ETV Bharat / state

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆಗುವುದಿಲ್ಲ; ಜು.14ಕ್ಕೆ ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದ ಸಿದ್ದರಾಮಯ್ಯ - CM Siddaramaiah

author img

By ETV Bharat Karnataka Team

Published : Jul 12, 2024, 7:42 PM IST

ತಮಿಳುನಾಡಿಗೆ ಕಾವೇರಿ ನೀರು ಬಿಟುವ ಕುರಿತು ಚರ್ಚೆ ಮಾಡಲು ಜುಲೈ 14ರಂದು ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ (ETV Bharat)

ಬೆಂಗಳೂರು: "ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆಗುವುದಿಲ್ಲ. ಈ ಕುರಿತು ಚರ್ಚಿಸಲು ಜುಲೈ 14ಕ್ಕೆ ಸರ್ವ ಪಕ್ಷ ಸಭೆ ಕರೆಯಲು ತೀರ್ಮಾನಿಸಿದ್ದೇವೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರು ಬಿಡುಗಡೆ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಹೆಚ್.ಮುನಿಯಪ್ಪ, ಡಾ. ಹೆಚ್.ಸಿ. ಮಹದೇವಪ್ಪ, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಗುರುವಾರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿದೆ. ಸಭೆಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು‌. ಸಹಜ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಜಲಾಶಯಗಳಲ್ಲಿ ಈವರೆಗೆ ಶೇ 28ರಷ್ಟು ನೀರಿನ ಕೊರತೆ ಇದೆ. ಸಿಡಬ್ಲ್ಯುಆರ್​ಸಿ ಮುಂದೆ ಸ್ಪಷ್ಟವಾಗಿ ನಮ್ಮ ರಾಜ್ಯದ ನಿಲುವನ್ನು ಹೇಳಿದ್ದೇವೆ. ಜೊತೆಗೆ ಯಾವುದೇ ತೀರ್ಮಾನ ಮಾಡಕೂಡದು ಎಂದು ಮನವಿ ಮಾಡಿದ್ದೆವು. ಜುಲೈ ಅಂತ್ಯದವರೆಗೆ ಕಾದು ನೋಡಿ ಎಂದು ಮನವಿ ಮಾಡಿದ್ದೆವು. ಆದರೂ ಕಾವೇರಿ ನಿಯಂತ್ರಣ ಸಮಿತಿಯವರು ಜುಲೈ 12 ರಿಂದ ನಿತ್ಯ 1 ಟಿಎಂಸಿ ನೀರು ಬಿಡಲು ಹೇಳಿದ್ದಾರೆ" ಎಂದು ತಿಳಿಸಿದರು.

ಸಿಡಬ್ಲ್ಯುಎಂಎ ಮುಂದೆ ಮೆಲ್ಮನವಿಗೆ ತೀರ್ಮಾನ: "ಈ ಶಿಫಾರಸಿನ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ. ನೀರು ಬಿಡಲು ಆಗುವುದಿಲ್ಲ ಎಂದು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಸರ್ವ ಪಕ್ಷ ಸಭೆ ನಡೆಸಲು ತೀರ್ಮಾನ. ಜುಲೈ 14 ರಂದು ಸಂಜೆ 4 ಗಂಟೆಗೆ ಸಭೆ ಮಾಡಲು ತೀರ್ಮಾನಿಸಿದ್ದೇವೆ" ಎಂದರು.

"ಕಾವೇರಿ ಜಲಾನಯನ ಪ್ರದೇಶದ ಎಲ್ಲ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಮಳೆ ಕೊರತೆ ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯಲು ಮನವಿ ಮಾಡಿದ್ದೇವೆ. ಮಳೆ, ನೀರು, ಕೊರತೆ, ಕೃಷಿಗೆ ನೀರು ಕೊಡಬೇಕಾಗಿರುವುದರಿಂದ ಎಲ್ಲ ಕಾರಣಗಳಿಗೆ ನೀರು ಕೊಡಲು ಆಗುವುದಿಲ್ಲ ಎಂದಿದ್ದೇವೆ" ಎಂದು ತಿಳಿಸಿದರು.

