ತುಮಕೂರು: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ಬಣ vs ಸಿದ್ದರಾಮಯ್ಯ ಬಣಗಳ ನಡುವಿನ ಜಟಾಪಟಿ ಜೋರಾಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಸಿದ್ದರಾಮಯ್ಯ ಬಣದ ಸಚಿವ ರಾಜಣ್ಣ, ಜಿ.ಪರಮೇಶ್ವರ್ ವಿರುದ್ದ ವಾಗ್ದಾಳಿ ನಡೆಸಿದ್ದರು.
ತುಮಕೂರು ಹಾಲು ಒಕ್ಕೂಟದ ಚುನಾವಣೆಯಲ್ಲಿ ಶ್ರೀನಿವಾಸ್ ಪತ್ನಿ ಭಾರತಿ ಅವರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಶ್ರೀನಿವಾಸ್, ಚುನಾವಣೆ ಗೆದ್ದ ಪ್ರತಿನಿಧಿಗಳನ್ನು ಬಿಟ್ಟು ನಾಮಿನಿ ಆದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ನಡೀತಿದೆ ಎಂದು ವಾಗ್ದಾಳಿ ಮಾಡಿದ್ದ ಶ್ರೀನಿವಾಸ್, ಇದೀಗ ಮತ್ತೆ ಗುಬ್ಬಿಯಲ್ಲಿ ನಡೆದ ಸಹಕಾರಿ ಸಂಘದ ಅಭಿನಂದನಾ ಸಮಾರಂಭದಲ್ಲಿ ಪರಮೇಶ್ವರ್ ಹಾಗೂ ರಾಜಣ್ಣರ ವಿರುದ್ದ ಹೆಸರು ಹೇಳದೆ ಪರೋಕ್ಷವಾಗಿ ಕಿಡಿ ಕಾರಿದ್ದಾರೆ.
ಅಧಿಕಾರದ ಹಪಾಹಪಿ ನನಗಿಲ್ಲ, ನೇರವಾಗಿ ಜನರ ಪ್ರೀತಿ, ವಿಶ್ವಾಸ ಗಳಿಸಿ ನಾನು ಅಧಿಕಾರಕ್ಕೆ ಬಂದವನು. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ನೀವು ಗಮನಿಸುತ್ತಿದ್ದೀರಿ. ವ್ಯಕ್ತಿಗತವಾಗಿ ನನಗೆ ಅಧಿಕಾರವಿದೆ ಎಂದು ಹೇಳಿ ಏನ್ ಬೇಕಾದರೂ ಮಾಡಬಹುದು ಎಂದು ಕೆಲವರು ಮನೋಭಾವ ಬೆಳೆಸಿಕೊಂಡಿದ್ದಾರೆ. ನಾನು, ನಾನು ಅನ್ನೋರು ಹೆಚ್ಚಾಗಿದ್ದಾರೆ. ಅವರು ಎಂದೂ ಮುಂದೆ ಬರಲ್ಲ. ಎಷ್ಟು ದಿನ ಯಾರ್ಯಾರು ಹೆಂಗೆಗೆ ಆಡ್ತಾರೆ ಅಂತ ನಾವೂ ನೋಡ್ತೀವಿ, ಕಾಯ್ತಿದ್ದೇವೆ. ನನ್ನ ಪತ್ನಿಗೆ ಅಧಿಕಾರ ಸಿಕ್ಕಿಲ್ಲ ಎಂಬ ವ್ಯಾಮೋಹ ನನಗಿಲ್ಲ. ಅವರ ಕಡೆಯವರಿಗೆ ಯಾರಾದರೂ ಮಾಡಿ ಅಂದೆ. ನನ್ನ ಹೆಂಡ್ತಿಯನ್ನು ಮಾಡಿ ಅಂದಿಲ್ಲ ಎಂದಿದ್ದರು.
ಶಾಸಕ ವೆಂಕಟೇಶ್ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಅರ್ಜಿ ಹಾಕಿಸಿಕೊಂಡು ನನ್ನ ಸೋಲಿಸಿದ್ರಲ್ಲಾ?. ಈ ರೀತಿ ಬುದ್ದಿ ಇರುವವರು ಸಮಾಜದಲ್ಲಿ ಬದುಕಲು ಆಗುತ್ತಾ?. ಇವೆಲ್ಲಾ ನೋಡಿ ಮಾರ್ಕ್ಸ್ ಹಾಕೋ ದಿನ ಬರುತ್ತೆ ಎಂದು ಆಕ್ರೋಶ ಹೊರಹಾಕಿದರು.
