರಾಜಸ್ಥಾನ ಮೂಲದ ಪ್ರವಾಸಿಗರು ಆಗಮಿಸಿದ್ದು ವಿಶೇಷ ಆಗಿತ್ತು. ಕೈಲಾಶ್ ಎಂಬುವರು ಕುಟುಂಬ ಸಮೇತ ಈ ಡ್ಯಾಂಗೆ ಭೇಟಿ ನೀಡಿದ್ದು, ಧುಮ್ಮಿಕ್ಕುವ ನೀರಿನ ದೃಶ್ಯ ಕಂಡು ಸಂತಸ ವ್ಯಕ್ತಪಡಿಸಿದರು. "ನಾವು ನಮ್ಮ ಕುಟುಂಬದ ಸಮೇತ ಡ್ಯಾಂ ನೋಡಲು ಆಗಮಿಸಿದ್ದೇವೆ. ಇಲ್ಲಿಯ ನೀರು, ಗಾಳಿ ಮನಸ್ಸಿಗೆ ಮುದ ನೀಡುತ್ತಿದೆ. ಇದೊಂದು ಪ್ರವಾಸಿ ಸ್ಥಳವಾಗಿದೆ. ನಾವು ಹರಿಹರದಿಂದ ರಜೆ ಹಾಕಿ ಗಾಡಿ ಮಾಡಿಕೊಂಡು ಈ ಪ್ರವಾಸಿ ಸ್ಥಳವನ್ನು ನೋಡಲು ಬಂದಿದ್ದೇವೆ. ಒಳ್ಳೆ ಪ್ರವಾಸಿ ಸ್ಥಳವಾಗಿದೆ" ಎಂದು ಕೈಲಾಶ್ ತಿಳಿಸಿದರು.