"ಜಲಸಂಪನ್ಮೂಲ ಸಚಿವರು ಸರ್ವ ಪಕ್ಷ ಸಭೆ ಕರೆಯುತ್ತಿದ್ದಾರೆ. ನಾನು ಆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನೀರಿನ ವಿಚಾರವಾಗಿ ಎಲ್ಲ ಪಕ್ಷದವರು ಒಗ್ಗಟ್ಟಾಗಿದ್ದೇವೆ. ಆ ಭಾಗದ ಲೋಕಸಭೆ ಸದಸ್ಯರು, ಕೇಂದ್ರ ಸಚಿವರು, ಶಾಸಕರು, ರಾಜ್ಯ ಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ" ಎಂದರು.

"ತಮಿಳುನಾಡಿನ ಬಿಳಿಗುಂಡ್ಲುವಿಗೆ ಕಬಿನಿ ಜಲಾಶಯದಿಂದ ಒಳ ಹರಿವಿನ ಪ್ರಮಾಣದ 5,000 ಕ್ಯುಸೆಕ್ಸ್ ನೀರು ಬಿಡುತ್ತಿದ್ದೇವೆ. ಕಬಿನಿಯಲ್ಲಿ ಶೇ 96ರಷ್ಟು ನೀರು ತುಂಬಿದೆ. ಅಣೆಕಟ್ಟಿನ ಸುರಕ್ಷತೆ ನಿಟ್ಟಿನಲ್ಲಿ ನೀರು ಬಿಡುಗಡೆ ಮಾಡುತ್ತಿದ್ದೇವೆ. ಮೂರು ದಿನದಿಂದ ಕಬಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ" ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್​ ಮಾತನಾಡಿ, "ಹಾರಂಗಿ ಅಣೆಕಟ್ಟೆಯಲ್ಲಿ ಶೇ73 , ಹೇಮಾವತಿ ಶೇ 56 , ಕೆಆರ್​ಎಸ್​ನಲ್ಲಿ ಶೇ 54 , ಕಬಿನಿ ಜಲಾಶಯದಲ್ಲಿ ಶೇ 96ರಷ್ಟು ನೀರು ಸಂಗ್ರಹವಾಗಿದೆ. ನಾಲ್ಕು ಜಲಾಶಯಗಳಲ್ಲಿ ಶೇ 62ರಷ್ಟು ಸರಾಸರಿ ನೀರು ಇದೆ. 19 ಟಿಎಂಸಿ ನೀರು ಕೊರತೆ ಇದೆ" ಎಂದು ತಿಳಿಸಿದರು.‌

ಮುಡಾ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ, "ಬಿಜೆಪಿ ಪ್ರತಿಭಟನೆ ಸಂಪೂರ್ಣ ವಿಫಲವಾಗಿದೆ" ಎಂದರು.

ರಾಜಕೀಯ ಪಿತೂರಿ: ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅದರ ಬಗ್ಗೆ ಹೆಚ್ಚಿನ ವಿಚಾರ ಗೊತ್ತಿಲ್ಲ. ಈಗಲೇ ಹೇಳಲು ಸಾಧ್ಯವಿಲ್ಲ. ಅವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂಬುದು ಮಾತ್ರ ಗೊತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಬಗ್ಗೆ ತನಿಖೆಗಾಗಿ ಎಸ್​ಐಟಿ ರಚಿಸಿದ್ದೆವು‌. ಅದಾದ ಬಳಿಕ ಇಡಿ ತ‌ನಿಖೆ ನಡೆಸುತ್ತಿದೆ. ಇದು ರಾಜಕೀಯ ಪಿತೂರಿ ಅನ್ನಿಸುತ್ತದೆ" ಎಂದು ಆರೋಪಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ: ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶಗಳ ಪಟ್ಟಿ - CWRC orders