ಮಧುಗಿರಿಯಲ್ಲಿ ನಡೆದ ತುಮುಲ್ ನೂತನ ನಿರ್ದೇಶಕರ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಎಂಎಲ್ಸಿ ರಾಜೇಂದ್ರ ರಾಜಣ್ಣ, ಶಾಸಕ ಶ್ರೀನಿವಾಸ್ ಎಡಗೈ ಬಲಗೈ ಅಂತಾ ಮಾತಾಡಿದ್ದಾರೆ. ದಲಿತರ ಮೇಲೆ ನಿನಗೆ ಕಾಳಜಿ ಇದ್ದದ್ದೇ ಹೌದಾದರೆ ನಿನ್ನ ಹೆಂಡತಿಗೆ ಟಿಕೆಟ್ ಕೊಡೋದು ಬಿಟ್ಟು ಎಸ್ಸಿ ಎಸ್ಟಿಗೆ ಕೊಡಬೇಕಿತ್ತು. ಆಗ ನೀವು ಮಾತಾಡಿದ್ರೆ ನಾವು ಮೆಚ್ಚುಗೆ ವ್ಯಕ್ತಪಡಿಸಿದ್ದೆವು ಎಂದಿದ್ದಾರೆ.
ತನ್ನ ಹೆಂಡ್ತಿಗೆ ಅಧಿಕಾರ ಸಿಕ್ಕಿಲ್ಲ ಅಂತಾ ದಿನಾಲೂ ರಾಜಣ್ಣರಿಗೂ ಬೈಯುತ್ತಾರೆ. ಪರಮೇಶ್ವರ್ಗೂ ಬೈಯುತ್ತಾರೆ. ನಿನ್ನ ಹೆಂಡ್ತಿಯನ್ನು ಅಧ್ಯಕ್ಷೆಯನ್ನಾಗಿ ಮಾಡ್ತೀನಿ ಅಂತ ರಾಜಣ್ಣ ಅಥವಾ ಪರಮೇಶ್ವರ್ ಏನಾದರೂ ಮಾತು ಕೊಟ್ಟಿದ್ರಾ?. ದಲಿತರೊಬ್ಬರನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಇವರಿಗೆ ತಡ್ಕೊಳೋಕೆ ಆಗ್ತಿಲ್ಲ. ರಾಜೇಂದ್ರ ಅವರನ್ನು ಎಂಎಲ್ಸಿ ಮಾಡಿಸಿದ್ದು ನಾನು ಅಂತಾನೆ. ಯಾರನ್ನು ಗೆಲ್ಸಿದ್ಯಪ್ಪಾ ನೀನು?. ನಿನ್ನ ಎಂಎಲ್ಎ ಚುನಾವಣೆಗೆ ನಾವು ಬಂದು ಓಡಾಡಿದ್ವಿ ಗೊತ್ತಾ? ಎಂದು ಹೇಳಿದ್ದಾರೆ.
ಅತ್ತ ಮಾಜಿ ಸಚಿವ ಮಾಧುಸ್ವಾಮಿ ವಿರುದ್ಧವೂ ಏಕವಚನದಲ್ಲಿ ದಾಳಿ ನಡೆಸಿದ ರಾಜೇಂದ್ರ ರಾಜಣ್ಣ, ತುಮುಲ್ಗೆ ನಾಮಿನಿ ಸದಸ್ಯರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಮಾಧುಸ್ವಾಮಿ ನಾಲಾಯಕ್ ಎಂಬ ಪದ ಪ್ರಯೋಗ ಮಾಡಿದ್ದಾರೆ. ಏನಪ್ಪಾ ನೀನು ನಾಲಾಯಕ್ ಎಂಬ ಮಾತನ್ನು ಬಳಸಿದ್ಯಲ್ಲಪ್ಪಾ. ನೀನ್ ಏನಪ್ಪಾ. ಬಹಳ ಬುದ್ದಿವಂತ ಎಂದು ಹೇಳಬೇಕಾ ನಿಮ್ಮನ್ನು. ನಮಗೂ ಮಾತಾಡೋಕೆ ಬರುತ್ತೆ. ಆದರೆ ಹಿರಿಯರು ಅಂಥಾ ಸುಮ್ಮನಿರುತ್ತೇವೆ ಎಂದರು.
ನಿಮ್ಮ ಪಕ್ಷದವರೇ ನಾಮಿನಿ ಸದಸ್ಯನ ಅಧ್ಯಕ್ಷರನ್ನಾಗಿ ಮಾಡಿದ್ರಲ್ಲಾ. ನಿಮ್ಮ ಈ ದುರಹಂಕಾರಕ್ಕೇ ನೀವು ಎಂಎಲ್ಎ ಚುನಾವಣೆಯಲ್ಲಿ ಸೋತಿದ್ದು. ನಿಮ್ಮ ದುರಹಂಕಾರದಿಂದ ಜನಗಳು ಬೇಸತ್ತಿದ್ರು. ಹಾಗಾಗಿ ಜನರೇ ಸೋಲಿಸಿದ್ರು ಎಂದು ಮಾಧುಸ್ವಾಮಿ ವಿರುದ್ದ ರಾಜೇಂದ್ರ ರಾಜಣ್ಣ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ತುಮುಲ್ ಚುನಾವಣೆ ಫಲಿತಾಂಶ ಪ್ರಕಟ; ಮಾಧುಸ್ವಾಮಿ ಬೆಂಬಲಿಗ ಅಭ್ಯರ್ಥಿ ಭರ್ಜರಿ ಜಯ - TUMUL ELECTION RESULT