ಬೆಂಗಳೂರು: "ಉದ್ಯಮಿ ಮೋಹನ್ ದಾಸ್ ಪೈ ಸುಮ್ಮನೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯ ಸ್ಥಾನ ಬೇಕಾಗಿರಬೇಕು. ಅದಕ್ಕೆ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ವಿಕಾಸಸೌಧದಲ್ಲಿಂದು ಮಾತನಾಡಿದ ಅವರು, "ಅವರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆ ಬೇಕಾಗಿರಬೇಕು. ಅದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಹಿಂದೆ ಇವರು ತಾನೇ ಬೇರೆ ಬೇರೆ ಹುದ್ದೆಯಲ್ಲಿ ಇದ್ದವರು. ಸರ್ಕಾರ ಬದಲಾವಣೆ ಆದ ಮೇಲೆ ಇವರ ವರಸೆ ಬದಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಅವರಿಗೆ ಟಾರ್ಗೆಟ್ ಆಗಿದ್ದಾರೆ. ಏನೋ ಒಂದು ಆಗಬೇಕಿದೆ. ಅದಕ್ಕೆ ಸೋಷಿಯಲ್ ಮಿಡಿಯಾ ವಾರಿಯರ್ಸ್ ಆಗಿದ್ದಾರೆ. ಆಗ ತಿಂಗಳಿಗೆ ಒಮ್ಮೆ ಮಾತನಾಡುತ್ತಿದ್ದರು. ಈಗ ವಾರವೂ ಮಾತನಾಡುತ್ತಿದ್ದಾರೆ" ಎಂದರು.
ನಗರದ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಮಾತಿನ ಭರದಲ್ಲಿ ಬೆಂಗಳೂರನ್ನು ಮೇಲಿರುವ ಭಗವಂತ ಕೆಳಗೆ ಬಂದರೂ ಕೇವಲ ಎರಡು-ಮೂರು ವರ್ಷಗಳಲ್ಲಿ ಬದಲಾಯಿಸಲು ಆಗುವುದಿಲ್ಲ ಎಂದು ಹೇಳಿದ್ದರು. ಮೋಹನ್ ದಾಸ್ ಪೈ ಇತ್ತೀಚೆಗೆ ಎಕ್ಸ್ ಪೋಸ್ಟ್ ಮಾಡಿ, ಡಿ.ಕೆ.ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾಗಿ ಬಂದು ಎರಡು ವರ್ಷ ಆಯಿತು. ನಗರಕ್ಕೆ ಪ್ರಬಲ ಸಚಿವರು ಸಿಕ್ಕಿದ್ದಾರೆಂದು ನಾವೆಲ್ಲಾ ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದೆವು. ಆದರೆ, ನಮ್ಮ ಜೀವನ ಇನ್ನಷ್ಟು ಕೆಟ್ಟದಾಗಿದೆ. ದೊಡ್ಡ ದೊಡ್ಡ ಯೋಜನೆ ಘೋಷಿಸಲಾಗುತ್ತದೆ. ಆದರೆ, ಸರ್ಕಾರ ಅದನ್ನು ಜಾರಿ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಯಾವುದನ್ನೂ ಸಮಯಕ್ಕೆ ಸರಿಯಾಗಿ ಜಾರಿ ಮಾಡಿಲ್ಲ" ಎಂದು ಟೀಕಿಸಿದ್ದರು.
ಇದನ್ನೂ ಓದಿ: 'ಬಿಜೆಪಿಯ ಯಾವ ಬಣದವರು ಪ್ರತಿಭಟನೆ ಮಾಡ್ತಿದ್ದಾರೆ ಅನ್ನೋದನ್ನು ಮೊದಲು ಹೇಳಲಿ' - MINISTER PRIYANK KHARGE