ಬೆಂಗಳೂರು: "ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆಗುವುದಿಲ್ಲ. ಈ ಕುರಿತು ಚರ್ಚಿಸಲು ಜುಲೈ 14ಕ್ಕೆ ಸರ್ವ ಪಕ್ಷ ಸಭೆ ಕರೆಯಲು ತೀರ್ಮಾನಿಸಿದ್ದೇವೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನದಿ ನೀರು ಬಿಡುಗಡೆ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸು ಕುರಿತಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಚಿವರಾದ ಕೆ.ಹೆಚ್.ಮುನಿಯಪ್ಪ, ಡಾ. ಹೆಚ್.ಸಿ. ಮಹದೇವಪ್ಪ, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಬೈರತಿ ಸುರೇಶ್‌, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ, ಕಾರ್ಯದರ್ಶಿ ಕೃಷ್ಣಮೂರ್ತಿ ಕುಲಕರ್ಣಿ ಮತ್ತು ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಗುರುವಾರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿದೆ. ಸಭೆಯಲ್ಲಿ ನಮ್ಮ ರಾಜ್ಯದ ಅಧಿಕಾರಿಗಳು ಭಾಗವಹಿಸಿದ್ದರು‌. ಸಹಜ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಜಲಾಶಯಗಳಲ್ಲಿ ಈವರೆಗೆ ಶೇ 28ರಷ್ಟು ನೀರಿನ ಕೊರತೆ ಇದೆ. ಸಿಡಬ್ಲ್ಯುಆರ್​ಸಿ ಮುಂದೆ ಸ್ಪಷ್ಟವಾಗಿ ನಮ್ಮ ರಾಜ್ಯದ ನಿಲುವನ್ನು ಹೇಳಿದ್ದೇವೆ. ಜೊತೆಗೆ ಯಾವುದೇ ತೀರ್ಮಾನ ಮಾಡಕೂಡದು ಎಂದು ಮನವಿ ಮಾಡಿದ್ದೆವು. ಜುಲೈ ಅಂತ್ಯದವರೆಗೆ ಕಾದು ನೋಡಿ ಎಂದು ಮನವಿ ಮಾಡಿದ್ದೆವು. ಆದರೂ ಕಾವೇರಿ ನಿಯಂತ್ರಣ ಸಮಿತಿಯವರು ಜುಲೈ 12 ರಿಂದ ನಿತ್ಯ 1 ಟಿಎಂಸಿ ನೀರು ಬಿಡಲು ಹೇಳಿದ್ದಾರೆ" ಎಂದು ತಿಳಿಸಿದರು.

ಸಿಡಬ್ಲ್ಯುಎಂಎ ಮುಂದೆ ಮೆಲ್ಮನವಿಗೆ ತೀರ್ಮಾನ: "ಈ ಶಿಫಾರಸಿನ ವಿರುದ್ಧವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ. ನೀರು ಬಿಡಲು ಆಗುವುದಿಲ್ಲ ಎಂದು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ. ಜೊತೆಗೆ ಸರ್ವ ಪಕ್ಷ ಸಭೆ ನಡೆಸಲು ತೀರ್ಮಾನ. ಜುಲೈ 14 ರಂದು ಸಂಜೆ 4 ಗಂಟೆಗೆ ಸಭೆ ಮಾಡಲು ತೀರ್ಮಾನಿಸಿದ್ದೇವೆ" ಎಂದರು.

"ಕಾವೇರಿ ಜಲಾನಯನ ಪ್ರದೇಶದ ಎಲ್ಲ 4 ಜಲಾಶಯಗಳಲ್ಲಿ ಒಟ್ಟು ಕೇವಲ 60 ಟಿಎಂಸಿ ನೀರು ಲಭ್ಯವಿದೆ. ಕೃಷಿ ಚಟುವಟಿಕೆಗಳಿಗೂ ನಾವು ನೀರು ಒದಗಿಸಬೇಕಾಗಿದೆ. ಪರಿಸ್ಥಿತಿ ನೋಡಿ ತೀರ್ಮಾನ ಮಾಡುತ್ತೇವೆ. ಮಳೆ ಕೊರತೆ ಗಮನದಲ್ಲಿರಿಸಿ ಜುಲೈ ಅಂತ್ಯದವರೆಗೆ ಕಾಯಲು ಮನವಿ ಮಾಡಿದ್ದೇವೆ. ಮಳೆ, ನೀರು, ಕೊರತೆ, ಕೃಷಿಗೆ ನೀರು ಕೊಡಬೇಕಾಗಿರುವುದರಿಂದ ಎಲ್ಲ ಕಾರಣಗಳಿಗೆ ನೀರು ಕೊಡಲು ಆಗುವುದಿಲ್ಲ ಎಂದಿದ್ದೇವೆ" ಎಂದು ತಿಳಿಸಿದರು.

