ಬೆಳಗಾವಿ: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಲ್ಲಿನ ಅಧಿಕಾರಿಗಳಿಂದ ವಸ್ತುಸ್ಥಿತಿ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿತು.
ಮೊದಲು ಚೋರ್ಲಾ ಘಾಟ್ ಮತ್ತು ಹರತಾಳ ನಾಲಾವನ್ನು ವೀಕ್ಷಣೆ ಮಾಡಿದ್ದ ಕೇಂದ್ರದ ಪ್ರವಾಹ ತಂಡದವರು, ಆ ಬಳಿಕ ಖಾನಾಪುರ ತಾಲೂಕಿನ ಕಣಕುಂಬಿಯ ಅತಿಥಿ ಗೃಹದಲ್ಲಿ ರಾಜ್ಯದ ನೀರಾವರಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು. ಈ ವೇಳೆ ಮ್ಯಾಪ್ ಸಮೇತ ಕಳಸಾ, ಬಂಡೂರಿ ಯೋಜನೆಯ ಬಗ್ಗೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದರು. ನಂತರ ಕಳಸಾ, ಬಂಡೂರಿ ಯೋಜನೆ ಸ್ಥಳಕ್ಕೂ ಕೇಂದ್ರದ ತಂಡ ಭೇಟಿ ನೀಡಿತು.
ಕೇಂದ್ರ ತಂಡ ಪ್ರವಾಹ ಭೇಟಿ ನೀಡಿ ಪರಿಶೀಲಿಸಿದ ನಂತರ ಕರ್ನಾಟಕ ನೀರಾವರಿ ನಿಗಮದ ಎಂಡಿ ರಾಜೇಶ ಅಮ್ಮಿನಭಾವಿ ಮಾಧ್ಯಮದವರ ಜೊತೆಗೆ ಮಾತನಾಡಿದರು. ''ಒಟ್ಟು 8 ಜನರ ತಂಡ ಕೇಂದ್ರದಿಂದ ಬಂದು ಭೇಟಿ ಮಾಡಿದೆ. ಮಹದಾಯಿ ಜಲಾನಯನ ಪ್ರದೇಶದಲ್ಲಿ ಏನೇನು ಆಗುತ್ತಿದೆ ಎಂಬುದರ ಪರಿಶೀಲನೆಗೆ ಈ ತಂಡ ಬಂದಿತ್ತು. ಗೋವಾದಲ್ಲಿ ಎರಡು ದಿನ, ಮಹಾರಾಷ್ಟ್ರದಲ್ಲಿ ಎರಡು ದಿನಗಳ ಭೇಟಿಯ ನಂತರ ನಮ್ಮ ರಾಜ್ಯಕ್ಕೆ ಬಂದಿದೆ. ಇದೊಂದು ಭೇಟಿ ಮಾತ್ರ ಎಂದ ಅವರು, ಕರ್ನಾಟಕದ ಬಣ್ಣ ಬಯಲಾಗಲಿದೆ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಟ್ವೀಟ್ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಕಾಮಗಾರಿಗಳ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ತಂಡ ಇದಲ್ಲ'' ಎಂದು ಉತ್ತರಿಸಿದರು.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಗೂ ಭೇಟಿ ನೀಡಿದ ಕೇಂದ್ರದ ಪ್ರವಾಹ ತಂಡದವರು ಕಳಸಾ, ಬಂಡೂರಿ ಯೋಜನೆ ಬಗ್ಗೆ ಇಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಕೇಂದ್ರ ತಂಡ ಬಂದಿದ್ದು, ನಮ್ಮ ರಾಜ್ಯಕ್ಕೆ ಅನುಕೂಲ ಆಗಲಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಅಣ್ಣ.. ಎಂದು ಕೈ ಮುಗಿದು, ಅಲ್ಲಿಂದ ರಾಜೇಶ ಅಮ್ಮಿನಭಾವಿ ಹೊರಟು ಹೋದರು.
ಬರಮಾಡಿಕೊಂಡ ಪೊಲೀಸರು: ಮಹದಾಯಿ ಜಲಾನಯನ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರದ ಪ್ರವಾಹ ತಂಡವನ್ನು ಜಿಲ್ಲೆಯ ಚೋರ್ಲಾ ಗಡಿಯಲ್ಲಿ ತಂಡವನ್ನು ನೀರಾವರಿ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಬರಮಾಡಿಕೊಂಡರು. ಮಹದಾಯಿ ಹೋರಾಟಗಾರರ ವಿರೋಧದ ನಡುವೆಯೂ ಬೆಳಗಾವಿಗೆ ಈ ತಂಡ ಆಗಮಿಸಿದೆ. ಗೋವಾ ಸರ್ಕಾರದ ಒತ್ತಾಯದ ಮೇರೆಗೆ ಪ್ರವಾಹ ತಂಡವನ್ನು ಕೇಂದ್ರ ಸರ್ಕಾರ ರಚಿಸಿತ್ತು.
ಪ್ರವಾಹ ತಂಡದ ಭೇಟಿಗೂ ಮುನ್ನ ಟ್ವೀಟ್ ಮಾಡಿದ್ದ ಗೋವಾ ಸಿಎಂ ಪ್ರಮೋದ ಸಾವಂತ, ಅನುಮತಿ ಇಲ್ಲದೇ ಕರ್ನಾಟಕ ಮಹದಾಯಿ ಕಾಮಗಾರಿ ಆರಂಭಿಸಿದೆ ಎಂದು ಆರೋಪಿಸಿದ್ದರು.