ಬೆಂಗಳೂರು: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಒಬ್ಬರ ಬ್ಲ್ಯಾಕ್ಮೇಲ್ ಕಿರುಕುಳಕ್ಕೆ ಜೀವವೊಂದು ಬಲಿಯಾಗಿರುವ ಅರೋಪದ ದುರ್ಘಟನೆ ಬನ್ನೇರುಘಟ್ಟ ರಸ್ತೆಯ ಕೋಳಿ ಫಾರಂ ಗೇಟ್ ಬಳಿ ಇರುವ ವೈಟ್ ಹೌಸ್ ಲೇಔಟ್ನಲ್ಲಿ ಜರುಗಿದೆ.
ಮೃತ ಮಧನ್ ಮನೆಯವರು ಮಾಡಿರುವ ಆರೋಪ ಹೀಗಿದೆ: ’’ಪಿಳ್ಳಗಾನಹಳ್ಳಿ ಗ್ರಾಮದ ಮ್ಯಾರೇಜ್ ಮ್ಯಾನೇಜ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಮಧನ್ ಎಂಬಾತರಿಗೆ ಸ್ನೇಹಿತ ಪುನೀತ್ ಮೂಲಕ ಓರ್ವ ಸೋಷಿಯಲ್ ಮೀಡಿಯಾ ಸ್ಟಾರ್ನ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿದೆ. ಆಕೆ ತಾನು ವಾಸವಾಗಿದ್ದ ಮನೆಗೆ ಮಧನ್ ಅವರನ್ನು ಕರೆಸಿಕೊಂಡು ಆಗಾಗ್ಗೆ ಪ್ರೀತಿ ಪ್ರೇಮದ ನಾಟಕವಾಡಿ ಮಧನ್ನಿಂದ ಹಣ ವಸೂಲಿ ಮಾಡುತ್ತಿದ್ದಾರೆ‘‘ ಎಂದು ಮಧನ್ ಮನೆಯವರು ಆರೋಪಿಸಿದ್ದಾರೆ.
ಹನಿ ಟ್ರ್ಯಾಪ್ ರೀತಿಯ ಆರೋಪ: ಇದೇ ರೀತಿ ಹಲವು ಹುಡುಗರೊಂದಿಗೆ ಈ ಯುವತಿ 'ವರ್ಧಿನಿ ಎಲ್ಲಾರ್ ಮಟ್' ಎಂಬ ಫೇಕ್ ಹೆಸರಿನಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಚಾಟಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಓಡಾಡುತ್ತಿದೆ. ಕೆಲ ಹುಡುಗರಿಗೆ ಲವ್ ಯು ಎಂದು ಹೇಳಿ, ನಂತರ ಮನೆಗೆ ಕರೆಸಿಕೊಂಡು ಹನಿ ಟ್ರ್ಯಾಪ್ ರೀತಿ ಹಣ ಸುಲಿಗೆ ಮಾಡಿರುವ ಆರೋಪ ಪ್ರಕರಣಗಳೂ ಕೇಳಿ ಬರುತ್ತಿವೆ.
ಎಂದಿನಂತೆ ನಿನ್ನೆ ಮಧ್ಯಾಹ್ನ ಮಧನ್ ಅವರನ್ನು ಆಕೆಯ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾರೆ. ನಂತರ, ಏನೋ ಜಗಳ ನಡೆದಿದೆ. ಮಧನ್ಗೆ ನನ್ನನ್ನು ಮದುವೆ ಆಗು, ಇಲ್ಲ ಹಣ ಕೊಡು ಎಂದು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನ್ನ ಸ್ನೇಹಿತರಿಗೆ ಮಧನ್ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ. ಆನಂತರ ಆತ ನೆಲದಲ್ಲಿ ಶವವಾಗಿ ಮಲಗಿರುವ ರೀತಿಯಲ್ಲಿ ಪತ್ತೆಯಾಗಿದ್ದು, ಆಕೆ ನಾನು ವಾಶ್ ರೂಂನಲ್ಲಿದ್ದೆ. ಆತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಹಗ್ಗ ಬಿಚ್ಚಿ ಮಲಗಿಸಿದ್ದೇನೆ ಎಂದು ಮಧನ್ ತಂದೆ ತಾಯಿಗೆ ತಿಳಿಸಿದ್ದಾರೆ.
ಹುಳಿಮಾವು ಪೊಲೀಸರಿಂದ ಪರಿಶೀಲನೆ, ತನಿಖೆ: ಹುಳಿಮಾವು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅವರು ಯಾರನ್ನಾದರೂ ಕರೆಸಿ ನೇಣುಹಾಕಿ ಮಧನ್ನನ್ನು ಕೊಲ್ಲಿಸಿರುವ ಸಾಧ್ಯತೆ ಇದೆ ಎಂದು ಮಧನ್ ತಂದೆ ತಾಯಿ ಶಂಕೆ ವ್ಯಕ್ತಪಡಿಸಿದ್ದಾರೆ.