ಕಾರವಾರ : ಐಎನ್ಎಸ್ ಕದಂಬ ನೌಕಾ ನೆಲೆಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಆರು ತಿಂಗಳ ಬಳಿಕ ಮತ್ತೆ ಕಾರವಾರಕ್ಕೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ ಈ ಹಿಂದೆ ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರವಾರ ತಾಲೂಕಿನ ಮುದಗಾದ ವೇತನ್ ತಾಂಡೇಲ್ ಹಾಗೂ ಅಂಕೋಲಾದ ಅಕ್ಷಯ್ ಎಂಬುವರನ್ನು ಎನ್ಐಎ ಅಧಿಕಾರಿಗಳು ಆರು ತಿಂಗಳ ಬಳಿಕ ಮತ್ತೆ ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ವೇತನ್ ತಾಂಡೇಲ್ನನ್ನು ಕಾರವಾರ ನಗರ ಠಾಣೆಯಲ್ಲಿ ಹಾಗೂ ಅಂಕೋಲಾದ ಪೊಲೀಸ್ ಠಾಣೆಯಲ್ಲಿ ಅಕ್ಷಯ್ ನಾಯ್ಕ್ ಅವರನ್ನು ಇರಿಸಲಾಗಿದ್ದು, ಇದೀಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ನಗರ ಠಾಣೆಗೆ ಆಗಮಿಸಿದ್ದ ಮೂವರು ಡಿವೈಎಸ್ಪಿಗಳ ನೇತೃತ್ವದ ಆರು ಅಧಿಕಾರಿಗಳ ತಂಡ ರಾತ್ರಿಯವರೆಗೂ ನಗರ ಠಾಣೆಯಲ್ಲೇ ಬೀಡುಬಿಟ್ಟು ಪ್ರಕರಣ ಸಂಬಂಧ ಸಂಪೂರ್ಣ ದಾಖಲೆಗಳನ್ನು ಸಂಗ್ರಹಿಸಿತ್ತು. ಅಲ್ಲದೆ ಪಂಚರನ್ನಾಗಿ ಸ್ಥಳೀಯ ನಗರಸಭೆ ನೌಕರರು ಮತ್ತು ಪೊಲೀಸರ ಜೊತೆ ಎನ್ಐಎ ಅಧಿಕಾರಿಗಳು ಇಂದು ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅರಗಾದ ಸೀಬರ್ಡ್ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರಲ್ಲಿ ಆಗಸ್ಟ್ ತಿಂಗಳಲ್ಲಿ ಕಾರವಾರಕ್ಕೆ ಆಗಮಿಸಿದ್ದ ಎನ್ಐಎ ತಂಡ ಸ್ಥಳೀಯ ಮೂವರನ್ನು ವಿಚಾರಣೆಗೆ ಒಳಪಡಿಸಿ ಬಳಿಕ ಬಿಡಲಾಗಿತ್ತು. 2023ರಲ್ಲಿ ವಿಶಾಖಪಟ್ಟಣಂನಲ್ಲಿ ಹೈದರಾಬಾದ್ ಎನ್ಐಎ ತಂಡದಿಂದ ದೀಪಕ್ ಹಾಗೂ ತಂಡ ಬಂಧಿಸಲ್ಪಟ್ಟಾಗ ನೌಕಾನೆಲೆ ಮಾಹಿತಿ ಹಂಚಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಮಹಿಳೆ ಎಂದು ಪರಿಚಯಿಸಿಕೊಂಡ ಬೇಹುಗಾರರು ನೌಕಾನೆಲೆ ಮಾಹಿತಿ ಪಡೆದು ಈ ಮಾಹಿತಿ ನೀಡಿದ್ದಕ್ಕೆ ಇವರಿಗೆ ಹಣವನ್ನು ಕೂಡ ನೀಡಿದ್ದರು ಎಂದು ಎನ್ಐಎ ಮೂಲಗಳು ತಿಳಿಸಿದ್ದವು.
ಆ ವೇಳೆಯಲ್ಲಿ ಹೈದರಾಬಾದ್ ಹಾಗೂ ಬೆಂಗಳೂರಿನ ಎನ್ಐಎ ಡಿವೈಎಸ್ಪಿ ಹಾಗೂ 3 ಇನ್ಸ್ಪೆಕ್ಟರ್ಗಳಿಂದ ಶಂಕಿತ ಆರೋಪಿಗಳ ತನಿಖೆಯಾಗಿತ್ತು. ಸೀಬರ್ಡ್ ನೌಕಾನೆಲೆ ಮಾಹಿತಿ ಸೋರಿಕೆ ಪ್ರಕರಣದಲ್ಲಿ ಇನ್ನಷ್ಟು ಶಂಕಿತರಿದ್ದಾರೆ ಎಂದು ಎನ್ಐಎ ಅಂದೇ ಮೂಲಗಳಿಂದ ಮಾಹಿತಿ ಪಡೆದಿತ್ತು. ಕೆಲವು ಶಂಕಿತರ ಮೇಲೆ ಎನ್ಐಎ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಕಣ್ಣಿಟ್ಟಿತ್ತು ಅದರಂತೆ ಇದೀಗ ಬೆಂಗಳೂರು ಮತ್ತು ಹೈದರಾಬಾದ್ ಎನ್ಐಎ ತಂಡ ಮತ್ತೆ ನಗರದಲ್ಲಿ ಬೀಡು ಬಿಟ್ಟು ಇಬ್ಬರನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ: ಸ್ಥಳೀಯೇತರ ಜನರ ಹತ್ಯೆ: ಕಾಶ್ಮೀರದ ಹಲವೆಡೆ ಎನ್ಐಎ ದಾಳಿ
ಇದನ್ನೂ ಓದಿ: ಕಾರವಾರ ನೌಕಾನೆಲೆಯೊಳಗಿನ ಗೌಪ್ಯ ಮಾಹಿತಿ ಸೋರಿಕೆ ಆರೋಪ: ಮೂವರು ಎನ್ಐಎ ವಶಕ್ಕೆ - Naval base info leak