ಬೆಳಗಾವಿ: ಲಾರಿ - ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಪತಿ ಎದುರು ಪತ್ನಿ ಸಾವನ್ನಪ್ಪಿರುವ ಮನಕಲಕುವ ಘಟನೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೂಡಲಗಿ ತಾಲೂಕಿನ ಸಂಗನಕೇರಿಯ ಡಾ.ಆಶಾ ಕೋಳಿ (32) ಸ್ಥಳದಲ್ಲೇ ಸಾವನ್ನಪ್ಪಿದ್ದ ವೈದ್ಯೆ. ಆಶಾ ಅವರ ಪತಿ ಡಾ. ಭೀಮಪ್ಪ ಕೋಳಿ, ಚಾಲಕ ಮಹೇಶ ಖೋತ ಗಂಭೀರವಾಗಿ ಗಾಯಗೊಂಡಿದ್ದಾರೆ.
ವೈದ್ಯರು ಧಾರವಾಡದಿಂದ ಬೆಳಗಾವಿ ಕಡೆಗೆ ಬರುವಾಗ ಕಾರು ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೂವಿನಹಡಗಲಿ ಬಳಿ ಬೈಕ್ ಸವಾರರಿಬ್ಬರು ಸಾವು: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಭಾನುವಾರ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೇವಗೊಂಡನಹಳ್ಳಿ ಹುಗಲೂರು ಮಾರ್ಗ ಮಧ್ಯೆ ಬೈಕ್ನಿಂದ ಬಿದ್ದು ದೇವಗೊಂಡನಹಳ್ಳಿಯ ಕಾರ್ತೀಕ (22) ಎಂಬ ಯುವಕ ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಹುಬ್ಬಳ್ಳಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಇಟ್ಟಿಗಿ ಪ್ಲಾಟ್ ಬಳಿ ಕಾರು - ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಟ್ಟಿಗಿ ಗ್ರಾಮದ ಬೈಕ್ ಸವಾರ ಏಕಾಂಬ್ರಗೌಡ (47) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಪನಹಳ್ಳಿಯಲ್ಲಿ ಬೈಕ್ - ಗೂಡ್ಸ್ ಆಟೋ ಮಧ್ಯೆ ಡಿಕ್ಕಿ: ಹರಪನಹಳ್ಳಿ ತಾಲೂಕಿನ ತೆಲಿಗಿ ದುಗ್ಗಾವತಿ ಬಳಿ ಗೂಡ್ಸ್ ಆಟೋ ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ರಾಣೆಬೆನ್ನೂರು ತಾಲೂಕಿನ ಹಾರೊಗೊಪ್ಪ ಗ್ರಾಮದ ಭರಮಪ್ಪ ರಾಮಪ್ಪ ಮಲ್ಲಾಡ (31) ಮೃತಪಟ್ಟವರು. ಹಲುವಾಗಲು ಠಾಣೆಯಲ್ಲಿನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆ ಮುಗಿಸಿ ಬರುವಾಗ ಅಪಘಾತ: ಬಿಎಂಟಿಸಿ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವು
ಇದನ್ನೂ ಓದಿ: ಮಹಾಕುಂಭದಿಂದ ಮರಳುತ್ತಿದ್ದ ಯಾತ್ರಿಗಳಿದ್ದ ಪಿಕಪ್ ವಾಹನ ಅಪಘಾತ; 8 ಸಾವು, 12 ಮಂದಿಗೆ ಗಾಯ