ಚೆನ್ನೈ (ತಮಿಳುನಾಡು): ಹೆಸರಾಂತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಜನಪ್ರಿಯ ಹಿನ್ನೆಲೆ ಗಾಯಕಿ ಭವತಾರಿಣಿ ಗುರುವಾರ ಸಂಜೆ ನಿಧನರಾಗಿದ್ದಾರೆ. 47ರ ಹರೆಯದ ಖ್ಯಾತ ಹಿನ್ನೆಲೆ ಗಾಯಕಿಯು ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಆದ್ರೆ ದುರಾದೃಷ್ಟವಶಾತ್ ಜನವರಿ 25ರ ಸಂಜೆ ಕೊನೆಯುಸಿರೆಳೆದಿದ್ದಾರೆ.
ಯಕೃತ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಭವತಾರಿಣಿ ಅವರು ಶ್ರೀಲಂಕಾದಲ್ಲಿ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಜ. 25ರ ಸಂಜೆ ಅವರು ವಿಧಿವಶರಾಗಿದ್ದಾರೆ. ಶ್ರೀಲಂಕಾದಿಂದ ಅವರ ಪಾರ್ಥಿವ ಶರೀರವನ್ನು ನಿನ್ನೆ (ಜ.26) ಸಂಜೆ ಚೆನ್ನೈಗೆ ತರಲಾಗಿದೆ. ಟಿ. ನಗರದಲ್ಲಿರುವ ಇಳಯರಾಜ ಅವರ ನಿವಾಸದಲ್ಲಿ ಇರಿಸಲಾಗಿದೆ. ಭವತಾರಿಣಿ ಪಾರ್ಥಿವ ಶರೀರಕ್ಕೆ ಹಲವು ರಾಜಕೀಯ ಗಣ್ಯರು, ಚಿತ್ರರಂಗದ ಖ್ಯಾತನಾಮರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂದು ಗುಡಲೂರು ಸಮೀಪದ ಲೋವರ್ ಕ್ಯಾಂಪ್ನಲ್ಲಿರುವ ಇಳಯರಾಜ ಅವರ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಪಾರ್ಥಿವ ಶರೀರವು ಚೆನ್ನೈನಿಂದ ಆಂಬ್ಯುಲೆನ್ಸ್ ಮೂಲಕ ಥೇಣಿ ಜಿಲ್ಲೆಯ ಲೋವರ್ ಕ್ಯಾಂಪ್ನಲ್ಲಿರುವ ಇಳಯರಾಜ ತೋಟದ ಮನೆ ತಲುಪುವ ನಿರೀಕ್ಷೆಯಿದೆ. ಇಳಯರಾಜ ಅವರು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಫಾರ್ಮ್ಹೌಸ್ಗೆ ತೆರಳಿದ್ದಾರೆ.
ಅಲ್ಲದೇ ಇದೇ ತೋಟದ ಮನೆಯಲ್ಲಿ ಇಳಯರಾಜ ಅವರ ಅಮ್ಮ ಚಿನ್ನತಾಯಿ ಹಾಗೂ ಅವರ ಪತ್ನಿ ಜೀವಾ ಅವರ ಅಂತ್ಯಸಂಸ್ಕಾರ ನಡೆದಿತ್ತು. ಇದೀಗ ಮಗಳು ಭವತಾರಿಣಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಲೋವರ್ ಕ್ಯಾಂಪ್ನಲ್ಲಿರುವ ಫಾರ್ಮ್ ಹೌಸ್ಗೆ ಇಳಯರಾಜ ಕುಟುಂಬಸ್ಥರು ಹಾಗೂ ಚಿತ್ರರಂಗದ ಗಣ್ಯರು ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸಂಗೀತ ಮಾಂತ್ರಿಕ ಇಳಯರಾಜರ ಪುತ್ರಿ ಭವತಾರಿಣಿ ಕ್ಯಾನ್ಸರ್ನಿಂದ ನಿಧನ
ಭವತಾರಿಣಿ ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಅವರು ಕೆಲಸ ಮಾಡಿದ್ದಾರೆ. ಮನರಂಜನಾ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ. 'ಭಾರತಿ' ಸಿನಿಮಾದ 'ಮಾಯಿಲ್ ಪೋಲ ಪೊನ್ನು ಒನ್ನು' ಹಾಡಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದರು. ಆದ್ರೆ ಅನಾರೋಗ್ಯ ಹಿನ್ನೆಲೆ ಇಹಲೋಕ ತ್ಯಜಿಸಿದ್ದಾರೆ. ವಿಷಯ ತಿಳಿದ ಅನೇಕ ಅಭಿಮಾನಿಗಳು, ಚಿತ್ರರಂಗದವರಿಗೆ ಅತೀವ ದುಃಖವಾಗಿದೆ. ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇಳಯರಾಜ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: 9 ವರ್ಷಗಳ ಬಳಿಕ ಮತ್ತೆ ಕೈ ಜೋಡಿಸಿದ 'ರಂಗಿತರಂಗ' ಜೋಡಿ: ನಿರೂಪ್-ಸಾಯಿಕುಮಾರ್ ಸಿನಿಮಾ ಶೀರ್ಷಿಕೆ?