ಕಲಬುರಗಿ: ರಣ ಬಿಸಿಲು ಜನರನ್ನು ಅಷ್ಟೇ ಅಲ್ಲ ಜಾನುವಾರುಗಳನ್ನೂ ಹೈರಾಣಾಗಿಸಿದೆ. ಕೆಂಡದಂತಹ ಬಿಸಿಲಿಗೆ ಶೂ ಚಪ್ಪಲಿ ಧರಿಸಿ ಜನರೇ ಹೊರಬರಲು ಹಿಂದೇಟು ಹಾಕ್ತಿದ್ದಾರೆ. ಹೀಗಿರುವಾಗ ಪ್ರಾಣಿಗಳ ಪರಿಸ್ಥಿತಿ ಹೇಳ ತೀರದು. ಅದರಲ್ಲೂ ಕಲಬುರಗಿಯ ತಾಪಮಾನ ಏರಿಕೆಯಲ್ಲಿ ಏಷ್ಯಾದ 9ನೇ ಹೆಚ್ಚು ತಾಪಮಾನ ಹೊಂದಿರುವ ನಗರವಾಗಿ ಹೊರಹೊಮ್ಮಿದೆ. ಹೌದು, ಪೊಲೀಸ್ ಇಲಾಖೆಯಲ್ಲಿ ಇರುವಂತಹ ಶ್ವಾನಗಳಿಗೂ ಬಿಸಿಲಿನಿಂದ ರಕ್ಷಣೆ ಪಡೆಯಲು ಶೂ ಭಾಗ್ಯ ಒದಗಿಸಲಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಕಲಬುರಗಿ ಜಿಲ್ಲಾ ಶ್ವಾನದಳದ ಶ್ವಾನಗಳಿಗೆ ಶೂ ಹಾಕಲಾಗಿದೆ.

ತಂಡದ ರೀಟಾ, ಜಿಮ್ಮಿ, ರಾಣಿ, ರಿಂಕಿ ಎಂಬ ಶ್ವಾನಗಳಿಗೆ ಶೂ ಕಲ್ಪಿಸಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿನ ಶ್ವಾನಗಳನ್ನು ಬಿಸಿಲಿನಿಂದ ರಕ್ಷಿಸಲು ಶೂ ಹಾಕುವುದರ ಜೊತೆಗೆ ಏರ್ಕೂಲರ್ ವ್ಯವಸ್ಥೆ ಕೂಡ ಮಾಡಲಾಗಿದೆ. ಜೊತೆಗೆ ಬಾಯಾರಿಕೆಯಾದಾಗ ಏಳನೀರು, ಸಾಬುದಾನಿ, ರಾಗಿಗಂಜಿ ಸೇರಿದಂತೆ ಇನ್ನಿತರ ತಣ್ಣನೆ ಪದಾರ್ಥಗಳನ್ನು ನೀಡಲಾಗುತ್ತಿದೆ. ಅಪರಾಧ ಕೃತ್ಯಗಳ ಪತ್ತೆಗಾಗಿ ಶ್ವಾನಗಳು ಹೊರಗಡೆ ಹೋದಾಗ ಪಾದಗಳಿಗೆ ಶಾಖ ತಗುಲಬಾರದು ಎಂದು ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ವಾನಗಳಿಗೆ ಶೂ ಜೊತೆ ಏರ್ಕೂಲರ್: ಈಗಾಗಲೇ ಜಿಲ್ಲೆಯ ಕೆಲವೆಡೆ 44 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಬಿಸಿಲು ದಾಖಲಾಗಿದೆ. ಬಿಸಿಲಿನ ಪ್ರಖರತೆಯಿಂದ ಕಾಲುಗಳಿಗೆ ರಕ್ಷಣೆ ನೀಡುವುದರ ಜೊತೆಗೆ ಶ್ವಾನಗಳ ಕೋಣೆಯಲ್ಲಿ ಏರ್ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕೋಣೆಯಲ್ಲಿ ಎರಡು ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನಿತ್ಯವೂ ರಾಜಕೀಯ ನಾಯಕರ ಪ್ರಚಾರ ಕಾರ್ಯ ಜೋರಾಗಿ ನಡಿಯುತ್ತಿದೆ. ದಿನಪೂರ್ತಿ ಶ್ವಾನಗಳು ಕಾರ್ಯಚರಣೆಯಲ್ಲಿ ಭಾಗಿಯಾಗುತ್ತವೆ. ಹೀಗಾಗಿ ಶ್ವಾನಗಳಿಗೆ ಶೂ ಹಾಕಿದ್ರೆ ಅವು ಸುರಕ್ಷಿತವಾಗಿ ಇರುತ್ತವೆ. ಇತ್ತೀಚೆಗೆ ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಶ್ವಾನಗಳಿಗೆ ಶೂ ಹಾಕಿಯೇ ತಪಾಸಣೆ ಮಾಡಲಾಗಿತ್ತು. ಇನ್ನು ಪ್ರತಿ ಶ್ವಾನಕ್ಕೆ ಪ್ರತಿನಿತ್ಯ 300 ರೂಪಾಯಿನಷ್ಟು ವೆಚ್ಚ ಮಾಡಲಾಗುತ್ತಿದೆ.
ಇದನ್ನೂ ಓದಿ: 90 ನಿಮಿಷದಲ್ಲಿ ಅಪಹರಣಕ್ಕೊಳಗಾದ ಬಾಲಕನ ಪತ್ತೆ ಹಚ್ಚಿದ ಪೊಲೀಸ್ ಶ್ವಾನ 'ಲಿಯೋ'!
ಈ ನಡುವೆ ಜನರು 10 ಗಂಟೆ ನಂತರ ಹೊರಗಡೆ ತಿರುಗಾಡ ಬಾರದು. 10ರಿಂದ ಮಧ್ಯಾಹ್ನ 3 ಗಂಟೆವರೆಗೂ ಮನೆಯಿಂದ ಹೊರಗೆ ಬರದಂತೆ ರಾಜ್ಯ ಮತ್ತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಹಾಗೂ ಸಲಹೆ ನೀಡಿವೆ. ಆಗಾಗ ದೇಹವನ್ನು ತಂಪು ಮಾಡಿಕೊಳ್ಳಲು ಅಥವಾ ಬಿಸಿ ಕಡಿಮೆ ಮಾಡಿಕೊಳ್ಳಲು ನಿಯಮಿತವಾಗಿ ನೀರು ಕುಡಿಯುವಂತೆ ತಜ್ಞರು ಸಲಹೆ ನೀಡಿದ್ದಾರೆ.