ಬೆಂಗಳೂರು: ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ, ಅವರ ಪುತ್ರ ಚೇತನ್ ಗೌಡ, ಆಪ್ ಮುಖಂಡ ಬ್ರಿಜೇಶ್ ಕಾಳಪ್ಪ ಸೇರಿದಂತೆ ಕೆಲ ಮುಖಂಡರು ತಮ್ಮ ಬೆಂಬಲಿಗರ ಸಮೇತ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಮ್ಮುಖದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ. ಕೆ. ಶಿವಕುಮಾರ್, ''ಚುನಾವಣೆ ಬಹಳ ದೂರ ಇದೆ. ಶಿವರಾಮೇಗೌಡ ಪಕ್ಷ ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು. ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ತೊರೆದು ಆಪ್ ಸೇರ್ಪಡೆಯಾಗಿದ್ದರು. ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ'' ಎಂದರು.
ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ @DKShivakumar ಅವರ ಸಮ್ಮುಖದಲ್ಲಿ ಮಾಜಿ ಸಚಿವ, ಮಾಜಿ ಸಂಸದ, ಬಿಜೆಪಿ ಮುಖಂಡರಾದ ಎಲ್.ಆರ್ ಶಿವರಾಮೇಗೌಡ ಹಾಗೂ ಅವರ ಪುತ್ರ ಚೇತನ್ ಗೌಡ, AAP ಮುಖಂಡರಾದ ಬ್ರಿಜೇಶ್ ಕಾಳಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ… pic.twitter.com/OoDFh8CyWg
— Karnataka Congress (@INCKarnataka) February 16, 2025
ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ : ''ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇನೆ. ನ್ಯಾಯಾಲಯದ ಸಲಹೆ, ಸೂಚನೆಗೆ ಕಾಯುತ್ತಿದ್ದೇವೆ. ಬೃಹತ್ ಬೆಂಗಳೂರು ಚುನಾವಣೆಗೂ ತಯಾರಿ ನಡೆಸಿದ್ದೇವೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಅದಕ್ಕೆ ನಾವೂ ತಯಾರಿ ಮಾಡಿಕೊಳ್ಳುತ್ತಿದ್ದೇವೆ'' ಎಂದು ತಿಳಿಸಿದರು.
''ಪಕ್ಷಕ್ಕೆ ಬರುವವರ ದೊಡ್ಡ ಪಟ್ಟಿ ಇದೆ. ಸ್ಥಳೀಯ ಜನರ ಅಭಿಪ್ರಾಯ ಕೇಳಬೇಕಿದೆ. 15 ದಿನ, ತಿಂಗಳಿಗೊಮ್ಮೆ ಪಕ್ಷ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಹಾಲಿ ಶಾಸಕರ ಪಕ್ಷ ಸೇರ್ಪಡೆ ಬಗ್ಗೆ ಬಹಿರಂಗಪಡಿಸಲಾಗದು. ನಿಮ್ಮನ್ನು ಬಿಟ್ಟು ಏನೂ ಮಾಡಲ್ಲ'' ಡಿಕೆಶಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ದೇವೇಗೌಡರು ಬಿಜೆಪಿ, ಮೋದಿಯ ಚಿಯರ್ ಲೀಡರ್ನಂತೆ ವರ್ತಿಸುತ್ತಿದ್ದಾರೆ: ಸಿದ್ದರಾಮಯ್ಯ
''ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಗೆ ಸಮಿತಿ ರಚನೆ ಮಾಡುತ್ತಿದ್ದೇನೆ. ಮಾರ್ಚ್ ತಿಂಗಳೊಳಗೆ ಪ್ರವಾಸ ಮಾಡಿ, ಎಲ್ಲೆಲ್ಲಿ ಸಿದ್ಧತೆ, ಹೊಂದಾಣಿಕೆ ಹಾಗೂ ಮೀಸಲಾತಿ ಹಂಚಿಕೆ ಬಗ್ಗೆ ವರದಿ ಸಲ್ಲಿಸಲು ಜವಾಬ್ದಾರಿ ಹಂಚುತ್ತಿದ್ದೇನೆ. ಕಾಂಗ್ರೆಸ್ ಕಚೇರಿ ವಿಚಾರವಾಗಿ 104 ಕಚೇರಿ ಕಟ್ಟಲು ಮುಂದೆ ಬಂದಿದ್ದಾರೆ. ಕಟ್ಟಡ ನಿರ್ಮಾಣ ಕಾಮಗಾರಿಯಲ್ಲೂ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯವರು ವರದಿ ನೀಡುತ್ತಿದ್ದಾರೆ'' ಎಂದರು.
ಗಾಂಧೀಜಿ ನೆನಪಲ್ಲಿ ಪಕ್ಷದ ನೂರು ಕಚೇರಿ : ''ಕಾಂಗ್ರೆಸ್ ಹೆಸರಿನಲ್ಲಿ ಕಚೇರಿ ರಿಜಿಸ್ಟರ್ ಆಗದಿದ್ದರೇ ಭೂಮಿ ಪೂಜೆ ಮಾಡಿಸಲ್ಲ. ಬೆಂಗಳೂರಿನ ಆನಂದರಾವ್ ಸರ್ಕಲ್ ಬಳಿಯ ಕಚೇರಿ ಬಗ್ಗೆ ನಕ್ಷೆ ರೆಡಿಯಾಗಿದೆ. ಮಾರ್ಚ್ 10ರೊಳಗೆ ಎಐಸಿಸಿ ನಾಯಕರು ದಿನಾಂಕ ನೀಡಿದರೆ ಫೌಂಡೇಶನ್ ಹಾಕುತ್ತೇವೆ. ಗಾಂಧೀಜಿಯವರ ನೆನಪಿನಲ್ಲಿ ಪಕ್ಷದ ನೂರು ಕಚೇರಿಗಳನ್ನು ಕಟ್ಟುವ ನಿರ್ಧಾರ ಮಾಡಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದರು.
ಇದನ್ನೂ ಓದಿ: 'ಸಿದ್ದರಾಮಯ್ಯ ನಮ್ಮ ನಾಯಕ, ಸ್ಥಳೀಯ ಮಟ್ಟದಿಂದ ಲೋಕಸಭಾ ಚುನಾವಣೆವರೆಗೂ ಅವರು ಬೇಕು'