ಬಂಟ್ವಾಳ (ದಕ್ಷಿಣ ಕನ್ನಡ) : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಬಂದು ಸುಮಾರು 30 ಲಕ್ಷ ರೂ. ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಕೊಡಂಗಲ್ಲೂರು ಪೊಲೀಸ್ ಠಾಣೆ ಎಎಸ್ಐ ಸೇರಿದಂತೆ ಇನ್ನೂ ನಾಲ್ಕು ಮಂದಿ ಆರೋಪಿಗಳನ್ನು ವಿಟ್ಲ ಪೊಲೀಸ್ ಠಾಣೆ ವಿಶೇಷ ತನಿಖಾ ತಂಡ ಬಂಧಿಸಿದೆ ಎಂದು ಎಸ್ಪಿ ಯತೀಶ್ ಎನ್. ತಿಳಿಸಿದ್ದಾರೆ.
ಕೊಡಂಗಲ್ಲೂರು ಪೊಲೀಸ್ ಠಾಣೆ ಎಎಸ್ಐ ಶಫೀರ್ ಬಾಬು (48), ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜಿದ್ದೀನ್ (37), ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್ (38) ಹಾಗೂ ಮಂಗಳೂರು ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್ (27) ಎಂಬವರು ಇದೀಗ ಬಂಧಿತ ನಾಲ್ವರು ಆರೋಪಿಗಳಾಗಿದ್ದಾರೆ. ತನಿಖಾ ತಂಡವು ಈಗಾಗಲೇ ಕೇರಳ ಕೊಲ್ಲಂ ನಿವಾಸಿಗಳಾದ ಅನಿಲ್ ಫರ್ನಾಂಡೀಸ್ (49), ಸಚ್ಚಿನ್ ಟಿ.ಎಸ್. (29), ಹಾಗೂ ಶಬಿನ್ ಎಸ್. (27) ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿರಿಸಿದೆ. ಪ್ರಕರಣ ಸಂಬಂಧ ಈವರೆಗೆ ಎಲ್ಲ 7 ಮಂದಿ ಆರೋಪಿಗಳನ್ನು ಬಂಧಿಸಿದಂತಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ದರೋಡೆ ಕೃತ್ಯದ ಸೂತ್ರದಾರ ಕೇರಳದ ಎಎಸ್ಐ ಶಫೀರ್ ಎಂದು ತಿಳಿದು ಬಂದಿದೆ. ತ್ರಿಶೂರ್ ಜಿಲ್ಲಾ ಎಸ್ಪಿಯ ಅನುಮತಿಯೊಂದಿಗೆ ಶನಿವಾರ ಮಧ್ಯಾಹ್ನ ಪೊಲೀಸ್ ಕ್ವಾರ್ಟರ್ಸ್ನಿಂದ ಆರೋಪಿ ಶಫೀರ್ ಬಾಬುನನ್ನು ಬಂಧಿಸಲಾಗಿದೆ. ಬಂಧಿತರನ್ನು ವಿಟ್ಲ ಪೊಲೀಸ್ ಠಾಣೆಗೆ ಕರೆದು ತರಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಕೃತ್ಯಕ್ಕೆ ಮನೆಯ ಮಾಹಿತಿ ನೀಡಿದ್ದ ಸ್ಥಳೀಯ ಆರೋಪಿ ಕೊಳ್ನಾಡು ನಿವಾಸಿ ಸಿರಾಜುದ್ದೀನ್ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಯಿತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಮೊಹಮ್ಮದ್ ಇಕ್ಬಾಲ್ ಹಾಗೂ ಮೊಹಮ್ಮದ್ ಅನ್ಸಾರ್ ಎಂಬವರನ್ನು ಬಂಧಿಸಲಾಯಿತು. ಆ ಬಳಿಕ, ಕೇರಳದ ಎಎಸ್ಐ ಶಫೀರ್ ಬಾಬುನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಎಸ್ಪಿ ಯತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ವ್ಯಾಪ್ತಿಯು ಅಪರಾಧ ಕೃತ್ಯಗಳ ತನಿಖೆಯಲ್ಲಿ ಪರಿಣಿತರಾದ ಅಧಿಕಾರಿ ಹಾಗೂ ಸಿಬ್ಬಂದಿಯ ನಾಲ್ಕು ತಂಡಗಳು ತನಿಖೆಯಲ್ಲಿ ಕಾರ್ಯಾಚರಣೆ ನಡೆಸಿವೆ.
ಏನಿದು ಘಟನೆ?: ಜನವರಿ 3ರಂದು ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಸಮೀಪದ ಬೋಳಂತೂರು ನಾರ್ಶ ಎಂಬಲ್ಲಿ, ಸಿಂಗಾರಿ ಬೀಡಿ ಕಂಪೆನಿಯ ಮಾಲೀಕ ಎಂ.ಸುಲೈಮಾನ್ ಅವರ ಮನೆಗೆ ತಮಿಳುನಾಡು ರಿಜಿಸ್ಟ್ರೇಶನ್ ಹೊಂದಿರುವ ಕಾರಿನಲ್ಲಿ ಆಗಮಿಸಿದ 6 ಮಂದಿಯ ತಂಡವೊಂದು ಇ.ಡಿ ದಾಳಿ ನಡೆಸಿದಂತೆ ನಟಿಸಿತ್ತು. ತಾವು ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಎಂದು ನಂಬಿಸಿ, ಸುಮಾರು ಎರಡೂವರೆ ಗಂಟೆವರೆಗೆ ತನಿಖೆ ನಡೆಸಿದ ನಾಟಕ ಮಾಡಿ, ಮನೆಯಲ್ಲಿದ್ದ ಸುಮಾರು 30 ಲಕ್ಷ ರೂ.ಗಳಷ್ಟು ಹಣವನ್ನು ದೋಚಿಕೊಂಡು ಪರಾರಿಯಾಗಿತ್ತು.
ದರೋಡೆಕೋರರು ಕಿತ್ತುಕೊಂಡು ಹೋಗಿದ್ದ ಮನೆಯವರ ಮೊಬೈಲ್ ಫೋನ್ಗಳು ಮನೆಯ ತಳ ಅಂತಸ್ತಿನ ರ್ಯಾಕ್ನಲ್ಲಿ ಪತ್ತೆಯಾಗಿತ್ತು. ಈ ದರೋಡೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಉದ್ಯಮಿ ಸುಲೈಮಾನ್ ಅವರ ಪುತ್ರ ಇಕ್ಬಾಲ್ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಬಂಟ್ವಾಳ: ಉದ್ಯಮಿ ಮನೆಗೆ ನಕಲಿ ಇಡಿ ರೇಡ್: 30 ಲಕ್ಷ ರೂ. ಸುಲಿಗೆ!