"ಜಲಸಂಪನ್ಮೂಲ ಸಚಿವರು ಸರ್ವ ಪಕ್ಷ ಸಭೆ ಕರೆಯುತ್ತಿದ್ದಾರೆ. ನಾನು ಆ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನೀರಿನ ವಿಚಾರವಾಗಿ ಎಲ್ಲ ಪಕ್ಷದವರು ಒಗ್ಗಟ್ಟಾಗಿದ್ದೇವೆ. ಆ ಭಾಗದ ಲೋಕಸಭೆ ಸದಸ್ಯರು, ಕೇಂದ್ರ ಸಚಿವರು, ಶಾಸಕರು, ರಾಜ್ಯ ಸಭೆ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಬಗ್ಗೆ ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ" ಎಂದರು.

"ತಮಿಳುನಾಡಿನ ಬಿಳಿಗುಂಡ್ಲುವಿಗೆ ಕಬಿನಿ ಜಲಾಶಯದಿಂದ ಒಳ ಹರಿವಿನ ಪ್ರಮಾಣದ 5,000 ಕ್ಯುಸೆಕ್ಸ್ ನೀರು ಬಿಡುತ್ತಿದ್ದೇವೆ. ಕಬಿನಿಯಲ್ಲಿ ಶೇ 96ರಷ್ಟು ನೀರು ತುಂಬಿದೆ. ಅಣೆಕಟ್ಟಿನ ಸುರಕ್ಷತೆ ನಿಟ್ಟಿನಲ್ಲಿ ನೀರು ಬಿಡುಗಡೆ ಮಾಡುತ್ತಿದ್ದೇವೆ. ಮೂರು ದಿನದಿಂದ ಕಬಿನಿ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗುತ್ತಿದೆ" ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್​ ಮಾತನಾಡಿ, "ಹಾರಂಗಿ ಅಣೆಕಟ್ಟೆಯಲ್ಲಿ ಶೇ73 , ಹೇಮಾವತಿ ಶೇ 56 , ಕೆಆರ್​ಎಸ್​ನಲ್ಲಿ ಶೇ 54 , ಕಬಿನಿ ಜಲಾಶಯದಲ್ಲಿ ಶೇ 96ರಷ್ಟು ನೀರು ಸಂಗ್ರಹವಾಗಿದೆ. ನಾಲ್ಕು ಜಲಾಶಯಗಳಲ್ಲಿ ಶೇ 62ರಷ್ಟು ಸರಾಸರಿ ನೀರು ಇದೆ. 19 ಟಿಎಂಸಿ ನೀರು ಕೊರತೆ ಇದೆ" ಎಂದು ತಿಳಿಸಿದರು.‌

ಮುಡಾ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಿಎಂ, "ಬಿಜೆಪಿ ಪ್ರತಿಭಟನೆ ಸಂಪೂರ್ಣ ವಿಫಲವಾಗಿದೆ" ಎಂದರು.

ರಾಜಕೀಯ ಪಿತೂರಿ: ನಾಗೇಂದ್ರ ಅವರನ್ನು ಇಡಿ ವಶಕ್ಕೆ ಪಡೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, "ಅದರ ಬಗ್ಗೆ ಹೆಚ್ಚಿನ ವಿಚಾರ ಗೊತ್ತಿಲ್ಲ. ಈಗಲೇ ಹೇಳಲು ಸಾಧ್ಯವಿಲ್ಲ. ಅವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಎಂಬುದು ಮಾತ್ರ ಗೊತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಬಗ್ಗೆ ತನಿಖೆಗಾಗಿ ಎಸ್​ಐಟಿ ರಚಿಸಿದ್ದೆವು‌. ಅದಾದ ಬಳಿಕ ಇಡಿ ತ‌ನಿಖೆ ನಡೆಸುತ್ತಿದೆ. ಇದು ರಾಜಕೀಯ ಪಿತೂರಿ ಅನ್ನಿಸುತ್ತದೆ" ಎಂದು ಆರೋಪಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ: ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶಗಳ ಪಟ್ಟಿ - CWRC orders

ETV Bharat Logo

Copyright © 2024 Ushodaya Enterprises Pvt. Ltd., All Rights Reserved.